ಬೀದಿರಂಪವಾದ ಲಾಲೂ ಪ್ರಸಾದ್ ಮಗ ತೇಜ್ ಪ್ರತಾಪ್ ಡೈವೋರ್ಸ್ ವೃತ್ತಾಂತ
ನಾಲ್ಕು ಗೋಡೆಯ ಮಧ್ಯೆ ಪರಿಹಾರವಾಗಬೇಕಿದ್ದ ಕೌಟುಂಬಿಕ ಕಲಹವೊಂದು, ಬಿಹಾರದ ಮನೆಮನೆಯಲ್ಲಿ ಮಾತಿನ ವಸ್ತುವಾಗಿದೆ. ಆರೇ ತಿಂಗಳಲ್ಲಿ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಮಗ ತೇಜ್ ಪ್ರತಾಪ್ ಯಾದವ್ ವಿಚ್ಛೇದನಕ್ಕೆ ಅರ್ಜಿ ಹಾಕಿ, ಮನೆಬಿಟ್ಟು ಹೋಗಿದ್ದಾರೆ.
ಮಗನ ಪರಿಸ್ಥಿತಿಯನ್ನು ನೋಡಿ, ಜೈಲು ಹಕ್ಕಿಯಾಗಿರುವ ಮಾಜಿ ರೈಲ್ವೆ ಸಚಿವ, ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ನಿದ್ದೆಯಿಲ್ಲದ ರಾತ್ರಿಯನ್ನು ಕಳೆಯುತ್ತಿದ್ದಾರೆ. ಅತ್ತ, ತಾಯಿ ರಾಬ್ರಿ ದೇವಿ ಚಿಂತೆಯಿಂದ ದಿನದೂಡುತ್ತಿದ್ದಾರೆ. ವೈಯಕ್ತಿಕ ಸಮಸ್ಯೆಯಿಂದ ಬೇಸತ್ತು, ಶಾಂತಿ ಅರಸಿ ತೇಜ್ ಪ್ರತಾಪ್, ಗಂಗಾನದಿ ತಟದಲ್ಲಿ ಕಾಲ ಕಳೆಯುತ್ತಿದ್ದಾರೆ.
ಮಗನ ಚಿಂತೆಯಲ್ಲಿ ಲಾಲೂಗೆ ನಿದ್ದೆ ಬರ್ತಿಲ್ಲ, ಶುಗರ್ ನಿಯಂತ್ರಣ ಇಲ್ಲ
ಪತ್ನಿಗೆ ವಿಚ್ಛೇದನ ನೀಡುವ ವಿಚಾರದಲ್ಲಿ ನನ್ನ ಪರವಾಗಿ ನಿಲ್ಲದಿದ್ದರೆ ಮನೆಗೇ ಬರುವುದಿಲ್ಲ ಎಂದು ಲಾಲೂ ಪುತ್ರ, ಮಾಜಿ ಬಿಹಾರದ ಆರೋಗ್ಯ ಸಚಿವ ತೇಜ್ ಪ್ರತಾಪ್, ಮನೆಯ ಸದಸ್ಯರಿಗೆ ಬೆದರಿಕೆ ಹಾಕಿದ್ದಾರೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ, ವಾಪಸ್ ಮನೆಗೆ ಬಾ ಎನ್ನುವ ತಾಯಿ ರಾಬ್ರಿ ದೇವಿ ಮನವಿಗೂ ತೇಜ್ ಪ್ರತಾಪ್ ಒಪ್ಪುತ್ತಿಲ್ಲ.
ತಂದೆಯ ಬಳಿ ಮಾತಾನಾಡಿಕೊಂಡು ಬರುವುದಾಗಿ ಹೋಗಿದ್ದ ತೇಜ್ ಪ್ರತಾಪ್, ರಾಂಚಿಯಲ್ಲಿರುವ ಬಿರ್ಸಾಮುಂಡಾ ಜೈಲಿನಲ್ಲಿ ಲಾಲೂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಅಲ್ಲಿಂದ ಹೊರಟಿದ್ದರು. ಆನಂತರ, ತಮ್ಮ ಮೊಬೈಲ್ ಅನ್ನು ಸ್ವಿಚ್ ಆಫ್ ಆಡಿ ನಾಪತ್ತೆಯಾಗಿದ್ದರು. ಇದರಿಂದ ತೇಜ್ ಪ್ರತಾಪ್ ಕುಟುಂಬದವರು, ಆರ್ಜೆಡಿ ಕಾರ್ಯಕರ್ತರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಐಶ್ವರ್ಯ ರೈಗೆ ವಿವಾಹ ವಿಚ್ಛೇದನದ ನೋಟಿಸ್ ಕಳಿಸಿದ ತೇಜ್
ತಂದೆಯನ್ನು ಭೇಟಿಯಾದ ತೇಜ್ ಪ್ರತಾಪ್, ವಾರಣಾಸಿಯಲ್ಲಿ ಪ್ರತ್ಯಕ್ಷರಾಗಿದ್ದರು. ಅಲ್ಲಿಂದ ಬೋಧ್ ಗಯಾ ತೆರಳಿದ್ದರು, ಕುಟುಂಬದ ಸದಸ್ಯರಿಗೆ ತಾನಿರುವ ಸ್ಥಳ ಗೊತ್ತಾದ ಹಿನ್ನಲೆಯಲ್ಲಿ, ಬೋಧ್ ಗಯಾದಿಂದ ತೇಜ್ ಪ್ರತಾಪ್ ಹರಿದ್ವಾರಕ್ಕೆ ತೆರಳಿದ್ದಾರೆಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ತೇಜ್ ಪ್ರತಾಪ್ ಗೆ ತಾಯಿಯೇ ದುಷ್ಮನ್, ಏನಿದು ವೃತ್ತಾಂತ..
ಚಂದ್ರಿಕಾ ರೈ ಮಗಳ ಜೊತೆ, ಲಾಲೂ ಮಗನ ತೇಜ್ ಪ್ರತಾಪ್ ಮದುವೆ
ರಾಷ್ಟ್ರೀಯ ಜನತಾದಳದ ಮುಖಂಡ, ಬಿಹಾರದ ಪರ್ಸಾ ಕ್ಷೇತ್ರದ ಶಾಸಕರೂ ಆಗಿರುವ ಚಂದ್ರಿಕಾ ರೈ ಮಗಳು ಐಶ್ವರ್ಯ ಜೊತೆ, ಲಾಲೂ ಮೊದಲ ಮಗ ತೇಜ್ ಪ್ರತಾಪ್ ಮದುವೆ ಧಾಂಧೂಂ ಎಂದು ಆರು ತಿಂಗಳ ಹಿಂದೆ ರಾಜಧಾನಿ ಪಾಟ್ನಾದಲ್ಲಿ ನಡೆದಿತ್ತು. ತಾಯಿ ರಾಬ್ರಿ ದೇವಿ ಒಂದು ವರ್ಷ ವಧುವಿಗಾಗಿ ಹುಡುಕಾಟ ನಡೆಸಿದ್ದರು. ಇದೇ ವರ್ಷ ಮೇ ಹನ್ನೆರಡರಂದು ನಡೆದ ಅದ್ದೂರಿ ಮದುವೆ ಕಾರ್ಯಕ್ರಮದಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಲಾಲೂ ಕೂಡ ಪೆರೋಲ್ ಪಡೆದುಕೊಂಡು ಮಗನ ಮದುವೆಯನ್ನು ನಡೆಸಿಕೊಟ್ಟಿದ್ದರು.
ಮದುವೆಯಾದ ಆರೇ ತಿಂಗಳಲ್ಲಿ ದಂಪತಿಗಳ ನಡುವೆ ವಿರಸ
ಎಂಬಿಎ ಪದವೀಧರೆಯಾಗಿರುವ ಐಶ್ವರ್ಯ ಜೊತೆ ಅದೇನು ಭಿನಾಭಿಪ್ರಾಯವನ್ನು ತೇಜ್ ಪ್ರತಾಪ್ ಹೊಂದಿದ್ದಾರೋ? ನಮ್ಮಿಬ್ಬರ ನಡುವೆ ಬಗೆಹರಿಸಲಾಗದ ಸಮಸ್ಯೆಗಳಿವೆ, ನನ್ನ ಸಮಸ್ಯೆಯನ್ನು ಮದುವೆಗೆ ಮುನ್ನವೇ ತಂದೆ-ತಾಯಿಗೆ ಹೇಳಿದ್ದೆ. ಯಾರೂ ನನ್ನ ಮಾತಿಗೆ ಬೆಲೆಕೊಡಲಿಲ್ಲ. ಈಗ ನಾನು ಪತ್ನಿ ಐಶ್ವರ್ಯಗೆ ಡೈವೋರ್ಸ್ ಕೊಡದೇ ಬೇರೆ ವಿಧಿಯಿಲ್ಲ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ. ಮದುವೆಯಾದ ಆರೇ ತಿಂಗಳಲ್ಲಿ ದಂಪತಿಗಳ ನಡುವೆ ವಿರಸ ಕಾಣಿಸಿಕೊಂಡಿದೆ.
ಐಶ್ವರ್ಯಾ ರೈ ಜತೆ ಲಾಲು ಮಗನ ನಿಶ್ಚಿತಾರ್ಥ!
ಮಗನ ಮಾತು ಒಪ್ಪಲು ತಯಾರಿಲ್ಲದ ತಾಯಿ ರಾಬ್ರಿ ದೇವಿ
ಆದರೆ, ಮಗನ ಮಾತು ಒಪ್ಪಲು ತಯಾರಿಲ್ಲದ ತೇಜ್ ಪ್ರತಾಪ್ ತಾಯಿ ರಾಬ್ರಿ ದೇವಿ, ಸೊಸೆಯ ಪರವಾಗಿ ನಿಂತಿದ್ದಾರೆ. ಜೊತೆಗೆ, ವಿಚ್ಛೇದನಕ್ಕೆ ಲಾಲೂ ಪ್ರಸಾದ್ ಯಾದವ್ ಕೂಡಾ ಸಮ್ಮತಿಸುತ್ತಿಲ್ಲ. ಹೀಗಾಗಿ, ಲಾಲೂ ಕುಟುಂಬದ ಕೌಟುಂಬಿಕ ಸಮಸ್ಯೆ, ದಿನದಿಂದ ದಿನಕ್ಕೆ ಕಗ್ಗಂಟಾಗಿ ಸಾಗುತ್ತಿದೆ. ಮನೆಯಲ್ಲಿ ಶಾಂತಿಗಾಗಿ ಕುಟುಂಬಸ್ಥರು ದೇವರ ಮೊರೆಹೋಗಿದ್ದು, ವಿವಿಧ ಹೋಮ ಹವನಗಳನ್ನು ನಡೆಸುತ್ತಿದ್ದಾರೆ.
ಹರಿದ್ವಾರದಿಂದ ಸ್ಥಳೀಯ ವಾಹಿನಿಯ ಜೊತೆ ಮಾತನಾಡಿದ ತೇಜ್ ಪ್ರತಾಪ್
ಶುಕ್ರವಾರ (ನ 9) ಹರಿದ್ವಾರದಿಂದ ಸ್ಥಳೀಯ ವಾಹಿನಿಯ ಜೊತೆ ಮಾತನಾಡಿದ ತೇಜ್ ಪ್ರತಾಪ್, ಡೈವೋರ್ಸಿಗೆ ಒಪ್ಪಿಗೆ ನೀಡುವ ತನಕ ಮನೆಗೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ. ವಿಚ್ಛೇದನ ನೀಡಬಾರದೆಂದು ಒಂದು ವೇಳೆ ಇನ್ನಷ್ಟು ಒತ್ತಡ ಹಾಕಿದರೆ, ಇನ್ನೆಂದೂ ಮನೆಗೆ ಹೋಗುವುದಿಲ್ಲ ಎಂದು ತೇಜ್ ಪ್ರತಾಪ್ ಹೇಳಿರುವುದು ಮನೆಯವರ ನಿದ್ದೆಗೆಡಿಸಿದೆ. ಮಗ ಡೈವೋರ್ಸ್ ಕೊಡುವುದು ರಾಬ್ರಿದೇವಿಗೆ ಸುತರಾಂ ಒಪ್ಪಿಗೆ ಇಲ್ಲ, ತೇಜ್ ಪ್ರತಾಪ್ ಸಹೋದರ ತೇಜಸ್ವಿ ಯಾದವ್, ಮನೆಗೆ ಬಾ ಎಲ್ಲವನ್ನೂ ಸರಿಮಾಡೋಣ ಎಂದು ಮನವಿ ಮಾಡಿದರೂ ತೇಜ್ ಪ್ರತಾಪ್ ಕೇಳುತ್ತಿಲ್ಲ.
ಲಾಲೂನ ಜೈಲಿಗೆ ಕರೆದೊಯ್ದ 900 ಕೋಟಿ ಮೇವು ಹಗರಣದ ಟೈಮ್ ಲೈನ್
ಲಾಲೂ ಪ್ರಸಾದ್ ಯಾದವ್ ಆರೋಗ್ಯ ಹದೆಗೆಡುತ್ತಿದೆ
ಮನೆಯ ಸಮಸ್ಯೆಯಿಂದ, ಕೈದಿಯಾಗಿ ಚಿಕಿತ್ಸೆ ಪಡೆಯುತ್ತಿರುವ ಲಾಲೂ ಪ್ರಸಾದ್ ಯಾದವ್ ಆರೋಗ್ಯ ಹದೆಗೆಡುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈಗಾಗಲೇ ಹದಿನೈದಕ್ಕೂ ಹೆಚ್ಚು ಮಾತ್ರೆಯನ್ನು ದಿನವೊಂದಕ್ಕೆ ಲಾಲೂ ತೆಗೆದುಕೊಳ್ಳಬೇಕಿದೆ. ಈಗ ಅವರು ತೀವ್ರ ಒತ್ತಡದಲ್ಲಿದ್ದು, ರಾತ್ರಿ ನಿದ್ದೆಯನ್ನೂ ಮಾಡುತ್ತಿಲ್ಲ. ಹೆಚ್ಚುವರಿ ಇನ್ಸುಲಿನ್ ಅನ್ನು ಅವರಿಗೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.