2 ಕೋಟಿ ಜನ ಪಕೋಡ ಕರಿದರೆ ತಿನ್ನೋರು ಯಾರು: ಮೋದಿಗೆ ಲಾಲೂ ಮಗ ವ್ಯಂಗ್ಯ
ನವದೆಹಲಿ, ಸೆಪ್ಟೆಂಬರ್ 17: "ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಮೋದಿಜೀ ಹೇಳಿದ್ದರು. ಆದರೆ ಈಗ ಪಕೋಡಾ ಕರೀರಿ ಅಂತಿದ್ದಾರೆ. ನಾವು ಸರಿ ಅಂದೆವು. ಆದರೆ ನೀವು ಕೊಟ್ಟ ಮಾತಿನಂತೆ ಹದಿನೈದು ಲಕ್ಷದಲ್ಲಿ ಕನಿಷ್ಠ ಒಂದೆರಡು ಲಕ್ಷ ರುಪಾಯಿಯಾದರೂ ಕೊಡಿ. ಅದರಲ್ಲಿ ಅಂಗಡಿ ತೆಗೆಯುತ್ತೀವಿ ಅಂದರೆ ಅದಕ್ಕೂ ಅವರು ಸಿದ್ಧರಿಲ್ಲ".
-ಲಾಲೂ ಪ್ರಸಾದ್ ಯಾದವ್ ರ ರಾಜಕೀಯ ಉತ್ತರಾಧಿಕಾರಿ ಅಂತಲೇ ಗುರುತಿಸಲಾಗಿರುವ ಇಪ್ಪತ್ತೆಂಟು ವರ್ಷದ ತೇಜಸ್ವಿ ಯಾದವ್ ದೆಹಲಿಯಲ್ಲಿ ಭಾನುವಾರ ಮೋದಿಯವರನ್ನು ಛೇಡಿಸಿದ್ದು ಹೀಗೆ. ಇನ್ನೂ ಮುಂದುವರಿದು, "ಇರಲಿ ಬಿಡಿ, ಪ್ರಶ್ನೆ ಏನೆಂದರೆ ಎರಡು ಕೋಟಿ ಜನ ಪಕೋಡ ಕರಿಯುವುದಕ್ಕೆ ಶುರು ಮಾಡಿಬಿಟ್ಟರೆ ಅದನ್ನು ತಿನ್ನುವವರು ಯಾರು?" ಎಂದು ಪ್ರಶ್ನೆ ಹಾಕಿದ್ದಾರೆ.
ಮೋದಿ ಗೆಲುವಿನ ಹಿಂದಿದ್ದ 'ಆ ವ್ಯಕ್ತಿ' ನಿತೀಶ್ ಕುಮಾರ್ ಜೆಡಿಯು ಸೇರ್ಪಡೆ
ನಿರಂಕುಶತ್ವದಿಂದ ದೇಶವನ್ನು ರಕ್ಷಿಸಬೇಕು ಅಂತಾದರೆ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು. ಅದಕ್ಕಾಗಿ ವಿಪಕ್ಷಗಳೆಲ್ಲ ಒಟ್ಟಾಗಬೇಕು. ಅವರು ಮೀಸಲಾತಿಯನ್ನು ಕೊನೆಗೊಳಿಸಬೇಕು ಎಂದು ಬಯಸಿದ್ದಾರೆ. ಮೋದಿ ಅವರನ್ನು ಮತ್ತೆ ಆರಿಸಿದರೆ ಅದು ಸಾಧ್ಯವಿದೆ. ಭಾರತದಲ್ಲಿ ಮತ್ತೆ ಚುನಾವಣೆಯೇ ಇರುವುದಿಲ್ಲ ಎಂದು ತೇಜಸ್ವಿ ಯಾದವ್ ಕಟು ಶಬ್ದಗಳಿಂದ ಟೀಕಿಸಿದ್ದಾರೆ.
ಬದಲಾಗಿಬಿಟ್ಟರು ನಿತೀಶ್ ಕುಮಾರ್
"ಬಿಜೆಪಿ ಜತೆಗೆ ಸೇರಿದ್ದರ ತಪ್ಪನ್ನು ನಿತೀಶ್ ಜೀ ಅರ್ಥ ಮಾಡಿಕೊಂಡಿದ್ದಾರೆ ಎಂದು ನಾವು ಭಾವಿಸಿ, ಅವರನ್ನು ಬೆಂಬಲಿಸಿದೆವು. ಅವರ ಮೇಲೆ ಯಾವುದೇ ಅನುಮಾನ ಪಡಲಿಲ್ಲ. ಆದರೆ ಆ ನಂತರ ಅವರು ಬದಲಾಗಿಬಿಟ್ಟರು" ಎಂದು ಬಿಹಾರ ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.
ಜನರಿಗಿಂತ ಕುರ್ಚಿಯನ್ನೇ ಹೆಚ್ಚು ಪ್ರೀತಿಸುತ್ತಾರೆ
"ನಿತೀಶ್ ಅವರಿಗೆ ಯಾವುದೇ ವಿಶ್ವಾಸಾರ್ಹತೆ ಇಲ್ಲ. ನಾಲ್ಕು ವರ್ಷದಲ್ಲಿ ನಾಲ್ಕು ಸರಕಾರ ಕೊಡಬಲ್ಲಂಥವರು. ತಮ್ಮ ಕುರ್ಚಿಯನ್ನು ಜನರಿಗಿಂತ ಹೆಚ್ಚು ಪ್ರೀತಿಸುವ ವ್ಯಕ್ತಿ ಅವರು. ಮತ್ತೊಮ್ಮೆ ಅವರ ಜತೆ ನಾವು ಹೇಗೆ ಹೋಗಲು ಸಾಧ್ಯ?" ಎನ್ನುವ ಮೂಲಕ ಆರ್ ಜೆಡಿ ಹಾಗೂ ಜೆಡಿಯು ಮತ್ತೆ ಮೈತ್ರಿ ಮಾಡಿಕೊಳ್ಳುತ್ತವೆ ಎಂಬ ಸುದ್ದಿಗೆ ಕೊನೆ ಹಾಡಿದರು.
ಬಿಜೆಪಿ ಮೇಲೆ ಜೆಡಿಯು ಸಿಟ್ಟು, ಲೋಕಸಭಾ ಸಮರಕ್ಕೂ ಮುನ್ನ ಬಿಕ್ಕಟ್ಟು?!
ನನ್ನ ತಂದೆಯವರಂತೆ ದೊಡ್ಡ ಹೃದಯ ಇಲ್ಲ
"ನನ್ನ ತಂದೆಯ ವಿರುದ್ಧ ಪ್ರಕರಣಗಳನ್ನು ಶುರು ಮಾಡಿದರೂ ನಿತೀಶ್ ರನ್ನು ಬೆಂಬಲಿಸಿದರು. ನನ್ನ ತಂದೆಯವರಂತೆ ದೊಡ್ಡ ಹೃದಯ ನನಗಿಲ್ಲ" ಎಂದು ಹೇಳಿದರು. ಪ್ರಶಾಂತ್ ಕಿಶೋರ್ ಜೆಡಿಯು ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ತೇಜಸ್ವಿ, ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಹೆಚ್ಚು ಹೆಚ್ಚು ಮಂದಿ ರಾಜಕೀಯಕ್ಕೆ ಬರಬೇಕು ಎಂದು ಹೇಳಿದರು.
ಮೊದಲಿಗೆ ಕಾಂಗ್ರೆಸ್, ಆರ್ ಜೆಡಿ ಜತೆಗೆ ದೋಸ್ತಿ ಇತ್ತು
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಭಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ ನಂತರ ತೇಜಸ್ವಿ ಯಾದವ್ ಆರ್ ಜೆಡಿ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಕಳೆದ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು, ಆರ್ ಜೆಡಿ ಹಾಗೂ ಕಾಂಗ್ರೆಸ್ ಸೇರಿ ಮೈತ್ರಿ ಕೂಟ ರಚಿಸಿಕೊಂಡು ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದವು. ಆ ಸರಕಾರದಲ್ಲಿ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿದ್ದರು. ಲಾಲೂ ಕುಟುಂಬದ ಮೇಲೆ ಭ್ರಷ್ಟಾಚಾರ ಆರೋಪ ಬಂದ ನಂತರ ಜೆಡಿಯುನ ನಿತೀಶ್ ಕುಮಾರ್ ಆ ಮೈತ್ರಿ ಕೂಟದಿಂದ ಹೊರಬಂದು, ಬಿಜೆಪಿ ಜತೆಗೆ ಸೇರಿ ಸರಕಾರ ನಡೆಸುತ್ತಿದ್ದಾರೆ.