Lok Sabha Election: ಬಿಜೆಪಿಯ 400 ಸ್ಥಾನ ಗೆಲ್ಲುವ ಕನಸು: ದಕ್ಷಿಣ ಭಾರತದಲ್ಲಿ ಕಮಲ ಅರಳಿದರೆ ಮಾತ್ರ ನನಸು
ಕರ್ನಾಟಕದಲ್ಲಿ ನಾಳೆ ಎರಡನೇ ಹಂತದ ಮತದಾನ ನಡೆಯಲಿದೆ. ಇನ್ನು ದೇಶದಲ್ಲಿ ಮೂರನೇ ಹಂತದ ಮತದಾನ ನಡೆಯಲಿದೆ. ಈ ಚುನಾವಣೆಗಳ ಮೇಲೆ ರಾಷ್ಟ್ರೀಯ ಪಕ್ಷಗಳು ಚಿತ್ತ ನೆಟ್ಟಿವೆ. ಈಗಾಗಲೇ ಎರಡು ಬಾರಿ ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಬಿಜೆಪಿ ಇನ್ನೊಂದು ಅವಧಿಗೆ ಸರ್ಕಾರ ನಡೆಸುವ ಯೋಜನೆಯನ್ನು ರೂಪಿಸಿಕೊಂಡಿದೆ. ಇದಕ್ಕಾಗಿ 2024ರ ಲೋಕಸಭೆ ಚುನಾವಣೆಗೆ ಬಿಜೆಪಿ 400 ಎಂಬ ಘೋಷಣೆಯನ್ನು ಮಾಡಿದೆ. ಪ್ರಧಾನಿ ಮೋದಿ ತಮ್ಮ ಪ್ರಚಾರದ ಭಾಷದಲ್ಲಿ ಇದನ್ನೇ ಒತ್ತಿ ಹೇಳುತ್ತಿದ್ದಾರೆ.
2019ರಲ್ಲಿ ಬಿಜೆಪಿ ಸಾಧಿಸಿದ ಸಾಧನೆಗಿಂತ ಮಿಗಿಲಾದ ಸಾಧನೆಯನ್ನು ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. 2019 ಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸಲು, ಬಿಜೆಪಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸುವುದು ಮುಖ್ಯವಾಗಿದೆ. ಕರ್ನಾಟಕದಲ್ಲಿ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಸಾಧನೆ ಅಮೋಘ. ಇದೇ ಸಾಧನೆಯನ್ನು ಮಾಡಲು ಬಿಜೆಪಿ ರಣ ತಂತ್ರವನ್ನು ಮಾಡಿಕೊಂಡಿದೆ. ಅಂದಹಾಗೆ ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಬಿಜೆಪಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಮ್ಯಾಜಿಕ್ ನಂಬರ್ ಹತ್ತಿರಕ್ಕೂ ಬರಲು ಸಾಧ್ಯವೇ ಆಗಿರಲಿಲ್ಲ.

2019ರಲ್ಲಿ ಬಿಜೆಪಿ ಕರ್ನಾಟಕದಲ್ಲಿ ಎಂದೂ ಸಾಧಿಸಿದ ಗೆಲುವು ಸಾಧಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳಲ್ಲಿ 25 ಸ್ಥಾನವನ್ನು ಗೆದ್ದು ಕೊಂಡು ಬೀಗಿತ್ತು. ರಾಜ್ಯದಲ್ಲಿ ಬಿಜೆಪಿ ಹೈಕಮಾಂಡ್ಗೆ ಇನ್ನೂ ಹಲವು ಸಮಸ್ಯೆಗಳಿವೆ. ಕರ್ನಾಟಕ ಬಿಜೆಪಿಯ ಹಲವು ನಾಯಕರು ಬಿಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ಅಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅಲ್ಲದೆ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೋಪಗೊಂಡಿದ್ದಾರೆ. ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಸ್ಥಳೀಯ ಸಮಸ್ಯೆಗಳೇ ಟಾರ್ಗೆಟ್
ಬಿಜೆಪಿಯು ತನ್ನ ಚುನಾವಣಾ ಪ್ರಚಾರದಲ್ಲಿ ಮತದಾರರನ್ನು ಸೆಳೆಯಲು ರಾಜ್ಯದ ವಿವಿಧ ಸಮಸ್ಯೆಗಳ ಮೇಲೆ ಗಮನ ಹರಿಸಿದೆ. ಪಕ್ಷದ ಮುಖಂಡರು ಲವ್ ಜಿಹಾದ್ನಿಂದ ಹಿಡಿದು ಕಾಂಗ್ರೆಸ್ ಸರ್ಕಾರದ ವೈಫಲ್ಯದ ಬಗ್ಗೆಯೂ ಮತದಾರರ ಗಮನ ಸೆಳೆಯುತ್ತಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಾಗೂ ವಿವಿಧ ಮುಖಂಡರು ಪ್ರಚಾರದ ಭಾಷಣದ ವೇಳೆ ಸ್ಥಳೀಯ ಸಮಸ್ಯೆಗಳಿಗೆ ಒತ್ತು ನೀಡುತ್ತಿದ್ದಾರೆ. ಇದರಿಂದ ಜನರ ಮನ ಗೆಲ್ಲುವ ಪ್ಲ್ಯಾನ್ ಬಿಜೆಪಿ ಮಾಡಿಕೊಂಡಿದೆ.
ದಕ್ಷಿಣದಲ್ಲಿ ಅರಳುತ್ತಾ ಕಮಲ
ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಹಲವು ಜನಪರ ಯೋಜನೆಗಳನ್ನು ಹಾಕಿಕೊಂಡಿದೆ. ಅಲ್ಲದೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಂತೆ, ಕಮಲ ಪಡೆ ಸಹ ತನ್ನ ಗ್ಯಾರಂಟಿಗಳನ್ನು ಘೋಷಿಸಿದೆ. ಬಿಜೆಪಿ ಈ ಬಾರಿ 400 ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿದೆ. ಬಿಜೆಪಿ ಈ ಆಸೆ ಈಡೇರಬೇಕಾದಲ್ಲಿ ದಕ್ಷಿಣ ಭಾರತದಲ್ಲಿ ಕಮಲ ಅರಳುವುದು ಅನಿವಾರ್ಯ. ಅಂದಹಾಗೆ ದಕ್ಷಿಣದಲ್ಲಿ ಕರ್ನಾಟಕ ಹೊರತು ಪಡಿಸಿ, ಬೇರೆ ಯಾವ ರಾಜ್ಯದಲ್ಲೂ ಬಿಜೆಪಿ ಸಾಧನೆ ಉತ್ತಮವಾಗಿಲ್ಲ.
ಈ ಬಾರಿ ಬಿಜೆಪಿ ತನ್ನ ನೆಲೆಗಳನ್ನು ಹುಡುಕಿಕೊಂಡು ಮತದಾರರನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದೆ. ಅಲ್ಲದೆ ತೆಲಂಗಾಣ, ಆಂಧ್ರ ಹಾಗೂ ತಮಿಳುನಾಡು, ಕೇರಳ ರಾಜ್ಯದಲ್ಲಿ ಅವಶ್ಯಕತೆ ಇದ್ದಲ್ಲಿ ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡ ಪ್ರವೇಶಿಸಿದೆ. ಈ ಬಾರಿ ಶತಾಯ ಗತಾಯ ಹೆಚ್ಚಿನ ಸ್ಥಾನವನ್ನು ದಕ್ಷಿಣದಲ್ಲಿ ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ.
ಇತ್ತೀಚಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೇರಳದಲ್ಲೂ ನಮ್ಮ ಪಕ್ಷ ಖಾತೆಯನ್ನು ತೆರೆಯಲಿದೆ ಎಂದು ಹೇಳಿದ್ದರು. ನಿಜಕ್ಕೂ ಇದು ನಿಜವೇ ಆದಲ್ಲಿ ಬಿಜೆಪಿಗೆ ದಕ್ಷಿಣದಲ್ಲಿ ಬೂಸ್ಟ್ ಸಿಕ್ಕಂತೆ ಆಗುತ್ತದೆ.
ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಸಂಕಷ್ಟ?
ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ಸಿಡಿ ವೈರಲ್ ಆದ ನಂತರ ಕಾಂಗ್ರೆಸ್ ಬಿಜೆಪಿ ಮೇಲೆ ದಾಳಿ ನಡೆಸುತ್ತಿದೆ. ರೇವಣ್ಣ ಸದ್ಯ ಎಸ್ಐಟಿ ಕಸ್ಟಡಿಯಲ್ಲಿದ್ದಾರೆ. ಈ ಪ್ರಕರಣ ನಿಜಕ್ಕೂ ಮೈತ್ರಿ ಪಕ್ಷಗಳಿಗೆ ನುಂಗಲಾರದ ತುತ್ತಾಗಿದೆ. ಡ್ಯಾಮೇಜ್ ಕಂಟ್ರೋಲ್ಗಾಗಿ ಪಕ್ಷದ ಹಿರಿಯ ನಾಯಕರು ಈ ವಿಚಾರದಿಂದ ದೂರ ಉಳಿದಿದ್ದಾರೆ.












Click it and Unblock the Notifications