ಪಾಕ್ ವಶದಲ್ಲಿ ಅಭಿನಂದನ್ ಸುರಕ್ಷಿತವಾಗಿದ್ದಾರೆ, ನಿರಾತಂಕವಾಗಿದ್ದಾರೆ
Recommended Video

ನವದೆಹಲಿ, ಫೆಬ್ರವರಿ 27 : ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ತಮ್ಮನ್ನು ವಶಪಡಿಸಿಕೊಂಡ ಪಾಕಿಸ್ತಾನದ ಸೇನೆಯ ಸುಪರ್ದಿಯಲ್ಲಿ ಸುರಕ್ಷಿತವಾಗಿದ್ದಾರೆ. ನಿರಾತಂಕವಾಗಿದ್ದಾರೆ ಮತ್ತು ಹಸನ್ಮುಖರಾಗಿಯೇ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಅವರನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳಲಾಗುತ್ತಿದ್ದು, ಯಾವುದೇ ಉದ್ವೇಗವಿಲ್ಲದೆ, ಯಾವುದೇ ಗುಟ್ಟು ಬಿಟ್ಟುಕೊಡದೆ, ಅತ್ಯಂತ ಸ್ಪಷ್ಟ ನುಡಿಗಳಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ ಎಂದು ಅವರೇ ಹೇಳಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಡಂತೆ, ಅವರ ಬಲಗಣ್ಣು ಊದಿಕೊಂಡಿದ್ದರೂ, ಮುಖದ ಮೇಲೆ ಅಂತಹ ಗಾಯಗಳು ಕಂಡುಬರುವುದಿಲ್ಲ. ವಿಚಾರಣೆಯ ಸಮಯದಲ್ಲಿ ನೀಡಲಾಗಿದ್ದ ಬಿಸಿ ಚಹಾವನ್ನು ಹೀರಿಕೊಳ್ಳುತ್ತ, ಅತ್ಯಂತ ವಿನಮ್ರತೆಯಿಂದಲೇ ಅಭಿನಂದನ್ ಅವರು ಆಂಗ್ಲ ಭಾಷೆಯಲ್ಲಿ ಉತ್ತರಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಅಭಿನಂದನ್ ಅವರು, ತಾವು ಉಡಾಯಿಸುತ್ತಿದ್ದ ಯುದ್ಧ ವಿಮಾನದ ವಿವರಗಳನ್ನಾಗಲಿ, ಭಾರತದಲ್ಲಿರುವ ತಮ್ಮ ಮೂಲ ಪ್ರದೇಶದ ವಿವರವನ್ನಾಗಲಿ ಬಿಟ್ಟುಕೊಡದೆ, ಕೆಲ ಪ್ರಶ್ನೆಗಳಿಗೆ 'ಕ್ಷಮಿಸಿ, ನಾನು ಬಹಿರಂಗಪಡಿಸುವಂತಿಲ್ಲ' ಎಂದು ಹಸನ್ಮುಖಿಯಾಗಿಯೇ ಹೇಳಿದ್ದಾರೆ. ಅವರ ಮಾತುಗಳ ವಿವರಗಳು ಕೆಳಗಿನಂತಿವೆ.

ವಿಂಗ್ ಕಮಾಂಡರ್ ಅಭಿನಂದನ್
ನಾನು ನನ್ನ ಮಾತುಗಳನ್ನು ಇಲ್ಲಿ ದಾಖಲಿಸಬಯಸುತ್ತೇನೆ. ನಾನು ಭಾರತಕ್ಕೆ ಮರಳಿದರೂ ನನ್ನ ಮಾತುಗಳನ್ನು ಬದಲಿಸುವುದಿಲ್ಲ. ನನ್ನ ದೇಶಕ್ಕೆ ನಾನು ಹೇಳಬಯಸುವುದೇನೆಂದರೆ, ಪಾಕಿಸ್ತಾನದ ಸೇನೆಯ ಅಧಿಕಾರಿಗಳನ್ನು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಜಂಟಲ್ ಮನ್ ನಂತೆ ನಡೆಸಿಕೊಂಡಿದ್ದಾರೆ. ನನ್ನನ್ನು ಜನಜಂಗುಳಿಯಿಂದ, ಸೈನಿಕರಿಂದ ಪಾರು ಮಾಡಿದ್ದಾರೆ. ನನ್ನನ್ನು ನಡೆಸಿಕೊಂಡ ರೀತಿಯಿಂದ ನಾನು ತುಂಬಾ ಸಂತುಷ್ಟನಾಗಿದ್ದೇನೆ.

ಅಭಿನಂದನ್ ಅವರಿಗೆ ಕೇಳಿದ ಪ್ರಶ್ನೆಗಳು
ನೀವು ಯಾವ ಪ್ರದೇಶದಿಂದ ಬಂದಿದ್ದೀರಿ? ನಾನು ಈ ವಿವರವನ್ನು ಬಹಿರಂಗಪಡಿಸುವಂತಿಲ್ಲ. ಆದರೆ, ನಾನು ದಕ್ಷಿಣ ಪ್ರಾಂತ್ಯದವನು.
ನಿಮಗೆ ಮದುವೆಯಾಗಿದೆಯಾ? ಹೌದು ನನಗೆ ಮದುವೆಯಾಗಿದೆ.
ಚಹಾ ಸೇವನೆ ಆನಂದಿಸುತ್ತಿದ್ದೀರೆಂದು ಕಾಣುತ್ತದೆ. ಹೌದು ಚಹಾ ತುಂಬಾ ಚೆನ್ನಾಗಿದೆ. ಧನ್ಯವಾದಗಳು.
ಕೆಲ ನಿಖರ ಪ್ರಶ್ನೆಗಳಿಗೆ ಬರುವುದಾದರೆ, ನೀವು ಯಾವ ವಿಮಾನ ಉಡಾಯಿಸುತ್ತಿದ್ದಿರಿ? ಕ್ಷಮಿಸಿ, ನಾನು ಇದಕ್ಕೆ ಉತ್ತರ ಹೇಳುವಂತಿಲ್ಲ. ಆದರೆ, ಅದರ ಶೇಷ ಭಾಗಗಳಿಂದ ಅದು ಯಾವ ವಿಮಾನವೆಂದು ನಿಮಗೆ ಗೊತ್ತಾಗಿರಬಹುದು.
ನಿಮ್ಮ ಮಿಷನ್ ಏನಾಗಿತ್ತು? ಕ್ಷಮಿಸಿ. ಇದನ್ನು ಕೂಡ ನಾನು ಹೇಳುವಂತಿಲ್ಲ.

ಪೈಲೆಟ್ ನಾಪತ್ತೆ ಬಗ್ಗೆ ಪಾಕಿಸ್ತಾನ ನೀಡಿದ ಉತ್ತರವೇನು?
ಮಿಗ್ 21 ಬೈಸನ್ ಯುದ್ಧವಿಮಾನವನ್ನು ಚಲಾಯಿಸುತ್ತಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ನಾಪತ್ತೆಯಾಗಿರುವುದನ್ನು ಭಾರತದ ವಿದೇಶಾಂಗ ಸಚಿವಾಲಯ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿತ್ತು. ಪಾಕಿಸ್ತಾನದಿಂದ ಖಚಿತಪಡಿಸಿಕೊಂಡ ನಂತರ ಇದರ ಬಗ್ಗೆ ಹೆಚ್ಚಿನ ವಿವರ ನೀಡುವುದಾಗಿ ಹೇಳಿತ್ತು. ಇದೀಗ, ಪಾಕಿಸ್ತಾನವೇ ಅಧಿಕೃತವಾಗಿ ಪ್ರಕಟಿಸಿದ್ದು, ಅಭಿನಂದನ್ ಅವರು ತಮ್ಮ ವಶದಲ್ಲಿದ್ದಾರೆ ಎಂದು ಹೇಳಿದೆ.

ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ದಾಳಿ
ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಎಂಬಾತ ಫೆಬ್ರವರಿ 14ರಂದು ಆತ್ಮಾಹುತಿ ದಾಳಿ ನಡೆಸಿ 40ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಹನ್ನೆರಡು ದಿನಗಳ ನಂತರ ಭಾರತ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಧ್ವಂಸ ಮಾಡಿದೆ. ನಂತರ ಪಾಕಿಸ್ತಾನ ಕೂಡ ಪ್ರತಿದಾಳಿ ನಡೆಸಿದ್ದು, ಪಾಕಿಸ್ತಾನದ ವಿಮಾನಗಳನ್ನು ಹಿಮ್ಮೆಟ್ಟಿಸುವಾಗ ಪಾಕ್ ಗಡಿಯೊಳಗೆ ಪ್ರವೇಶಿಸಿದ್ದ ವಿಮಾನವನ್ನು ಪಾಕ್ ಸೇನೆ ಹೊಡೆದುರುಳಿಸಿದೆ ಮತ್ತು ಅಭಿನಂದನ್ ಅವರನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

ಎರಡೂ ದೇಶಗಳ ನಡುವೆ ಮಾತುಕತೆ
ಎರಡೂ ದೇಶಗಳ ನಡುವೆ ಯುದ್ಧ ಪರಿಸ್ಥಿತಿ ತಲೆದೋರಿದ್ದು, ಯುದ್ಧದ ವಿಚಾರ ಬಿಟ್ಟು ಮಾತುಕತೆಗೆ ಮುಂದಾಗಬೇಕೆಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮನವಿ ಮಾಡಿಕೊಂಡಿದ್ದಾರೆ. ಪುಲ್ವಾಮಾದಲ್ಲಿ ದಾಳಿಯಾದ ನಂತರ ಮತ್ತು ಪಾಕಿಸ್ತಾನ ಮೇಲಿಂದ ಮೇಲೆ ಕದನ ವಿರಾಮ ಉಲ್ಲಂಘಿಸುತ್ತಲೇ ಇರುವುದರಿಂದ ಭಾರತ ಮಾತುಕತೆ ಸುತಾರಾಂ ಒಪ್ಪುತ್ತಿಲ್ಲ. ಪಾಕ್ ಉಗ್ರರಿಗೆ ಮತ್ತು ಅವರನ್ನು ಬೆಂಬಲಿಸುತ್ತಿರುವ ಸೇನೆಗೆ ಅದರದೇ ರೀತಿಯಲ್ಲಿ ಉತ್ತರ ನೀಡಬೇಕೆಂದು ನಿರ್ಧರಿಸಿದೆ.












Click it and Unblock the Notifications