ದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸ
ಕೋರೆಗಾಂವ್ ಎಂಬ ಹೆಸರು ಮತ್ತೆ ದೇಶದೆಲ್ಲೆಡೆ ಅನುರಣಿಸುತ್ತಿದೆ. ಭಾರತದ ಇತಿಹಾಸದಲ್ಲೇ ಹೆಸರಾದ ಕದನ ಹಾಗೂ ಭೂಮಿ ಇದು. ದಲಿತರ ಆತ್ಮಗೌರವ ಹಾಗೂ ಹಕ್ಕುಗಳಿಗೆ ತಳುಕು ಹಾಕಿಕೊಂಡಿರುವ ಸ್ಥಳವಿದು.
ಐನೂರು ಮಂದಿ ದಲಿತ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಎಲ್ಲದೆ ಇಪ್ಪತ್ತೆಂಟು ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರ ಹನ್ನೆರಡು ಗಂಟೆ ಕಾದಾಡಿದ ಸ್ಮರಣೀಯ ಕದನ ಅದು. ಆ ಐನೂರು ಮಹರ್ ಸೈನಿಕರು ಇತಿಹಾಸ ಸೃಷ್ಟಿಸಿದರು.
ಪೇಶ್ವೆಗಳ ಇಪ್ಪತ್ತೆಂಟು ಸಾವಿರ ಸೈನ್ಯ ಬಲವನ್ನು ಸೋಲಿಸಿದರು. ಕೋರೆಗಾಂವ್ ಸ್ಮಾರಕದಲ್ಲಿ ಆ ಇಪ್ಪತ್ತೆರಡು ಮಹರ್ ಸೈನಿಕರ ಚಿತ್ರಗಳು ದೇಶ ಸ್ವಾತಂತ್ರ್ಯ ಪಡೆಯುವವರೆಗೂ ಇತ್ತು. ಮಹರ್ ಸೈನಿಕರ ವೀರಗಾಥೆ ಹೇಳುವ ಸ್ಮಾರಕ ಅದು.

ಆ ಯುದ್ಧ ನಡೆದದ್ದು ಜನವರಿ 1, 1818ರಲ್ಲಿ:
ಈ ಯುದ್ಧ ನಡೆದದ್ದು ಜನವರಿ 1, 1818ರಲ್ಲಿ: ಕೋರೆಗಾಂವ್ (ಪುಣೆಯ ವಾಯವ್ಯಕ್ಕಿದೆ)ನ ಭೀಮಾ ನದಿಯ ದಂಡೆಯ ಸಮೀಪ. ಬಾಂಬೆ ಲೈಟ್ ವೇಯ್ಟ್ ಇನ್ ಫೆಂಟ್ರಿ ಮೊದಲನೇ ರೆಜಿಮೆಂಟ್, ಎರಡನೇ ಬೆಟಾಲಿಯನ್ ನ ಐನೂರು ಮಹರ್ ಸೈನಿಕರು ಹಾಗೂ ಪೇಶ್ವೆಗಳ ಸಾವಿರ ಸಾವಿರ ಸಂಖ್ಯೆಯ ಸೈನಿಕರ ಮಧ್ಯೆ ಕದನ ನಡೆಯಿತು.
ಪೇಶ್ವೆಗಳದು ಬ್ರಾಹ್ಮಣರ ಸೈನಿಕರೇ ಹೆಚ್ಚಿದ್ದ ಇಪ್ಪತ್ತೆಂಟು ಸಾವಿರ ಸಂಖ್ಯೆಯ ಸೈನ್ಯ. ಐನೂರು ಮಂದಿಯಿದ್ದ 'ಅಸ್ಪೃಶ್ಯ' ಸೈನಿಕರಿಗೆ ಅವರ ಮುಂದೆ ನಿಲ್ಲಲಾದರೂ ಸಾಧ್ಯವೇ ಎಂದು ಪ್ರಶ್ನೆ ಮೂಡಿಸುವಂಥ ಸನ್ನಿವೇಶ. ಶಿರೂರಿನಿಂದ ಇಪ್ಪತ್ತೇಳು ಮೈಲು ಭೀಮಾ ಕೋರೆಗಾಂವ್ ನವರೆಗೆ ನಡೆದುಕೊಂಡೇ ಬಂದ ಮಹರ್ ಸೈನಿಕರಿಗೆ ಆಹಾರ, ನೀರು ಕೂಡ ಇರಲಿಲ್ಲ.
ಆದರೂ ಹನ್ನೆರಡು ಗಂಟೆಗಳ ಕಾಲ ಆ ಸೈನಿಕರು ರಣಭೂಮಿಯಲ್ಲಿ ಕಾದಾಡಿದರು. ಆ ಯುದ್ಧದಲ್ಲಿ ಪೇಶ್ವಾಗಳು ಬರೀ ಸೋತಿದ್ದಲ್ಲ. ಮಹಾರಾಷ್ಟ್ರದಲ್ಲಿ ಪೇಶ್ವಾಗಳ ಉತ್ತರಾದಾಯಿತ್ವವೇ ಅಂತ್ಯವಾಯಿತು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ.
ಬ್ರಿಟಿಷರ ವಿರುದ್ಧ ಒಟ್ಟಾಗಿ ಹೋರಾಡುವ ಎಂದಿದ್ದ ಮಹರ್ ಸೈನಿಕರು:
ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರೊಂದಿಗೆ ಯುದ್ಧಕ್ಕೆ ಇಳಿದ ಬ್ರಿಟಿಷರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಪೇಶ್ವಾಗಳ ಆಡಳಿತದ ಅಂತ್ಯಕ್ಕೆ ಕಾರಣವಾದ ಯುದ್ಧ ಇದು. ಮಹಾರಾಷ್ಟ್ರದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಲು ನೆರವಾದ ಸಂದರ್ಭ ಅದು.
ಐನೂರು ಸೈನಿಕರ ನೇತೃತ್ವ ವಹಿಸಿದ್ದು ಸಿದ್ಧಾಂಕ್ ಮಹರ್. "ಬ್ರಿಟಿಷರು ವಿದೇಶೀಯರು. ನಿಮಗೆ ನಾವು ನೆರವು ನೀಡುತ್ತೇವೆ" ಎಂದು ಆತ ಮನವಿ ಮಾಡುತ್ತಾರೆ. ಆದರೆ ಆತನ ಮನವಿಯನ್ನು ನಿರಾಕರಿಸಿದ ಪೇಶ್ವೆಗಳು, ಆ ಸೈನಿಕರನ್ನು ಅವಹೇಳನ ಮಾಡುತ್ತಾರೆ. ಹೀಯಾಳಿಸುತ್ತಾರೆ. ನಿಮಗೆ ಯಾವುದೇ ಹಕ್ಕು ಸಿಗಲ್ಲ. ನಮ್ಮ ವಿರುದ್ಧ ಕಾದಾಡಿದರೂ ಅಷ್ಟೇ, ಬ್ರಿಟಿಷರ ವಿರುದ್ಧ ಹೋರಾಡಿದರೂ ಅಷ್ಟೇ ಎನ್ನುತ್ತಾರೆ.
ಆತ್ಮಗೌರವ ಮತ್ತು ಹಕ್ಕಿಗಾಗಿ ಹೋರಾಟ:
ಆಗ ಯುದ್ಧ ಆರಂಭವಾಗುವುದು ಮಹರ್ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆ ಪಡೆ ಮಹರ್ ಸೈನಿಕರ ಎದುರು ಮಂಡಿಯೂರುತ್ತದೆ. ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ. ಆ ಮಹರ್ ಸೈನಿಕರಿಗೆ ಬ್ರಿಟಿಷರು ಗೌರವ- ಸಮ್ಮಾನ ನೀಡುತ್ತಾರೆ. ಮಹರ್ ರೆಜಿಮೆಂಟ್ ಮತ್ತು ಬಾಂಬೆ ಸೈನ್ಯದ ಸಾಹಸದ ಬಗ್ಗೆ ಹಲವು ದಂತಕಥೆಗಳೇ ಇವೆ.
ಈ ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ಸ್ಥಂಭ (ವಿಜಯ ಸ್ಥಂಭ) ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. ಇಪ್ಪತ್ತೆರಡು ಮಹರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾವ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರ ಕಥೆಗೆ ಸಾಕ್ಷಿಯಂತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿವರ್ಷ ಜನವರಿ ಒಂದರಂದು ಭೀಮಾ ಕೋರೆಗಾಂವ್ ಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು.












Click it and Unblock the Notifications