ಬಿಜೆಪಿ ಏನಾದರೂ ಹೇಳಿಕೊಳ್ಳಲಿ, ನಾನು ಶಿವನ ಭಕ್ತ: ರಾಹುಲ್ ಗಾಂಧಿ
ಅಹ್ಮದಾಬಾದ್, ನವೆಂಬರ್ 13: "ನಾನು ಶಿವನ ಭಕ್ತ. ಬಿಜೆಪಿ ಏನು ಬೇಕಾದರೂ ಹೇಳಿಕೊಳ್ಳಲಿ. ಆದರೂ ನಾನು ಪ್ರಾಮಾಣಿಕನಾಗೇ ಇರ್ತೇನೆ" ಎಂದು ರಾಹುಲ್ ಗಾಂಧಿ ಮಾಧ್ಯಮದವರಿಗೆ ಉತ್ತರಿಸಿದ್ದಾರೆ. ಗುಜರಾತ್ ನಲ್ಲಿ ದೇವಾಲಯಗಳಿಗೆ ಭೇಟಿ ನೀಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಭೂಪೇಂದರ್ ಯಾದವ್, ಇದೆಲ್ಲ ಚುನಾವಣೆ ಗಿಮಿಕ್ ಎಂದಿದ್ದರು.
"ರಾಹುಲ್ ಗಾಂಧಿಗೆ ಚುನಾವಣೆ ಸಮಯದಲ್ಲಿ ದೇವಾಲಯ ನೆನಪಾಗುತ್ತೆ"
"ಕಾಂಗ್ರೆಸ್ ನ ಸ್ಟಾರ್ ಪ್ರಚಾರಕ ರಾಹುಲ್ ಗಾಂಧಿ ದೇವಾಲಯಗಳಿಗೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ಭಾಗವಾದ ಇದು ಒಳ್ಳೆಯದು. ಆದರೆ ಇದು ಯಾವುದೇ ವ್ಯಕ್ತಿಗೆ ಸಹಜವಾಗಿ ಬರಬೇಕು ಮತ್ತು ಚುನಾವಣೆ ವೇಳೆಯಲ್ಲಿ ಮಾತ್ರವಲ್ಲ" ಎಂದಿದ್ದರು.
ಗುಜರಾತ್ ನ ಅಂಬಾಜಿ ದೇಗುಲ ಹಾಗೂ ಅಕ್ಷರಧಾಮಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಇಂಥ ಅಭಿಪ್ರಾಯ ವ್ಯಕ್ತವಾಗಿತ್ತು. ಅಕ್ಷರ ಧಾಮ ದೇವಾಲಯಕ್ಕೆ ಪಟೇಲ್ ಸಮುದಾಯದವರು ನಡೆದುಕೊಳ್ಳುತ್ತಾರೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆ ಸಮುದಾಯದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನಿಸುತ್ತಿದೆ.
ದೇವಾಲಯಕ್ಕೆ ಹೋಗುವವರಿಂದಲೇ ದೌರ್ಜನ್ಯ
ಈ ಹಿಂದೆ ರಾಹುಲ್ ಗಾಂಧಿ ಅವರೇ ನೀಡಿದ್ದ ಹೇಳಿಕೆಯೊಂದು ಚರ್ಚೆಗೆ ಕಾರಣವಾಗಿತ್ತು. "ಯಾರು ದೇವಾಲಯಗಳಿಗೆ ಹೋಗ್ತಾರೋ, ದೇವತೆಗಳ ಪೂಜೆ ಮಾಡುತ್ತಾರೋ, ಮಹಿಳೆಯರನ್ನು ಮಗಳು ಮತ್ತು ತಾಯಿ ಎನ್ನುತ್ತಾರೋ ಅಂಥವರೇ ಬಸ್ಸುಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾರೆ" ಎಂದಿದ್ದರು.
ಚಡ್ಡಿ ಹೇಳಿಕೆ
"ಆರೆಸ್ಸೆಸ್ ಬಿಜೆಪಿಯ ಪ್ರಮುಖ ಸಂಘಟನೆ. ಅದರಲ್ಲಿ ಎಷ್ಟು ಮಹಿಳೆಯರಿದ್ದಾರೆ? ಆರೆಸ್ಸೆಸ್ಸಿನ ಶಾಖೆಯಲ್ಲಿ ಖಾಕಿ ಚಡ್ಡಿಯಲ್ಲಿರುವ ಮಹಿಳೆಯನ್ನು ಎಂದಾದರೂ ನೋಡಿದ್ದೀರಾ? ನಾನಂತೂ ನೋಡಿಲ್ಲ!" ಎಂಬ ಹೇಳಿಕೆ ವಿವಾದವಾಗಿತ್ತು.
ನೆಹರೂ, ಗಾಂಧಿ ಎನ್ ಆರ್ ಐ
ರಾಹುಲ್ ಗಾಂಧಿಯವರು ಹೇಳಬೇಕಾದ ವಿಚಾರ ತಪ್ಪಾಗಿ ಧ್ವನಿಸಿದ್ದೇ ಹೆಚ್ಚು. ಅವರ ಉದ್ದೇಶ ಸರಿಯೇ ಇರಬಹುದು. ಆದರೆ ಅದನ್ನು ದಾಟಿಸುವಲ್ಲಿ ಹಲವು ಸಲ ನಗೆಪಾಟಲಿಗೆ ಗುರಿಯಾಗಿದ್ದಾರೆ. ಗಾಂಧಿ, ಅಂಬೇಡ್ಕರ್, ಪಟೇಲ್, ನೆಹರೂ ಇವರೆಲ್ಲ ಎನ್ ಆರ್ ಐಗಳಾಗಿದ್ದರು ಎಂಬ ಹೇಳಿಕೆ ಕೂಡ ವಿವಾದವಾಗಿತ್ತು.
ಕೇಂದ್ರದ ವಿರುದ್ಧ ಟೀಕೆ
ಆದರೆ, ಈಚೆಗೆ ಕೇಂದ್ರ ಸರಕಾರದ ವಿರುದ್ಧ ಟೀಕೆ ಹಾಗೂ ನೀತಿ-ನಿಯಮದಲ್ಲಿನ ವೈಫಲ್ಯಗಳ ಬಗ್ಗೆಯೇ ಹೆಚ್ಚಿನ ಚರ್ಚೆಯನ್ನು ಅವರು ಆರಂಭಿಸಿದ್ದಾರೆ. ಈ ಹಿಂದಿನಂತೆ ಬರೆದಿಟ್ಟುಕೊಂಡ ಚೀಟಿಯನ್ನು ಓದುವುದನ್ನು ಬಿಟ್ಟಿದ್ದಾರೆ. ಆದರೆ ಕೆಲವೊಮ್ಮೆ ಅವರ ಹೇಳಿಕೆಗಳು ವಿವಾದಕ್ಕಂತೂ ಕಾರಣವಾಗುತ್ತಿವೆ.