ರಾಜಸ್ಥಾನ ಬಂಡಾಯ ಶಾಸಕರ ಪರ ಬ್ಯಾಟ್ ಬೀಸಿದ ಅಶೋಕ್ ಗೆಹ್ಲೋಟ್
ಜೈಪುರ, ಅ.03: ರಾಜಸ್ಥಾನದ ಮುಖ್ಯಮಂತ್ರಿ ಸ್ಥಾನ ಬದಲಾವಣೇ ಕುರಿತು ಬಂಡಾಯದ ನಾಟಕ ನಡೆಸಿದ ತನ್ನ ನಿಷ್ಠಾವಂತ ಶಾಸಕರನ್ನು ಸಮರ್ಥಿಸಿಕೊಂಡಿರುವ ಅಶೋಕ್ ಗೆಹ್ಲೋಟ್, ರಾಜ್ಯದಲ್ಲಿ 2020 ರ ಬಂಡಾಯದ ಸಂದರ್ಭದಲ್ಲಿ ತನ್ನ ಸರ್ಕಾರವನ್ನು ಉಳಿಸಿದ 102 ಶಾಸಕರನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
2020ರಲ್ಲಿ ತಮ್ಮ ವಿರುದ್ಧ ಬಂಡಾಯವೆದ್ದಿದ್ದ ಶಾಸಕರ ಮೇಲೆ ದಾಳಿ ನಡೆಸಿದ ಅವರು, ಬಂಡಾಯ ಶಾಸಕರೆಲ್ಲರೂ ಬಿಜೆಪಿ ಜತೆ ಕೈಜೋಡಿಸಿದ್ದರು ಎಂದು ಆರೋಪಿಸಿದ್ದಾರೆ.
ಎಐಸಿಸಿ ಚುನಾವಣೆ: ಹಿಂದೆ ಸರಿದ ಅಶೋಕ್ ಗೆಹ್ಲೋಟ್, ದಿಗ್ವಿಜಯ್-ಶಶಿ ತರೂರ್ ಮಧ್ಯೆ ಸ್ಪರ್ಧೆ
ಆಗ, ನಮ್ಮ ಕೆಲವು ಶಾಸಕರು ಅಮಿತ್ ಶಾ, ಧರ್ಮೇಂದ್ರ ಪ್ರಧಾನ್ ಮತ್ತು ಇತರ ನಾಯಕರನ್ನು ಭೇಟಿ ಮಾಡಿದರು. ಅಮಿತ್ ಶಾ ಅವರು ನಮ್ಮ ಶಾಸಕರಿಗೆ ಸಿಹಿತಿಂಡಿ ನೀಡುತ್ತಿದ್ದರು. ಹಾಗಾದರೆ ಕಾಂಗ್ರೆಸ್ ಸರ್ಕಾರವನ್ನು ಉಳಿಸಿದ 102 ಶಾಸಕರನ್ನು ನಾನು ಹೇಗೆ ಮರೆಯಲಿ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
"ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಅಥವಾ ಕೊರೋನಾ ಸಮಯದಲ್ಲಿ ಅಗತ್ಯವಿರುವಾಗ ನನಗೆ ಸಾರ್ವಜನಿಕ ಬೆಂಬಲ ಸಿಕ್ಕಿದೆ. ಆದ್ದರಿಂದ, ನಾನು ಅವರಿಂದ ಹೇಗೆ ದೂರವಿರಲು ಸಾಧ್ಯ" ಎಂದು ಪ್ರಶ್ನಿಸಿದ್ದಾರೆ.
ಸಚಿನ್ ಪೈಲಟ್ ಅವರನ್ನು ಹೆಸರಿಸದೆ, ಅವರ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ತನಿಖೆ ನಡೆಸಬೇಕು ಎಂದು ಗೆಹ್ಲೋಟ್ ಸುಳಿವು ನೀಡಿದ್ದಾರೆ. ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯ ಹೆಸರಿಗೆ ಶಾಸಕರಲ್ಲಿ ಅಸಮಾಧಾನ ಏಕೆ ಉಂಟಾಗಿದೆ ಎಂಬುದನ್ನು ಪರಿಶೀಲಿಸಬೇಕು ಎಂದಿದ್ದಾರೆ.
ಸಚಿನ್ ಪೈಲಟ್ ಉನ್ನತ ಹುದ್ದೆಯ ಆಕಾಂಕ್ಷೆಯನ್ನು ವ್ಯಕ್ತಪಡಿಸುವಲ್ಲಿ ಸೂಕ್ಷ್ಮವಾಗಿ ವರ್ತಿಸಲಿಲ್ಲ ಎಂಬ ಆರೋಪಗಳಿವೆ. ಹೀಗಾಗಿ ಅಶೋಕ್ ಗೆಹ್ಲೋಟ್ ಅವರ ಹೇಳಿಕೆಗಳು ಯುವ ನಾಯಕನ ವಿರುದ್ಧದ ಆರೋಪವಾಗಿದೆ.
"ನಾನು ಜೈಸಲ್ಮೇರ್ನಲ್ಲಿದ್ದೆ, ಹೊಸ ಮುಖ್ಯಮಂತ್ರಿ ಯಾರಾಗಲಿದ್ದಾರೆ ನನಗೆ ಊಹಿಸಲು ಸಾಧ್ಯವಾಗಲಿಲ್ಲ ಆದರೆ ಶಾಸಕರು ಗ್ರಹಿಸಿದ್ದಾರೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪಕ್ಷದ ಹೈಕಮಾಂಡ್ನ ಆಶೀರ್ವಾದದೊಂದಿಗೆ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗುವುದು ಕಳೆದ ವಾರದವರೆಗೆ ಖಚಿತವಾಗಿತ್ತು. ಆದರೆ, ಅಶೋಕ್ ಗೆಹ್ಲೋಟ್ ಅವರ ಸ್ಥಾನಕ್ಕೆ ಸಚಿನ್ ಪೈಲಟ್ ಹೆಸರು ಕೇಳಿ ಬಂದಿತ್ತು. ಇದಕ್ಕೆ ಅನೇಕ ಶಾಸಕರು ವಿರೋಧ ವ್ಯಕ್ತಪಡಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. ಹೀಗಾಗಿ ಅಶೋಕ್ ಗೆಹ್ಲೋಟ್ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು.
ಕಾಂಗ್ರೆಸ್ ಪಕ್ಷದ "ಒಬ್ಬ ವ್ಯಕ್ತಿ, ಒಂದು ಹುದ್ದೆ" ನೀತಿಗೆ ಅನುಗುಣವಾಗಿ ಅಶೋಕ್ ಗೆಹ್ಲೋಟ್ ತನ್ನ ಹುದ್ದೆಯನ್ನು ತ್ಯಜಿಸಬೇಕಾಗಿತ್ತು.
ಅಶೋಕ್ ಗೆಹ್ಲೋಟ್ ಅವರು ಕೊನೆಯ ಉಸಿರು ಇರುವವರೆಗೂ ರಾಜಸ್ಥಾನದ ಜನರಿಂದ ದೂರ ಉಳಿಯಲು ಸಾಧ್ಯವಿಲ್ಲ ಎಂದಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ತನ್ನ ಐದು ವರ್ಷಗಳನ್ನು ಪೂರ್ಣಗೊಳಿಸುತ್ತದೆ ಎಂದು ಘೋಷಿಸಿದ್ದಾರೆ.