ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಳ್ಳಬೇಕು: 18-20 ವರ್ಷ ವಯಸ್ಸಿನ ಹುಡುಗಿಯರು ಮದುವೆಯಾಗಬೇಕು ಎಂದ AIDUF ಮುಖ್ಯಸ್ಥ
ನವದೆಹಲಿ, ಡಿಸೆಂಬರ್ 02: ಹಿಂದೂಗಳು ಮುಸ್ಲಿಂ ಸೂತ್ರವನ್ನು ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಡಿಯುಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಶುಕ್ರವಾರ ಹೇಳಿದ್ದಾರೆ.
'ಮುಸ್ಲಿಂ ಪುರುಷರು 20ರಿಂದ 22 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮುಸ್ಲಿಂ ಮಹಿಳೆಯರು ಸಹ ಸರ್ಕಾರದ ಅನುಮತಿ ಮೇರೆಗೆ 18 ನೇ ವಯಸ್ಸಿನಲ್ಲಿ ಮದುವೆಯಾಗುತ್ತಾರೆ. ಮತ್ತೊಂದೆಡೆ, ಹಿಂದೂಗಳು ಮದುವೆಗೆ ಮೊದಲು ಒಬ್ಬ, ಎರಡು ಅಥವಾ ಮೂರು ಅಕ್ರಮ ಸಂಬಂಧಗಳನ್ನು ಇಟ್ಟುಕೊಳ್ಳುತ್ತಾರೆ. ಅವರು ಮಕ್ಕಳನ್ನು ಹೆರುವುದಿಲ್ಲ. ನೀವೂ ಸಹ ಶಿಶುಗಳಿಗೆ ಜನ್ಮ ನೀಡಿ, ಆನಂದಿಸಿ ಮತ್ತು ಹಣವನ್ನು ಉಳಿಸಿ' ಎಂದು ಬದ್ರುದ್ದೀನ್ ಅಜ್ಮಲ್ ಸಲಹೆ ನೀಡಿದ್ದಾರೆ.
ಫಲವತ್ತಾದ ಭೂಮಿಯಲ್ಲಿ ಉತ್ತಮ ಬೆಳೆ ಹೊಂದಬಹುದು
ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿದೆ ಎಂಬ ಆರೋಪದ ಬಗ್ಗೆ ಎಐಡಿಯುಎಫ್ ಮುಖ್ಯಸ್ಥರನ್ನು ಕೇಳಿದಾಗ, '40 ವರ್ಷ ವಯಸ್ಸಿನ ನಂತರ ಹಿಂದುಗಳು ಪೋಷಕರ ಒತ್ತಡದಲ್ಲಿ ಮದುವೆಯಾಗುತ್ತಾರೆ. ಹಾಗಾದರೆ, ಅವರು 40ರ ನಂತರ ಮಕ್ಕಳನ್ನು ಹೆರುತ್ತಾರೆ ಎಂದು ನೀವು ಹೇಗೆ ನಿರೀಕ್ಷಿಸುತ್ತೀರಿ?' ಎಂದು ಪ್ರಶ್ನಿಸಿದರು.
'ನೀವು ಫಲವತ್ತಾದ ಭೂಮಿಯಲ್ಲಿ ಬಿತ್ತಿದರೆ ಮಾತ್ರ ಉತ್ತಮ ಬೆಳೆಗಳನ್ನು ಹೊಂದಬಹುದು' ಎಂದೂ ಅವರು ಹೇಳಿದ್ದಾರೆ.
'ಅವರು (ಹಿಂದೂಗಳು) ಮುಸ್ಲಿಮರ ಸೂತ್ರವನ್ನು ಅನುಸರಿಸಬೇಕು. ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡಬೇಕು. 20-22 ನೇ ವಯಸ್ಸಿನಲ್ಲಿ ಮದುವೆ ಮಾಡಬೇಕು. 18-20 ವರ್ಷಕ್ಕೆ ಹುಡುಗಿಯರ ಮದುವೆಯಾಗಬೇಕು' ಎಂದು ತಿಳಿಸಿದ್ದಾರೆ.
ಲವ್ ಜಿಹಾದ್ ಬಗ್ಗೆ ಅಜ್ಮಲ್ ಪ್ರತಿಕ್ರಿಯೆ
ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು 'ಲವ್ ಜಿಹಾದ್' ಕುರಿತು ಹೇಳಿಕೆ ನೀಡಿದ್ದರು.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್, 'ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇಂದು ದೇಶದ ಅಗ್ರಮಾನ್ಯ ನಾಯಕರಲ್ಲಿ ಒಬ್ಬರು. ಹಾಗಾದರೆ, ಅವರನ್ನು ತಡೆಯುವವರು ಯಾರು? ನೀವೂ ಸಹ ನಾಲ್ಕೈದು 'ಲವ್ ಜಿಹಾದ್' ನಡೆಸಿ, ನಮ್ಮ ಮುಸ್ಲಿಂ ಹೆಣ್ಣುಮಕ್ಕಳನ್ನು ಕರೆದುಕೊಂಡು ಹೋಗಿ. ಅದನ್ನು ನಾವು ಸ್ವಾಗತಿಸುತ್ತೇವೆ. ನಿಮ್ಮೊಂದಿಗೆ ಯಾವುದೇ ಕಾರಣಕ್ಕೂ ಜಗಳ ಆಡುವುದಿಲ್ಲ. ನಿಮ್ಮಲ್ಲಿ ಎಷ್ಟರ ಮಟ್ಟಿಗೆ ಶಕ್ತಿ ಇದೆ ಎಂಬುದನ್ನೂ ನೋಡಬಹುದು' ಎಂದು ಅಜ್ಮಲ್ ಹೇಳಿದರು.
ಲವ್ ಜಿಹಾದ್ ಬಗ್ಗೆ ಅಸ್ಸಾಂ ಸಿಎಂ ನೀಡಿದ್ದ ಹೇಳಿಕೆ ಏನು?
ಶ್ರದ್ಧಾ ವಾಕರ್ ಪ್ರಕರಣದಲ್ಲಿ 'ಲವ್ ಜಿಹಾದ್' ಸಂಶಯವಿದೆ ಎಂದು ಅಸ್ಸಾಂ ಸಿಎಂ ಇತ್ತೀಚೆಗೆ ಹೇಳಿದ್ದರು. ಭಾರತಕ್ಕೆ ಏಕರೂಪ ನಾಗರಿಕ ಸಂಹಿತೆ ಮತ್ತು ಲವ್ ಜಿಹಾದ್ ವಿರುದ್ಧ ಕಾನೂನು ಅಗತ್ಯವಿದೆ ಎಂದು ಶರ್ಮಾ ಕಳೆದ ತಿಂಗಳು ತಿಳಿಸಿದ್ದರು.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮುನ್ನ ದೆಹಲಿಯಲ್ಲಿ ನಡೆದ ರೋಡ್ ಶೋನಲ್ಲಿ ಅಸ್ಸಾಂ ಮುಖ್ಯಮಂತ್ರಿ, 'ಭಾರತಕ್ಕೆ ಆಫ್ತಾಬ್ (ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ) ನಂತಹ ವ್ಯಕ್ತಿಯ ಅಗತ್ಯವಿಲ್ಲ. ಆದರೆ ಭಗವಾನ್ ರಾಮನಂತಹ ವ್ಯಕ್ತಿ, ಪ್ರಧಾನಿ ನರೇಂದ್ರ ಮೋದಿಯಂತಹ ನಾಯಕರಂತಹ ಅವಶ್ಯಕತೆ ಇದೆ' ಎಂದು ಹೇಳಿದ್ದರು.
ಮುಸ್ಲಿಂ ಕಾಲೇಜುಗಳಲ್ಲಿ ಹಿಂದೂ ಹುಡುಗಿಯರಿಗೆ ಅವಕಾಶ ನೀಡಲು ಒತ್ತಾಯ
ಮುಸ್ಲಿಂ ಹುಡುಗಿಯರಿಗೆ ಮಾತ್ರ ತೆರೆಯುವ ಕಾಲೇಜುಗಳಲ್ಲಿ ಹಿಂದೂ ಹುಡುಗಿಯರಿಗೆ ಓದಲು ಅವಕಾಶ ನೀಡಬೇಕೆಂದು ವಕ್ಫ್ ಮಂಡಳಿಗೆ ಎಐಯುಡಿಎಫ್ ಮುಖ್ಯಸ್ಥ ಅಜ್ಮಲ್ ಒತ್ತಾಯಿಸಿದರು.
ಮುಸ್ಲಿಂ ಬಾಲಕಿಯರಿಗಾಗಿ 10 ಕಾಲೇಜುಗಳನ್ನು ತೆರೆಯುವುದಾಗಿ ಕರ್ನಾಟಕ ವಕ್ಫ್ ಬೋರ್ಡ್ ಹೇಳಿದೆ.
'ಅವರು ನಿರ್ಮಿಸಿದ ಕಾಲೇಜುಗಳಲ್ಲಿ ಹಿಂದೂ ಹುಡುಗಿಯರಿಗೆ ಅವಕಾಶ ನೀಡಬೇಕು ಎಂದು ಅವರಲ್ಲಿ ಮನವಿ ಮಾಡುತ್ತೇನೆ. ನಾವು ಎಲ್ಲಾ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು ಬಯಸುತ್ತೇವೆ' ಎಂದು ಎಐಯುಡಿಎಫ್ ಮುಖ್ಯಸ್ಥರು ಹೇಳಿದ್ದಾರೆ.