ಗುಜರಾತ್ ನಲ್ಲಿ ತಿಳಿಯಾದ ಮುನಿಸು, ಇಂದು ನಿತಿನ್ ಪಟೇಲ್ ಅಧಿಕಾರ ಸ್ವೀಕಾರ
ಅಹಮದಾಬಾದ್, ಡಿಸೆಂಬರ್ 31: ಗುಜರಾತ್ ಬಿಜೆಪಿ ಸರಕಾರದಲ್ಲಿ ಎದ್ದಿದ್ದ ಭಿನ್ನಮತ ಸ್ವಲ್ಪಮಟ್ಟಿಗೆ ಉಪಶಮನವಾಗಿದೆ. ಮುನಿಸಿಕೊಂಡಿದ್ದ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಇಂದು ತಮಗೆ ನೀಡಿದ್ದ ಖಾತೆಗಳನ್ನು ವಹಿಸಿಕೊಳ್ಳಲು ನಿರ್ಧರಿಸಿದ್ದಾರೆ.
61 ವರ್ಷದ ಪಟೇಲ್ ಸಮುದಾಯದ ಪ್ರಬಲ ನಾಯಕ ನಿತಿನ್ ಪಟೇಲ್ ಬಿಜೆಪಿ ನಾಯಕತ್ವದ ವಿರುದ್ಧ ಅಸಮಧಾನಗೊಂಡಿದ್ದರು. ಅವರು ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾದರೂ ಹಣಕಾಸು, ನಗರಾಭಿವೃದ್ಧಿಯಂಥ ಪ್ರಮುಖ ಖಾತೆಗಳನ್ನು ಅವರಿಂದ ಕಿತ್ತುಕೊಳ್ಳಲಾಗಿತ್ತು. ಇದರಿಂದ ಪಟೇಲ್ ಅಸಮಧಾನಗೊಂಡಿದ್ದರು.
'ಪಕ್ಷ ಮರ್ಯಾದೆ ನೀಡದಿದ್ದರೆ ಬಿಜೆಪಿ ಬಿಟ್ಟು ಬನ್ನಿ. ಜತೆಗೆ 10 ಶಾಸಕರನ್ನೂ ಕರೆ ತನ್ನಿ ಕಾಂಗ್ರೆಸ್ ನಲ್ಲಿ ಉತ್ತಮ ಹುದ್ದೆ ಕೊಡಿಸುತ್ತೇನೆ' ಎಂದು ಹಾರ್ದಿಕ್ ಪಟೇಲ್ ನಿತಿನ್ ಪಟೇಲ್ ಗೆ ಹೇಳಿದ್ದರು. ಹೀಗೆ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಜಗಜ್ಜಾಹೀರಾಗಿತ್ತು.
ಇದೀಗ ಇಂದು ಅಹಮದಾಬಾದ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ನಿತಿನ್ ಪಟೇಲ್, "ನಾನು ಇಂದು ಸಚಿವಾಲಯಕ್ಕೆ ತೆರಳಿ ಖಾತೆಗಳನ್ನು ವಹಿಸಿಕೊಳ್ಳುತ್ತೇನೆ," ಎಂದು ಹೇಳಿದ್ದಾರೆ.
"ನನಗೆ ಸೂಕ್ತ ಇಲಾಖೆಗಳನ್ನು ನೀಡುವುದಾಗಿ ಭರವಸೆ ನೀಡಲಾಗಿದೆ. ನಾನು ಅಮಿತ್ ಶಾ ಜತೆಗೂ ಈ ಸಂಬಂಧ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರ ಭರವಸೆಗೆ ನಾನು ಧನ್ಯವಾದ ಹೇಳುತ್ತೇನೆ," ಎಂದು ನಿತಿನ್ ಪಟೇಲ್ ತಿಳಿಸಿದ್ದಾರೆ.
ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿ ಇರಲಿಲ್ಲ ಎಂಬುದನ್ನು ಸ್ವತಃ ನಿತಿನ್ ಪಟೇಲ್ ಒಪ್ಪಿಕೊಂಡಂತಾಗಿದೆ.ಸದ್ಯಕ್ಕೆ ಎಲ್ಲವೂ ಸರಿಯಾಗಿದ್ದರೂ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಮತ್ಯಾವಾಗ ಭಿನ್ನಮತ ಸ್ಫೋಟಿಸುತ್ತಾ ಗೊತ್ತಿಲ್ಲ.