Bengaluru 2nd Airport: ಕರ್ನಾಟಕದಲ್ಲಿ ಇನ್ನೂ ಚರ್ಚೆ, ಹೊಸೂರಿನಲ್ಲಿ ಏರ್ಪೋರ್ಟ್ ಸ್ಥಳ ನಿಗದಿ
ಬೆಂಗಳೂರು, ಡಿಸೆಂಬರ್ 01: ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕಾಗಿ ಹಲವು ಸ್ಥಳಗಳನ್ನು ಗುರುತಿಸಲಾಗಿದೆ, ಈ ಕುರಿತು ರಾಜ್ಯದಲ್ಲಿ ಇನ್ನೂ ಚರ್ಚೆಗಳು ನಡೆಯುತ್ತಿದೆ. ಆದರೆ ಪಕ್ಕದ ರಾಜ್ಯ ತಮಿಳುನಾಡು ಹೊಸೂರು ವಿಮಾನ ನಿಲ್ದಾಣದ ಪ್ರಸ್ತಾವಿತ ಯೋಜನೆಗೆ ಐದು ಸ್ಥಳಗಳನ್ನು ಗುರುತಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಈ ಸ್ಥಳಗಳಲ್ಲಿ ಸಮೀಕ್ಷೆಗಳನ್ನು ಸಹ ಪೂರ್ಣಗೊಳಿಸಿದೆ.
ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಯನ್ನು ಘೋಷಣೆ ಮಾಡಿದೆ. ಬಳಿಕ ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ 2ನೇ ವಿಮಾನ ನಿಲ್ದಾಣ ಯೋಜನೆಯನ್ನು ಘೋಷಣೆ ಮಾಡಿತ್ತು. ಆದರೆ ಇನ್ನೂ ಸ್ಥಳ ಅಂತಿಮಗೊಳಿಸಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವರದಿ ಸಲ್ಲಿಕೆ ಮಾಡಬೇಕಿದೆ.

ಹೊಸೂರು ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಯೋಜನೆ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರ ಐದು ಸ್ಥಳಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದೆ. ಆದರೆ ವಿಮಾನ ನಿಲ್ದಾಣ ಯೋಜನೆಗೆ ಇನ್ನೂ ತಾಂತ್ರಿಕ ಅಡೆತಡೆಗಳು ಸಾಕಷ್ಟಿವೆ. ಪ್ರಮುಖವಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಸುತ್ತಲೂ 150 ಕಿ. ಮೀ. ವ್ಯಾಪ್ತಿಯಲ್ಲಿ ಹೊಸ ವಿಮಾನ ನಿಲ್ದಾಣ ಸ್ಥಾಪನೆಗೆ 2033ರ ತನಕ ಕೇಂದ್ರ ವಿಮಾನಯಾನ ಸಚಿವಾಲಯ ಅನುಮತಿ ನೀಡುವಂತಿಲ್ಲ.
ಯಾವ-ಯಾವ ಸ್ಥಳಗಳು?; ಎಎಐ ಮತ್ತು ತಮಿಳುನಾಡು ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ಒಟ್ಟು ಐದು ಸ್ಥಳಗಳಲ್ಲಿ ಸಮೀಕ್ಷೆ ಮಾಡಿದೆ. ಸದ್ಯ ಇರುವ ಹೊಸೂರು ಏರ್ ಸ್ಟ್ರಿಪ್ ಮೊದಲ ಸ್ಥಳವಾಗಿದ್ದು, ಇದನ್ನು ಸದ್ಯ ತನೇಜಾ ಏರೋಸ್ಪೆಸ್ ಎಂಡ್ ಎವಿಯೇಷನ್ ಲಿಮಿಟೆಡ್ (ಟಿಎಎಎಲ್) ನಿರ್ವಹಣೆ ಮಾಡುತ್ತಿದೆ. ಇದು ಖಾಸಗಿ ಒಡೆತನದಲ್ಲಿದೆ.
ಹೊಸೂರು ಏರ್ ಸ್ಟ್ರಿಪ್ ದಕ್ಷಿಣ ಭಾಗ. ಇದು ಟಿಎಎಎಲ್ನಿಂದ ಸುಮಾರು 2 ಕಿ. ಮೀ. ದೂರದಲ್ಲಿದೆ. 3ನೇ ಸ್ಥಳ ತೋಗರೈ ಅಗ್ರಹಾರಂ ಗ್ರಾಮದಲ್ಲಿದೆ. ಈ ಜಾಗ ಟಿಎಎಎಲ್ನಿಂದ 10 ಕಿ. ಮೀ. ದೂರದಲ್ಲಿದೆ. ಮತ್ತೊಂದು ಸ್ಥಳ ಉಲ್ಲಾಗಂ, ಇದು ಶೂಲಗಿರಿ ಗ್ರಾಮದಲ್ಲಿದ್ದು, ಹೊಸೂರಿನ ಟಿಎಎಎಲ್ ಏರ್ಸ್ಟ್ರಿಪ್ನಿಂದ 27 ಕಿ. ಮೀ. ದೂರದಲ್ಲಿದೆ. 5ನೇ ಸ್ಥಳ ದಾಸಪಲ್ಲಿ ಇದು ಸದ್ಯ ಇರುವ ಏರ್ಸ್ಟ್ರಿಪ್ನಿಂದ 16 ಕಿ. ಮೀ. ದೂರದಲ್ಲಿದೆ.
ಟಿಎಎಎಲ್ ಏರ್ ಸ್ಟ್ರಿಪ್, ತೋಗರೈ ಅಗ್ರಹಾರಂ ಮತ್ತು ಶೂಲಗಿರಿ ಸ್ಥಳಗಳನ್ನು ತಮಿಳುನಾಡು ಸರ್ಕಾರ ಕೈಗಾರಿಕಾ ಪಾರ್ಕ್ ಸ್ಥಾಪನೆ ಮಾಡಲು ಗುರುತಿಸಿದ ಸ್ಥಳವಾಗಿದೆ. ಆದ್ದರಿಂದ ಯಾವ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ? ಎಂಬುದು ಇನ್ನೂ ಅಂತಿಮವಾಗಿಲ್ಲ.
ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಜೂನ್ 27ರಂದು ವಿಧಾನಸಭೆಯಲ್ಲಿ ಹೊಸೂರಿನಲ್ಲಿ ವರ್ಷಕ್ಕೆ 3 ಕೋಟಿ ಪ್ರಯಾಣಿಕರು ಪ್ರಯಾಣಿಸುವ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದರು. 2 ಸಾವಿರ ಎಕರೆ ಪ್ರದೇಶದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಆದರೆ ಹೊಸೂರಿನಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಯೋಜನೆಗೆ ಕೇಂದ್ರ ವಿಮಾನಯಾನ ಸಚಿವಾಲಯ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಈ ವಿಮಾನ ನಿಲ್ದಾಣ ನಿರ್ಮಾಣವಾದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೇಲಿನ ಒತ್ತಡ ಕಡಿಮೆಯಾಗಲಿದೆ, ಅಲ್ಲದೇ ತಮಿಳುನಾಡಿಗೆ ಇನ್ನಷ್ಟು ಕೈಗಾರಿಕೆಗಳನ್ನು ಆಕರ್ಷಿಸಲು ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ.
ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ಪ್ರಮುಖವಾದ ತಾಂತ್ರಿಕ ಅಡಚಣೆಯೊಂದಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು 150 ಕಿ. ಮೀ. ವ್ಯಾಪ್ತಿಯಲ್ಲಿ 2033ರ ತನಕ ಯಾವುದೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬಾರದು ಎಂದು ಬಿಐಎಎಲ್ ಜೊತೆ ಕೇಂದ್ರ ಸರ್ಕಾರ ಒಪ್ಪಂದವನ್ನು ಮಾಡಿಕೊಂಡಿದೆ. ಬೆಂಗಳೂರು ನಗರದ 2ನೇ ವಿಮಾನ ನಿಲ್ದಾಣ ಯೋಜನೆಯ ಸ್ಥಳ ಅಂತಿಮಗೊಳಿಸಲು ಸಹ ಈ ಒಪ್ಪಂದವೇ ಸದ್ಯ ಅಡ್ಡಿಯಾಗಿದೆ.
ಈ ಕುರಿತು ತಾಂತ್ರಿಕ ಸಮಸ್ಯೆ ಬಗೆಹರಿಸಲು ತಮಿಳುನಾಡು ಸರ್ಕಾರ ಟಿಎಎಎಲ್ ಎರಡು ವರ್ಷಗಳಿಂದ ಬಿಐಎಎಲ್ ಜೊತೆ ಸಂಪರ್ಕದಲ್ಲಿದೆ. ಆದರೆ ಇನ್ನೂ ಅಂತಿಮ ಒಪ್ಪಿಗೆ ಸಿಗುವ ಮೊದಲೇ ರಾಜ್ಯ ಸರ್ಕಾರ ಐದು ಸ್ಥಳಗಳನ್ನು ಗುರುತಿಸಿ ಎಎಐ ಅಧಿಕಾರಿಗಳಿಂದ ಸಮೀಕ್ಷೆಗಳನ್ನು ಸಹ ಪೂರ್ಣಗೊಳಿಸಿದೆ.












Click it and Unblock the Notifications