ತುತ್ತಿನ ಚೀಲ ತುಂಬಿಸಿಕೊಳ್ಳಲು ವಲಸೆ ಹೋದ ಕಾರ್ಮಿಕರಿಗೆಂಥಾ ಶಿಕ್ಷೆ?
ಬೆಂಗಳೂರು, ಮೇ.17: ನೊವೆಲ್ ಕೊರೊನಾ ವೈರಸ್ ಮತ್ತು ಭಾರತ ಲಾಕ್ ಡೌನ್ ಪ್ರಜೆಗಳ ಬದುಕಿನ ಚಿತ್ರಣವನ್ನೇ ಬದಲಿಸಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಪ್ಯಾಟೆಗೆ ವಲಸೆ ಹೋಗಿದ್ದ ಕಾರ್ಮಿಕರು ಪ್ರಾಣ ಉಳಿಸಿಕೊಳ್ಳಲು ತಮ್ಮೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ವಿಮಾನ, ಹಡಗು, ರೈಲು, ಬಸ್, ಲಾರಿ, ಟ್ರಕ್, ಬೈಕ್, ಕೊನೆಗೂ ಸೈಕಲ್ಲನ್ನೂ ಬಿಟ್ಟಿಲ್ಲ. ತಮ್ಮ ತಮ್ಮ ಊರಿಗೆ ತೆರಳಿ ಹೆತ್ತವರ ಮುಂದೆ ಬದುಕಿದ್ದರೆ ಸಾಕು. ಹೇಗೋ ಜೀವ ಉಳಿಸಿಕೊಂಡರೆ ಸಾಕು. ಹೀಗೆ ಕೊರೊನಾ ವೈರಸ್ ಮಹಾಮಾರಿಯು ಜನರಲ್ಲಿ ಇಂಥದೊಂದು ಮನಸ್ಥಿತಿಯನ್ನು ಸೃಷ್ಟಿಸಿದೆ.
ರಾಜಧಾನಿ ಸೇರಿದಂತೆ ಮೆಟ್ರೋ ಪಾಲಿಟನ್ ಸಿಟಿಗಳಿಂದ ಜನರು ದೂರ ಸಾಗುತ್ತಿದ್ದಾರೆ. ಲಕ್ಷ ಲಕ್ಷ ವಲಸೆ ಕಾರ್ಮಿಕರು ನಡೆದುಕೊಂಡೇ ಹೋಗಿದ್ದು, ನಡುದಾರಿಯಲ್ಲೇ ಹೆಣವಾದ ಹಲವು ಪ್ರಕರಣಗಳು ಭಾರತ ಲಾಕ್ ಡೌನ್ ಸಂದರ್ಭದಲ್ಲಿ ನಡೆದಿವೆ. ಭಾರತ ಲಾಕ್ ಡೌನ್ ಹಾಗೂ ಕೊರೊನಾ ವೈರಸ್ ನಿಂದಾಗಿ ವಲಸೆ ಹೊರಟ ಕಾರ್ಮಿಕರ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಯೋಣ.

ರಾಜ್ಯದಲ್ಲಿ ಒಂದೇ ದಿನ 54 ಮಂದಿಗೆ ಕೊರೊನಾ!
ವಲಸೆ ಕಾರ್ಮಿಕರು ತವರು ಸೇರಲು ಹಾತೊರೆಯುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ 54 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಪೈಕಿ ಅತಿಹೆಚ್ಚು ಮಂದಿಗೆ ಬೇರೆ ರಾಜ್ಯದ ನಂಟು ಇರುವುದು ಪತ್ತೆಯಾಗಿದೆ. ವಲಸೆ ಆಗಮಿಸಿದ ವ್ಯಕ್ತಿಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಹೆಚ್ಚಿಸಿದೆ.

ಮಂಡ್ಯದ 22 ಮಂದಿ ಕೊರೊನಾ ಸೋಂಕಿತರಿಗೆ ಮಹಾ ನಂಟು!
ಭಾನುವಾರ ಒಂದೇ ದಿನ ಮಂಡ್ಯದಲ್ಲಿ 22 ಮಂದಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದ್ದು, ಈ ಎಲ್ಲ ಸೋಂಕಿತರೂ ಮಹಾರಾಷ್ಟ್ರದ ಮುಂಬೈಗೆ ತೆರಳಿದ್ದರು ಎಂದು ತಿಳಿದು ಬಂದಿದೆ. ಹಾಸನದಲ್ಲೂ ಇಂದು ಪತ್ತೆಯಾದ 6 ಮಂದಿ ಕೊರೊನಾ ಸೋಂಕಿತರು ಮುಂಬೈಗೆ ತೆರಳಿ ವಾಪಸ್ಸಾಗಿದ್ದರು. ಹೀಗೆ ವಲಸೆ ಹೊರಟ ಕಾರ್ಮಿಕರನ್ನು ಗೂಡು ಸೇರಿಸುವುದು ಒಂದು ಸವಾಲು ಆಗಿದ್ದರೆ, ವಲಸೆ ಬಂದವರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿರುವುದು ತಲೆನೋವು ತಂದೊಡ್ಡಿದೆ.

ಎರಡು ದಿನ ಭಾರತ ಲಾಕ್ ಡೌನ್ ಮುಂದುವರಿಕೆ
ಮೊದಲ ಹಂತದಲ್ಲಿ ಮಾರ್ಚ್.25 ರಿಂದ ಏಪ್ರಿಲ್.14ರವರೆಗೂ 21 ದಿನ ಭಾರತ ಲಾಕ್ ಡೌನ್ ಘೋಷಿಸಲಾಯಿತು. ಏಪ್ರಿಲ್.15 ರಿಂದ ಮೇ.03ರವರೆಗೂ ಎರಡನೇ ಹಂತ, ಹಾಗೂ ಮೇ.04ರಿಂದ ಮೇ.17ರವೆಗೂ ಮೂರನೇ ಹಂತದ ಲಾಕ್ ಡೌನ್ ವಿಸ್ತರಣೆ ಮಾಡಲಾಗಿತ್ತು. ಭಾನುವಾರಕ್ಕೆ 3.O ಅಂತ್ಯವಾಗಿದ್ದು, ಮೇ.31ರವರೆಗೂ ಕೇಂದ್ರ ಸರ್ಕಾರವು ಲಾಕ್ ಡೌನ್ 4.O ವಿಸ್ತರಿಸಿದೆ. ನಾಲ್ಕನೇ ಅವಧಿಯ ಲಾಕ್ ಡೌನ್ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಲಾಗಿದೆ. ಇಷ್ಟೆಲ್ಲ ನಡೆದರೂ ವಲಸೆ ಕಾರ್ಮಿಕರಿಗೆ ತವರು ಸೇರುವ ಹಾತೊರಿಕೆ ಇಂದಿಗೂ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ.

ಶ್ರಮಿಕ್ ರೈಲು ಪ್ರವೇಶಕ್ಕೆ ರಾಜ್ಯಗಳು ಅನುಮತಿ ನೀಡಿ
ಭಾನುವಾರ ಕೇಂದ್ರ ಸರ್ಕಾರವು ನಾಲ್ಕನೇ ಹಂತದ ಲಾಕ್ ಡೌನ್ ಮಾರ್ಗಸೂಚಿ ಬಿಡುಗಡೆ ಬೆನ್ನಲ್ಲೇ ಕೇಂದ್ರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿ ಜೊತೆಗೆ ವಿಡಿಯೋ ಸಂವಾದ ನಡೆಸಿದರು. ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲು ಶ್ರಮಿಕ್ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ರಾಜ್ಯಗಳು ಶ್ರಮಿಕ್ ರೈಲುಗಳ ಸಂಚಾರಕ್ಕೆ ಅನುಮತಿ ನೀಡಬೇಕು. ಜೊತೆಗೆ ವಲಸೆ ಬಂದ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಕ್ವಾರೆಂಟೈನ್ ನಲ್ಲಿ ಇರಿಸಬೇಕು ಎಂದು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬ್ ಸಲಹೆ ನೀಡಿದರು.

ಭಾರತದ ಇತರೆ ರಾಜ್ಯಗಳಲ್ಲಿ ವಲಸೆ ಕಾರ್ಮಿಕರಿಂದ ಅರ್ಜಿ
ಉತ್ತರ ಭಾರತದ ರಾಜ್ಯಗಳಲ್ಲಿ ಅತಿಹೆಚ್ಚಾಗಿ ವಲಸೆ ಕಾರ್ಮಿಕರು ಬೇರೆ ರಾಜ್ಯಗಳಿಗೆ ದುಡಿಯುವುದಕ್ಕಾಗಿ ಊರು ಬಿಟ್ಟು ಹೋಗಿರುತ್ತಾರೆ. ಅಂಥ ಕಾರ್ಮಿಕರನ್ನು ಕರೆ ತರಲು ರಾಜ್ಯ ಸರ್ಕಾರವು ವ್ಯವಸ್ಥೆ ಕಲ್ಪಿಸಿದ್ದೇ ತಡ, ಕಳೆದ ಮೇ.02 ಮೇ.14ರ ಅಂತರದಲ್ಲೇ 6.92 ಲಕ್ಷ ಜನರು ತಮ್ಮನ್ನು ತಮ್ಮೂರಿಗೆ ವಾಪಸ್ ಕರೆದುಕೊಂಡು ಹೋಗುವಂತೆ ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಹಲವು ರಾಜ್ಯಗಳಲ್ಲಿ ಕನಿಷ್ಠ 10 ಲಕ್ಷ ಕಾರ್ಮಿಕರು ವಲಸೆ ಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ.

ದೇಶದ ವಾಣಿಜ್ಯ ನಗರಿಯೇ 'ಉತ್ತರ'ದ ಮಂದಿಗೆ ಆಧಾರ
ಸರ್ಕಾರವು ನೀಡಿದ ಅಂಕಿ-ಅಂಶಗಳ ಪ್ರಕಾರ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳ ಜನರು ದುಡಿಯುವುದಕ್ಕಾಗಿ ಬಹುಪಾಲು ಮಂದಿ ಮಹಾರಾಷ್ಟ್ರದ ಮುಂಬೈಗೆ ವಲಸೆ ಹೋಗಿದ್ದಾರೆ. ಪಶ್ಚಿಮ ಬಂಗಾಳದ 2.5 ಲಕ್ಷ ಕಾರ್ಮಿಕರು, ಛತ್ತೀಸ್ ಗಢ್ 2.69 ಲಕ್ಷ ಕಾರ್ಮಿಕರು, ಉತ್ತರ ಪ್ರದೇಶದ 10 ಲಕ್ಷ ಕಾರ್ಮಿಕರು, ರಾಜಸ್ಥಾನದ 5.5 ಲಕ್ಷ ಕಾರ್ಮಿಕರು ಮತ್ತು ಬಿಹಾರದ 2.7 ಲಕ್ಷ ಕಾರ್ಮಿಕರು ಬೇರೊಂದು ಸ್ಥಳಗಳಲ್ಲಿ ಸಿಲುಕಿದ್ದಾರೆ ಎಂದು ಅಂದಾಜಿಸಲಾಗಿದೆ.

ರಾಜ್ಯದ ಪರಿಸ್ಥಿತಿಯೂ ಉತ್ತರದ ರಾಜ್ಯಗಳಿಗಿಂತ ಭಿನ್ನವಿಲ್ಲ
ಉತ್ತರ ಭಾರತದಲ್ಲಿ ಲಕ್ಷ ಲಕ್ಷ ಜನರು ವಲಸೆ ಕಾರ್ಮಿಕರು ತವರಿಗೆ ವಾಪಸ್ ಆಗಲು ಹಪಹಪಿಸುತ್ತಿದ್ದಂತೆ ಕರ್ನಾಟಕದಲ್ಲೂ ಲಕ್ಷಾಂತರ ಕಾರ್ಮಿಕರು ದುಡಿಮೆಗಾಗಿ ವಲಸೆ ಹೋಗಿದ್ದಾರೆ. ಉತ್ತರ ಕರ್ನಾಟಕದ ಜನರಲ್ಲಿ ಬಹುಪಾಲು ಮಂದಿ ಮಹಾರಾಷ್ಟ್ರಕ್ಕೆ ವಲಸೆ ಹೋಗಿದ್ದು, ಲಾಕ್ ಡೌನ್ ನಿಂದಾಗಿ ಸಿಲುಕಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಗ್ರಾಮೀಣ ಭಾಗದಿಂದ ಬೆಂಗಳೂರಿಗೆ ತೆರಳಿರುವ ಜನರು ಕೂಡಾ ವಾಪಸ್ ಊರಿಗೆ ತೆರಳಲಾಗದೇ ಕುಳಿತಿರುವ ಉದಾಹರಣೆಗಳೂ ಸಾಕಷ್ಟಿವೆ. ಶ್ರಮಿಕ್ ರೈಲಿನ ಮುಖೇನ ರಾಜ್ಯದ ಸಾವಿರಾರು ಕಾರ್ಮಿಕರನ್ನು ಗೂಡು ಸೇರಿಸುವ ಕೆಲಸ ಮಾಡಲಾಗಿದೆ. ಸೇವಾ ಸಿಂಧು ವೆಬ್ ಸೈಟ್ ನಲ್ಲಿ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 63 ಸಾವಿರ ಮಂದಿ ರಿಜಿಸ್ಟರ್ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ರಾಜಧಾನಿಯಿಂದ ಬೇರೆ ರಾಜ್ಯಗಳಿಗೆ ವಾಪಸ್
ಸಿಲಿಕಾನ್ ಸಿಟಿ ಬೆಂಗಳೂರು ಕೂಡ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಅನ್ನ ನೀಡುವ ಕೇಂದ್ರವಾಗಿದೆ. ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ತೆಲಂಗಾಣ, ಆಂಧ್ರ ಪ್ರದೇಶ, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ವಲಸೆ ಬಂದ ಕಾರ್ಮಿಕರಿಗೆ ಬೆಂಗಳೂರು ನೆರಳು ನೀಡಿತ್ತು. ಭಾರತ ಲಾಕ್ ಡೌನ್ ಹಾಗೂ ಕೊರೊನಾ ವೈರಸ್ ಭೀತಿಯಲ್ಲಿ ವಲಸೆ ಕಾರ್ಮಿಕರೆಲ್ಲ ತಮ್ಮೂರುಗಳತ್ತ ವಾಪಸ್ ಹೊರಟಿದ್ದಾರೆ. ಬೆಂಗಳೂರಿನಲ್ಲಿದ್ದ ಬಹುತೇಕ ಕಾರ್ಮಿಕರು ವಾಪಸ್ ತಮ್ಮೂರಿಗೆ ತೆರಳಿದ್ದರೆ, ಇನ್ನೂ ಕೆಲವು ಕಾರ್ಮಿಕರು ವಾಪಸ್ ತೆರಳಲೂ ಆಗದೇ ಬೆಂಗಳೂರಿನಲ್ಲಿ ಭಾರತ ಲಾಕ್ ಡೌನ್ ನಡುವೆ ಉದ್ಯೋಗವೂ ಇಲ್ಲದೇ ತ್ರಿಶಂಕು ಸ್ಥಿತಿಯಲ್ಲಿ ಬದುಕಿದ್ದಾರೆ.












Click it and Unblock the Notifications