Imd Rain Report: ದೇಶದಲ್ಲಿ ಏಕಕಾಲಕ್ಕೆ 2 ಸೈಕ್ಲೋನ್: ಕರ್ನಾಟಕ ಸೇರಿ ಈ ಭಾಗದಲ್ಲಿ ಧಾರಾಕಾರ ಮಳೆ!
Imd Rain Report: ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಮಳೆ ಅಬ್ಬರ ಜೋರಾಗಿದೆ. ಕರ್ನಾಟಕದಲ್ಲಿ ಮಳೆ ಅಬ್ಬರ ಇಳಿಕೆಯಾಗಿದ್ದರೂ ನಾಳೆಯಿಂದ ಧಾರಾಕಾರ ಮಳೆ ಮುಂದುವರಿಯುವ ಸಾಧ್ಯತೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಬುಧವಾರ ಅರೇಬಿಯನ್ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಹೊರಹೊಮ್ಮುತ್ತಿರುವ ಎರಡು ವಾಯುವ್ಯ ವಾಯುಭಾರ ಕುಸಿತ ಕಾರಣಕ್ಕೆ ದೇಶದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ.
ಈಶಾನ್ಯ ಅರೇಬಿಯನ್ ಸಮುದ್ರ ಮತ್ತು ಪಶ್ಚಿಮ-ಮಧ್ಯ ಮತ್ತು ಪಕ್ಕದ ವಾಯುವ್ಯ ಬಂಗಾಳಕೊಲ್ಲಿಯಲ್ಲಿ ಪರ್ಯಾಯ ದ್ವೀಪದ ಎರಡೂ ಬದಿಗಳಲ್ಲಿ ಹೊರಹೊಮ್ಮುತ್ತಿರುವ ಎರಡು ವಾಯುಭಾರ ಕುಸಿತದಿಂದಾಗಿ ದೇಶದಲ್ಲಿ ಮುಂಗಾರು ಇನ್ನಷ್ಟು ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸಾಮಾನ್ಯವಾಗಿ ದೇಶದಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಮುಂಗಾರು ಮಳೆ ಅಂತ್ಯವಾಗುತ್ತಿತ್ತು. ಆದರೆ ಈಗ ಎದುರಾಗಿರುವ ಎರಡು ವಾಯುಭಾರ ಕುಸಿತದ ಕಾರಣಕ್ಕೆ ಅಕ್ಟೋಬರ್ ಅಂತ್ಯದ ವರೆಗೆ ನೈಋತ್ಯ ಮಾನ್ಸೂನ್ ವಿಸ್ತರಣೆ ಆಗುವ ಸಾಧ್ಯತೆ ಇದೆ. ಜಮ್ಮು-ಕಾಶ್ಮೀರ; ಹಿಮಾಚಲ ಪ್ರದೇಶ; ಮತ್ತು ಉತ್ತರಾಖಂಡದಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ವರದಿ ತಿಳಿಸಿದೆ.
ಏಕಕಾಲಕ್ಕೆ ಎರಡು ವಾಯುಭಾರ ಕುಸಿತ ಕಾರಣಕ್ಕೆ ದೆಹಲಿ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಕರ್ನಾಟಕ, ಕೇರಳ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ. ಈಗಾಗಲೇ ದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆ ಆರ್ಭಟ ಜೋರಾಗಿದೆ. ಐಎಂಡಿ ವರದಿಯ ಪ್ರಕಾರ, ನಾಳೆ (ಗುರುವಾರ) ಒಡಿಶಾ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆ ಆಗಲಿದೆ. ಬಿಹಾರ ಹಾಗೂ ಮೇಘಾಲಯ ಪ್ರದೇಶದಲ್ಲೂ ಮಳೆ ಆರ್ಭಟ ಜೋರಾಗಲಿದೆ ಎಂದು ಹೇಳಲಾಗಿದೆ.
ದಕ್ಷಿಣ ಭಾರತದಲ್ಲಿ ಮಳೆ ಆರ್ಭಟ: ಇನ್ನು ಬುಧವಾರ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಿಳುನಾಡಿನಲ್ಲೂ ಧಾರಾಕಾರ ಮಳೆ ಮುಂದುವರಿದಿದೆ. ನಾಳೆಯಿಂದ ಕರ್ನಾಟಕದಲ್ಲೂ ರಣಭೀಕರ ಮಳೆ ಆಗುವ ಸಾಧ್ಯತೆ ಇದೆ ಎಂದು ಐಎಂಡಿ ವರದಿ ತಿಳಿಸಿದೆ.
ಕರಾವಳಿ ಭಾಗದ ಮೀನುಗಾರರಿಗೆ ಎಚ್ಚರಿಕೆ: ಇನ್ನು ದಕ್ಷಿಣ ಭಾರತದ ವಿವಿಧ ರಾಜ್ಯಗಳಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ರಾಜ್ಯಗಳ ಸಮುದ್ರ ಭಾಗದಲ್ಲಿ ಸೆಳೆತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕವು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇನ್ನೂ ಮೂರರಿಂದ ನಾಲ್ಕು ದಿನಗಳ ಕಾಲ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications