ಮೃತದೇಹ ತರಲು ಹೋದವರು ಸಿಕ್ಕಿಬಿದ್ದು 17 ದಿನಗಳಾಯಿತು!
ಇಟಾನಗರ, ಜೂನ್ 29: ಭಾರತೀಯ ವಾಯುಪಡೆಯ ವಿಮಾನದ ಅಪಘಾತದಲ್ಲಿ ಮೃತಪಟ್ಟ 13 ಯೋಧರ ಮೃತದೇಹಗಳನ್ನು ಹೆಲಿಕಾಪ್ಟರ್ ಮೂಲಕ ಹೊರಕ್ಕೆ ರವಾನಿಸುವಲ್ಲಿ ಯಶಸ್ವಿಯಾದ ರಕ್ಷಣಾ ತಂಡ, ಅಪಾಯಕಾರಿ ಗುಡ್ಡಗಾಡು ಪ್ರದೇಶಕ್ಕೆ ತೆರಳಿ 17 ದಿನಗಳಾದರೂ ಹೊರಗೆ ಬರುವುದು ಸಾಧ್ಯವಾಗಿಲ್ಲ.
12 ಜನರ ರಕ್ಷಣಾ ತಂಡವನ್ನು ಹೆಲಿಕಾಪ್ಟರ್ ಮೂಲಕ ಕರೆತರುವ ಎಲ್ಲ ಪ್ರಯತ್ನಗಳೂ ವಿಫಲವಾಗುತ್ತಿವೆ. ಹೀಗಾಗಿ ಎಲ್ಲರೂ ಮಳೆ ಗಾಳಿ ಚಳಿಯ ನಡುವೆಯೇ ಕಾಲಕಳೆಯಬೇಕಾದ ಪರಿಸ್ಥಿತಿ ಉಂಟಾಗಿದೆ.
12 ಸಾವಿರ ಅಡಿ ಎತ್ತರದಲ್ಲಿರುವ ಅರುಣಾಚಲ ಪ್ರದೇಶದ ಸಿಯಾಂಗ್ ಮತ್ತು ಶಿಯೋಮಿ ಜಿಲ್ಲೆಗಳ ಗಡಿ ಭಾಗದಲ್ಲಿ ಈ ತಂಡ ಸಿಲುಕಿಕೊಂಡಿದೆ. ಎಎನ್ -32 ವಿಮಾನದ ಅಪಘಾತದಲ್ಲಿ ಮೃತಪಟ್ಟವರ ದೇಹಗಳನ್ನು ಪತ್ತೆಹಚ್ಚಿ ಸಾಗಿಸಲು ಬಂದಿದ್ದ ತಂಡ ಇದೇ ಸ್ಥಳದಲ್ಲಿ ಹೆಲಿಕಾಪ್ಟರ್ನಿಂದ ಇಳಿದಿತ್ತು. ವಿಮಾನ ಕಪ್ಪು ಪೆಟ್ಟಿಗೆ ಹಾಗೂ ಎಲ್ಲ 13 ಜನರ ಮೃತದೇಹಗಳನ್ನು ಹುಡುಕಿ ಹೆಲಿಕಾಪ್ಟರ್ ಮೂಲಕ ರವಾನಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ, ಹವಾಮಾನ ವೈಪರೀತ್ಯದ ಕಾರಣ ಅವರಿಗೆ ಮರಳಿ ಬರಲು ಸಾಧ್ಯವಾಗುತ್ತಿಲ್ಲ.
ವಿಪರೀತ ಮಳೆ ಸುರಿಯುತ್ತಿರುವುದರಿಂದ ಈ ಭಾಗಕ್ಕೆ ಹೆಲಿಕಾಪ್ಟರ್ ತೆರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಕ್ಷಣಾ ತಂಡವೇ ಆಪತ್ತಿನಲ್ಲಿ ಸಿಲುಕಿದೆ. ಮಳೆ ಕಡಿಮೆಯಾಗಿ ವಾತಾವರಣ ತಿಳಿಯಾಗುವವರೆಗೂ ತಂಡ ಕಾಯಬೇಕಾಗಿದೆ.

ಹೆಲಿಕಾಪ್ಟರ್ ಇಳಿಸಲು ಅಡ್ಡಿ
ಅಪಘಾತ ನಡೆದ ಸ್ಥಳದಿಂದ ಪರ್ವತಾರೋಹಿಗಳು, ಐಎಎಫ್ ಸಿಬ್ಬಂದಿ ಮತ್ತು ರಕ್ಷಣಾ ಸಿಬ್ಬಂದಿಯನ್ನು ಒಳಗೊಂಡ ತಂಡವನ್ನು ಶೀಘ್ರವೇ ಅಲ್ಲಿಂದ ಹೊರಕ್ಕೆ ಕರೆತರಲು ಐಎಎಫ್ ಹರ ಸಾಹಸ ಪಡುತ್ತಿದೆ. ಈ ಪ್ರದೇಶದಲ್ಲಿ ಮುಂಗಾರು ತೀವ್ರಗೊಂಡಿದ್ದರೂ ಅಪಘಾತದ ಸ್ಥಳಕ್ಕೆ ಅನೇಕ ಹೆಲಿಕಾಪ್ಟರ್ಗಳನ್ನು ರವಾನಿಸಲಾಗುತ್ತಿದೆ. ಆದರೆ, ಹೆಚ್ಚುತ್ತಿರುವ ಮೋಡ ದಟ್ಟಣೆ ಹೆಲಿಕಾಪ್ಟರ್ ಇಳಿಸಲು ಅಡ್ಡಿಯಾಗುತ್ತಿದೆ.

ಪರ್ವತಾರೋಹಣ ಅಪಾಯಕಾರಿ
ಈ ತಂಡಕ್ಕೆ ಆಹಾರ ಸೇರಿದಂತೆ ಇತರೆ ಅಗತ್ಯ ಸಾಮಗ್ರಿಗಳನ್ನು ರವಾನಿಸಲಾಗುತ್ತಿದೆ. ಅವರೊಂದಿಗೆ ಸ್ಯಾಟಲೈಟ್ ಫೋನ್ ಮೂಲಕ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಐಎಎಫ್ನ ವಕ್ತಾರ, ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ಶನಿವಾರ ತಿಳಿಸಿದ್ದಾರೆ.
ಈ ಪರ್ವತದಲ್ಲಿ ಇಳಿದು ಬರುವುದು ಕಷ್ಟಕರ ಮತ್ತು ಅಪಾಯಕಾರಿ. ಇಲ್ಲಿನ ಭೌಗೋಳಿಕ ಸ್ಥಿತಿ ಮತ್ತು ಇಲ್ಲಿ ಬೀಳುತ್ತಿರುವ ವಿಪರೀತ ಮಳೆಯಿಂದ ಅಪಾಯ ಉಂಟಾಗಬಹುದು. ಹೀಗಾಗಿ ಅವರನ್ನು ಹೆಲಿಕಾಪ್ಟರ್ ಮೂಲಕವೇ ತರಬೇಕಿದೆ. ಮಳೆ ಸ್ವಲ್ಪ ನಿಂತು, ಮೋಡ ಕಡಿಮೆಯಾಗಿ ಶೀಘ್ರದಲ್ಲಿಯೇ ಅವರನ್ನು ಹೊರಕ್ಕೆ ತರಲು ಯಶಸ್ವಿಯಾಗಲಿದ್ದೇವೆ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಸುರಕ್ಷಿತವಾಗಿ ಹೊರಬರಲಿ
ಮಳೆ ಆರ್ಭಟ, ಚಳಿಯನ್ನು ತಡೆದುಕೊಳ್ಳುವುದು ಕಷ್ಟವಾದರೂ, ಹೆಲಿಕಾಪ್ಟರ್ ಮೂಲಕ ಇಳಿಸುತ್ತಿರುವ ಆಹಾರ ಹಾಗೂ ಇತರೆ ವಸ್ತುಗಳನ್ನು ಸಂಗ್ರಹಿಸಿ ಬದುಕುತ್ತಿದ್ದಾರೆ. ಅಪ್ರತಿಮ ಸ್ಥೈರ್ಯ ಪ್ರದರ್ಶಿಸುತ್ತಿರುವ ಈ ರಕ್ಷಣಾ ತಂಡ ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಹೊರಗೆ ಬರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರಾರ್ಥಿಸುತ್ತಿದ್ದಾರೆ.

ಅಪಘಾತಕ್ಕೀಡಾಗಿದ್ದ ವಿಮಾನ
ರಷ್ಯಾದಿಂದ ಖರೀದಿಸಿದ ಎಎನ್ 32 ವಿಮಾನವು ಅಸ್ಸಾಂನ ಜೊರ್ಹಾತ್ನಿಂದ ಜೂನ್ 3ರಂದು ಹೊರಟ 33 ನಿಮಿಷಕ್ಕೆ ಸಂಪರ್ಕ ಕಡಿದುಕೊಂಡಿತ್ತು. ಅದು ಅರುಣಾಚಲ ಪ್ರದೇಶದ ಶಿ-ಯೋಮಿ ಜಿಲ್ಲೆಯ ಮೆಚುಕಾ ವಾಯುನೆಲೆಗೆ ತಲುಪಬೇಕಿತ್ತು.

9 ದಿನವಾದರೂ ಪರ್ವತದಲ್ಲಿಯೇ...
ವಿಮಾನ ಅಪಘಾತಕ್ಕೀಡಾಗಿರಬಹುದು ಎಂಬ ಶಂಕೆಯೊಂದಿಗೆ ಹುಡುಕಾಟ ನಡೆಸಿದ ತಂಡಕ್ಕೆ 13 ಜನರ ಮೃತದೇಹ ಪತ್ತೆಯಾಗಿತ್ತು. ಜೂನ್ 19ರಂದು ಆರು ಮೃತದೇಹಗಳನ್ನು ಪತ್ತೆಹಚ್ಚಿ ಕಳುಹಿಸಲಾಗಿತ್ತು. ಮರುದಿನ ಉಳಿದ ಏಳು ಮಂದಿಯ ದೇಹವನ್ನು ರವಾನಿಸಲಾಗಿತ್ತು. ಆದರೆ, ಅದಾಗಿ ಒಂಬತ್ತು ದಿನ ಕಳೆದರೂ ರಕ್ಷಣಾ ತಂಡ ಅಲ್ಲಿಂದ ಹೊರ ಬರಲು ಸಾಧ್ಯವಾಗಿಲ್ಲ.












Click it and Unblock the Notifications