ಅಯೋಧ್ಯೆಯಲ್ಲಿ ಹಿಂದೂಗಳಿಗೆ ಶೌರ್ಯ ದಿವಸ, ಮುಸ್ಲಿಂರಿಗೆ ಕರಾಳ ದಿನ
ಅಯೋಧ್ಯೆ, ಡಿಸೆಂಬರ್ 06 : ಬಾಬ್ರಿ ಮಸೀದಿ ಧ್ವಂಸವಾಗಿ ಇಂದಿಗೆ ಸರಿಯಾಗಿ 26 ವರ್ಷ. ಈ ದಿವಸವನ್ನು 'ಶೌರ್ಯ ದಿನ' ಮತ್ತು 'ವಿಜಯ ದಿನ'ವನ್ನಾಗಿ ಆಚರಿಸಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಹಿಂದೂ ಸಂಘಟನೆಗಳು ರಾಮ ಮಂದಿರ ನಿರ್ಮಾಣವಾಗಲೇಬೇಕು ಎಂದು ಸಂಕಲ್ಪ ಮಾಡಿರುವುದರಿಂದ ಆಯೋಧ್ಯೆಯಲ್ಲಿ ಭಾರೀ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.
ನಾವು ಪ್ರತಿ ದೀಪಾವಳಿಯಂದು ದೀಪ ಬೆಳಗಿದಂತೆ ಇಂದು ಕೂಡ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುವ ಹಿಂದೂಗಳೆಲ್ಲರೂ ಅಯೋಧ್ಯೆಯಲ್ಲಿ ದೀಪ ಬೆಳಗಬೇಕೆಂದು ಹಿಂದೂ ಸಂಘಟನೆಗಳು ಕರೆ ನೀಡಿವೆ. ಹಿಂದೂಗಳ ಆಚರಣೆಗೆ ಪ್ರತಿಯಾಗಿ ಮುಸ್ಲಿಂ ಸಂಘಟನೆಗಳು ಈ ದಿನವನ್ನು 'ಶೋಕ ದಿನ' ಮತ್ತು 'ಕರಾಳ ದಿನ'ವನ್ನಾಗಿ ಆಚರಿಸಲು ನಿರ್ಧರಿಸಿವೆ.
ಬಾಬ್ರಿ ಮಸೀದಿ ಧ್ವಂಸವಾಗಿ 26 ವರ್ಷ: ಅಯೋಧ್ಯೆಯಲ್ಲಿ ಬಿಗಿ ಭದ್ರತೆ
ಆಯೋಧ್ಯೆಯಲ್ಲಿ 2500 ಪೊಲೀಸ್ ಸಿಬ್ಬಂದಿ, ರ್ಯಾಪಿಡ್ ಆ್ಯಕ್ಷನ್ ಫೋರ್ಸ್, ಪ್ಯಾರಾಮಿಲಿಟರಿ ಸಿಆರ್ಪಿಎಫ್ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ. ವಿವಾದಿತ ರಾಮ ಜನ್ಮಭೂಮಿಯ ಸುತ್ತಮುತ್ತ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ. ಮುನ್ನಚ್ಚರಿಕೆಯಾಗಿ ಪೊಲೀಸರು ಹಿಂದೂ ಸಮಾಜ ಪಕ್ಷದ ನಾಲ್ವರು ಕಾರ್ಯಕರ್ತರನ್ನು ತಮ್ಮ ವಶಕ್ಕೆ ಪಡೆದುಕೊಡಿದ್ದಾರೆ. ರಾಮ ಮಂದಿರ ನಿರ್ಮಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದ ತಪಸ್ವಿ ಚಾವ್ನಿ ದೇವಸ್ಥಾನದ ಮಹಂತ ಪರಮಹಂಸ ದಾಸ್ ಎಂಬುವವರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ.
ರಾಮಮಂದಿರ ನಿರ್ಮಾಣಕ್ಕೆ ಕಟಿಬದ್ಧರಾಗಿರುವ ಕರ್ನಾಟಕದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ರಾಮ ಮಂದಿರ ಕೇವಲ ದೇವಸ್ಥಾನ ನಿರ್ಮಾಣದ ಕೆಲಸ ಮಾತ್ರವಲ್ಲ, ಅದು ಸ್ವಯಂ ಗೌರವದ ಮತ್ತು ಹಿಂದೂಗಳ ಅಸ್ತಿತ್ವದ ಸಂಕೇತ. ಜೈ ಶ್ರೀ ರಾಮ್ ಎಂದು ಟ್ವೀಟ್ ಮಾಡಿದ್ದಾರೆ.
25 ವರ್ಷಗಳ ಬಾಬ್ರಿ ಮಸೀದಿ ವಿವಾದ, ಟೈಮ್ ಲೈನ್
ವಿವಾದಿತ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂಬ ಸಂಕಲ್ಪದೊಂದಿಗೆ 1992ರ ಡಿಸೆಂಬರ್ 6ರಂದು, 26 ವರ್ಷಗಳ ಹಿಂದೆ ಸಾವಿರಾರು ಕರಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಆಗ ಉತ್ತರ ಪ್ರದೇಶದಲ್ಲಿ ಬಿಜೆಪಿಯ ನಾಯಕ ಕಲ್ಯಾಣ್ ಸಿಂಗ್ ಮುಖ್ಯಮಂತ್ರಿಯಾಗಿದ್ದರೆ, ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು ಮತ್ತು ಪಿವಿ ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದರು.
ಅಯೋಧ್ಯೆಯಲ್ಲಿ ಮಂದಿರವೂ ಬೇಡ, ಮಸೀದಿಯೂ ಬೇಡ:ಪ್ರೊ.ಕೆ.ಎಸ್. ಭಗವಾನ್
ವಿವಾದಿತ 2.77 ಎಕರೆ ಭೂಮಿಯನ್ನು ಸರಿಯಾಗಿ ಮೂರು ಭಾಗಗಳನ್ನಾಗಿ ಮಾಡಲಾಗಿದ್ದು, ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಮತ್ತು ರಾಮ್ ಲಲ್ಲಾ ನಡುವೆ ಹಂಚಲಾಗಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ 14 ಮೇಲ್ಮನವಿಗಳನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿದೆ. ಆದರೆ ಈ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆಗೆ ತೆಗೆದುಕೊಳ್ಳಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿರುವುದರಿಂದ, ಕೇಂದ್ರ ಸರಕಾರವೇ ರಾಮ ಮಂದಿರ ನಿರ್ಮಾಣಕ್ಕಾಗಿ ಕಾನೂನು ರೂಪಿಸಬೇಕೆಂದು ಹಿಂದೂ ಸಂಘಟನೆಗಳು ಆಗ್ರಹಿಸುತ್ತಿವೆ. ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಜಸ್ಟಿ ಚಲಮೇಶ್ವರ ಅವರು ಕೂಡ ಶಿಫಾರಸು ಮಾಡಿದ್ದಾರೆ.