ಜಾನುವಾರುಗಳಿಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಈಗ ಹೇಗಿದೆ!?
ಗಾಂಧಿನಗರ, ಅಕ್ಟೋಬರ್ 7: ವಂದೇ ಭಾರತ್ನ ಲೋಹದ ಮುಖದ ಭಾಗವು ಹಾನಿಯಾದ ಕೆಲವೇ ಗಂಟೆಗಳಲ್ಲಿ ದುರಸ್ತಿಯಾಗಿದೆ. ಹೈಸ್ಪೀಡ್ ರೈಲಿನ ಸರ್ಜಿಕಲ್ ಟೀಮ್, ಅದನ್ನು ಸರಿಪಡಿಸಿ ಮತ್ತೆ ಸೇವೆಗೆ ಮರಳುವಂತೆ ಸಿದ್ಧಪಡಿಸಿದೆ. ಕಳೆದ ವಾರವಷ್ಟೇ ಪ್ರಾರಂಭಿಸಲಾದ ಮುಂಬೈ-ಗಾಂಧಿನಗರ ವಂದೇ ಭಾರತ್ ರೈಲು ಗುರುವಾರ ಜಾನುವಾರುಗಳಿಗೆ ಡಿಕ್ಕಿ ಹೊಡೆದಿದ್ದು, ರೈಲಿನ ಮುಖಭಾಗಕ್ಕೆ ಚಿಕ್ಕದಾದ ಹಾನಿಯಾಗಿದೆ.
ಮುಂಬೈ ಸೆಂಟ್ರಲ್ನಿಂದ ಗಾಂಧಿನಗರ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ನ ಕೋನ್ ಅನ್ನು ಮುಂಬೈ ಸೆಂಟ್ರಲ್ನಲ್ಲಿರುವ ಕೋಚಿಂಗ್ ಕೇರ್ ಸೆಂಟರ್ನಲ್ಲಿ ದುರಸ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.
ಎಮ್ಮೆಗೆ ಡಿಕ್ಕಿ ಹೊಡೆದ ವಂದೇ ಭಾರತ್ ಎಕ್ಸ್ಪ್ರೆಸ್; ಮುಂದೇನಾಯ್ತು ಎಮ್ಮೆಯ ಗತಿ, ರೈಲಿನ ಸ್ಥಿತಿ!?
ಗುಜರಾತ್ನ ವತ್ವಾ ಮತ್ತು ಮಣಿನಗರ ನಿಲ್ದಾಣಗಳ ನಡುವೆ ಬೆಳಗ್ಗೆ 11:18 ರ ಸುಮಾರಿಗೆ ಜಾನುವಾರುಗಳ ಹಿಂಡಿಗೆ ರೈಲು ಡಿಕ್ಕಿ ಹೊಡೆದು ರೈಲನ್ನು 20 ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು. ಆದಾಗ್ಯೂ, ಯಾವುದೇ ರೀತಿಯ ಗಂಭೀರವಾದ ಕ್ರಿಯಾತ್ಮಕ ಭಾಗವು ಹಾನಿಗೊಳಗಾಗಿರಲಿಲ್ಲ.
ವಂದೇ ಭಾರತ್ ರೈಲಿನ ದುರಸ್ತಿ ನಡೆಸಿದ್ದು ಹೇಗೆ?
''ಮುಂಬೈ ಸೆಂಟ್ರಲ್ ಡಿಪೋದಲ್ಲಿ ಮುಂಭಾಗದ ಕೋಚ್ನ ನೋಸ್ ಕೋನ್ ಕವರ್ ಅನ್ನು ಹೊಸದರೊಂದಿಗೆ ಬದಲಾಯಿಸಲಾಯಿತು. ಯಾವುದೇ ಹೆಚ್ಚುವರಿ ತೊಂದರೆ ಇಲ್ಲದೆ ರೈಲು ಮತ್ತೆ ಸೇವೆ ಪ್ರಾರಂಭಿಸಲಾಗುತ್ತಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ," ಎಂದು ವೆಸ್ಟರ್ನ್ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಜಾನುವಾರುಗಳಿಗೆ ಡಿಕ್ಕಿ ಹೊಡೆದಿದ್ದ ವಂದೇ ಭಾರತ್ ಎಕ್ಸ್ಪ್ರೆಸ್
''ಕಳೆದ ಗುರುವಾರವಷ್ಟೇ ಗುಜರಾತ್ನ ವತ್ವಾ ರೈಲು ನಿಲ್ದಾಣದ ಬಳಿ ಟ್ರ್ಯಾಕ್ನಲ್ಲಿ ಜಾನುವಾರುಗಳಿಗೆ ಡಿಕ್ಕಿ ಹೊಡೆದು ಹಾನಿಯಾಗಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಬೆಳಿಗ್ಗೆ 11.15ರ ಸುಮಾರಿಗೆ ಈ ಘಟನೆಯು ನಡೆದಿದ್ದು, ಅಪಘಾತದಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿವೆ ಎಂದು ತಿಳಿದು ಬಂದಿತ್ತು. "ವತ್ವಾ ಬಳಿಯ ಹಾದಿಯಲ್ಲಿ ಮುಂದೆ ಕಾಣಿಸದಂತಹ ಒಂದು ತಿರುವಿನ ಪ್ರದೇಶವಿದ್ದು, ರೈಲು ಈ ವೇಳೆಯಲ್ಲಿ ಸುಮಾರು 100 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಹೀಗಾಗಿ ಎಮ್ಮೆಗೆ ರೈಲು ಡಿಕ್ಕಿ ಹೊಡೆದ ರಭಸಕ್ಕೆ ಫೈಬರ್ನಿಂದ ನಿರ್ಮಿಸಿರುವ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ," ಎಂದು ಅಧಿಕಾರಿಗಳು ತಿಳಿಸಿದ್ದರು.
ಜಾನುವಾರುಗಳಿಗೆ ವಂದೇ ಭಾರತ್ ರೈಲು ಡಿಕ್ಕಿ
ಭಾರತೀಯ ರೈಲ್ವೆ ಇಲಾಖೆಯ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಹತ್ವಾಕಾಂಕ್ಷೆಯ ಯೋಜನೆ ಆಗಿದೆ. ಆದರೆ ಈ ಎಕ್ಸ್ಪ್ರೆಸ್ ರೈಲಿನ ಸೇವೆಯನ್ನು ಆರಂಭಿಸಿದ ಏಳು ದಿನದಲ್ಲೇ ಇಂಥದೊಂದು ಅಪಘಾತ ಸಂಭವಿಸಿದೆ. ಎಕ್ಸ್ಪ್ರೆಸ್ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಗೈರತ್ಪುರ-ವತ್ವಾ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ. ರೈಲ್ವೆ ಅಪಘಾತದ ಈ ಘಟನೆಯಲ್ಲಿ ಯಾವುದೇ ಕ್ರಿಯಾತ್ಮಕ ಭಾಗಕ್ಕೆ ಹಾನಿಯಾಗಿಲ್ಲ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. ಎಮ್ಮೆ ಮೃತದೇಹಗಳನ್ನು ಹಳಿಗಳಿಂದ ಪಕ್ಕಕ್ಕೆ ತೆಗೆದ ನಂತರ ರೈಲು ಯಾವುದೇ ತೊಂದರೆಯಿಲ್ಲದೇ ಚಲಿಸಿ ಗಾಂಧಿನಗರಕ್ಕೆ ಸರಿಯಾದ ಸಮಯಕ್ಕೆ ತಲುಪಿತು. ಇದರ ಬೆನ್ನಲ್ಲೇ ದನಗಳನ್ನು ರೈಲ್ವೆ ಟ್ರ್ಯಾಕ್ ಬಳಿ ಬಿಡದಂತೆ ಹತ್ತಿರದ ಗ್ರಾಮಸ್ಥರಿಗೆ ರೈಲ್ವೆ ಅಧಿಕಾರಿಗಳು ಸಲಹೆ ನೀಡಿದ್ದರು.
ಸೆಪ್ಟೆಂಬರ್ 30ರಂದು ಗಾಂಧಿನಗರ-ಮುಂಬೈ ಎಕ್ಸ್ಪ್ರೆಸ್ ಶುರು
ಕಳೆದ ಸೆಪ್ಟೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಅಂದಿನಿಂದ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಸಂಚಾರ ಶುರುವಾಯಿತು. ಕಳೆದ ವಾರವಷ್ಟೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ, ಅದೇ ರೈಲಿನಲ್ಲಿ ಅಹಮದಾಬಾದ್ನ ಕಲುಪುರ್ ರೈಲು ನಿಲ್ದಾಣಕ್ಕೆ ಪ್ರಯಾಣಿಸಿದ್ದರು.