ಹಿಮಾಚಲ ಪ್ರದೇಶ ಚುನಾವಣೆ 2022: ಸಂಭಾವ್ಯ ಸಿಎಂ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ನವೆಂಬರ್ 12 ರಂದು ಮತದಾನ ನಡೆಯಲಿರುವ ಹಿಮಾಚಲ ಪ್ರದೇಶದಲ್ಲಿ ಹೊಸ ಸರ್ಕಾರಕ್ಕೆ ವೇದಿಕೆ ಸಿದ್ಧವಾಗಿದೆ. ಸಾಂಪ್ರದಾಯಿಕ ಸ್ಪರ್ಧಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈಗಾಗಲೇ 68 ಸದಸ್ಯ ಬಲದ ವಿಧಾನಸಭೆಗೆ ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ ಮತ್ತು ರಾಜಕೀಯ ಪ್ರಚಾರವನ್ನು ತೀವ್ರಗೊಳಿಸಿವೆ.
ಪಕ್ಷಗಳ ಸಂಭಾವ್ಯ ಸಿಎಂ ಅಭ್ಯರ್ಥಿಗಳ ಪಟ್ಟಿಯನ್ನು ನೋಡುವುದಾದರೆ, ಕಾಂಗ್ರೆಸ್ನಲ್ಲಿ ಮೂವರು ಹಿರಿಯ ನಾಯಕರಿದ್ದು, ಅವರ ಜನಪ್ರಿಯತೆ ಮತ್ತು ಅನುಭವದ ಹಿನ್ನೆಲೆಯಲ್ಲಿ ರಾಜ್ಯವನ್ನು ಮುನ್ನಡೆಸಬಹುದು ಎನ್ನಲಾಗುತ್ತಿದೆ. ಬಿಜೆಪಿಯು ಅದರ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರನ್ನು ಮುಂದುವರಿಸಬಹುದು.
ಹಿಮಾಚಲ ಪ್ರದೇಶ ಚುನಾವಣೆ 2022: ಸಿಎಂ ಅಭ್ಯರ್ಥಿ ಹೆಸರಿಸದೆ ಕಣಕ್ಕಿಳಿದ ಬಿಜೆಪಿ
ಬಿಜೆಪಿಯ ಹಿಮಾಚಲ ಪ್ರದೇಶ ಅಧ್ಯಕ್ಷ ಸುರೇಶ್ ಕುಮಾರ್ ಕಶ್ಯಪ್, ''ನಾವು ಅಧಿಕಾರಕ್ಕೆ ಬಂದರೆ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ರಾಜ್ಯವನ್ನು ಮತ್ತೆ ಮುನ್ನಡೆಸುತ್ತಾರೆ. ಸರ್ಕಾರ ರಚಿಸುವ ಭರವಸೆ ನಮಗಿದೆ. ಟಿಕೆಟ್ ಹಂಚಿಕೆಯ ನಂತರ ನಮ್ಮ ಅನೇಕ ನಾಯಕರು ಅಸಮಾಧಾನಗೊಂಡಿದ್ದರೂ ಪಕ್ಷವು ಜನಪ್ರಿಯತೆಯನ್ನು ಗಳಿಸಿದೆ'' ಎಂದಿದ್ದಾರೆ.
ಜೈರಾಮ್ ಠಾಕೂರ್ (ಬಿಜೆಪಿ)
ಜೈರಾಮ್ ಠಾಕೂರ್ ಹಿಮಾಚಲ ಪ್ರದೇಶದ ಹಾಲಿ ಮುಖ್ಯಮಂತ್ರಿಯಾಗಿದ್ದು, ಸೆರಾಜ್ ಕ್ಷೇತ್ರದಿಂದ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಅವರು ಹಿಮಾಚಲ ಪ್ರದೇಶ ಅಸೆಂಬ್ಲಿಯಲ್ಲಿ ಐದು ಬಾರಿ ಶಾಸಕರಾಗಿದ್ದಾರೆ. 1998 ರಿಂದ ನಿರಂತರವಾಗಿ ಗೆದ್ದಿದ್ದಾರೆ. ಠಾಕೂರ್ ABVP ಯೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು 1993 ರಿಂದ 1995 ರವರೆಗೆ BJYM ನ ರಾಜ್ಯ ಕಾರ್ಯದರ್ಶಿ ಸ್ಥಾನವನ್ನು ಅಲಂಕರಿಸಿದರು. 2006 ರಲ್ಲಿ ಅವರನ್ನು ಬಿಜೆಪಿಯ ಹಿಮಾಚಲ ಪ್ರದೇಶ ರಾಜ್ಯ ಅಧ್ಯಕ್ಷರನ್ನಾಗಿ ಮಾಡಲಾಯಿತು.
ಬಿಜೆಪಿ ಆಡಳಿತದಲ್ಲಿ 2009-2012ರ ಅವಧಿಯಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. 2017 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದಿತು, ಆದರೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಸೋತರು. ಠಾಕೂರ್ ಅವರ ಬಲವಾದ ರಾಜಕೀಯ ಹಿಡಿತ ಮತ್ತು RSS ಸಂಪರ್ಕಗಳನ್ನು ಪರಿಗಣಿಸಿ, ಅವರನ್ನು ರಾಜ್ಯವನ್ನು ಮುನ್ನಡೆಸಲು ಆಯ್ಕೆ ಮಾಡಲಾಯಿತು.
ಮಲ್ಲಿಕಾರ್ಜುನ ಖರ್ಗೆಯನ್ನು ಬಲಿಪಶು ಮಾಡಿತಾ ಕಾಂಗ್ರೆಸ್?
ಸುಖವಿಂದರ್ ಸಿಂಗ್ ಸುಖು (ಕಾಂಗ್ರೆಸ್)
ನದೌನ್ ವಿಧಾನಸಭಾ ಕ್ಷೇತ್ರದಿಂದ ಸುಖವಿಂದರ್ ಸಿಂಗ್ ಸ್ಪರ್ಧಿಸಿದ್ದಾರೆ. ಅವರು ಪಕ್ಷದ ಮಾಜಿ ರಾಜ್ಯಾಧ್ಯಕ್ಷರಾಗಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದಾರೆ. ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಗುಡ್ಡಗಾಡು ಪ್ರದೇಶದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹಿಮಾಚಲ ಪ್ರದೇಶದಿಂದ ಮೂರು ಬಾರಿ ಶಾಸಕರಾಗಿರುವ ಸಿಂಗ್ ಅವರು ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯರ ಬೆಂಬಲವನ್ನು ಗಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸುಖ್ವಿಂದರ್ ಸಿಂಗ್, "ಪಕ್ಷ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗಳನ್ನು ಎದುರಿಸುತ್ತಿದೆ. ಹಿಮಾಚಲದಲ್ಲಿ ನಾವು ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯನ್ನು ಹೈಕಮಾಂಡ್ ನಿರ್ಧರಿಸುತ್ತದೆ. ನಾನು ಸ್ಥಾನದ ಬಗ್ಗೆ ಉತ್ಸುಕನಲ್ಲ" ಎಂದಿದ್ದಾರೆ.
ಮುಖೇಶ್ ಅಗ್ನಿಹೋತ್ರಿ (ಕಾಂಗ್ರೆಸ್)
ಹರೋಲಿ ವಿಧಾನಸಭಾ ಕ್ಷೇತ್ರದಿಂದ ಮುಖೇಶ್ ಅಗ್ನಿಹೋತ್ರಿ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಅವರು 2003 ರಲ್ಲಿ ಉನಾ ಜಿಲ್ಲೆಯ ಸಂತೋಕ್ಗಢ್ ನಿಂದ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು ಮತ್ತು 2007 ರಲ್ಲಿ ಮರು ಆಯ್ಕೆಯಾದರು.
ಅಗ್ನಿಹೋತ್ರಿ ಅವರು 2012 ಮತ್ತು 2017 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ತಮ್ಮ ವಿಜಯವನ್ನು ಗುರುತಿಸಿದರು. ಡಿಲಿಮಿಟೇಶನ್ ಮೊದಲು ಹರೋಲಿ ಕ್ಷೇತ್ರವನ್ನು ಸಂತೋಖ್ಗಢ ಎಂದು ಕರೆಯಲಾಗುತ್ತಿತ್ತು. ಅವರ ಭದ್ರಕೋಟೆಯಿಂದ ನಾಲ್ಕು ಬಾರಿ ಶಾಸಕರಾಗಿರುವ ಅಗ್ನಿಹೋತ್ರಿ ಅವರು ರಾಜ್ಯ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. 2017 ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಅಗ್ನಿಹೋತ್ರಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ನಾಯಕರಾಗಿ ಆಯ್ಕೆಯಾದರು.
ಪ್ರತಿಭಾ ಸಿಂಗ್ (ಕಾಂಗ್ರೆಸ್)
ಪ್ರತಿಭಾ ಸಿಂಗ್ ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಅವರು ದಿವಂಗತ ಕಾಂಗ್ರೆಸ್ ನಾಯಕ ಮತ್ತು ಆರು ಬಾರಿ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪತ್ನಿ. ಪ್ರತಿಭಾ ಸಿಂಗ್ ಅವರು ಮಹೇಶ್ವರ್ ಸಿಂಗ್ ಅವರನ್ನು ಸೋಲಿಸಿ ಮಂಡಿ ಕ್ಷೇತ್ರದಿಂದ 2004ರಲ್ಲಿ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾದರು. ಈ ಸ್ಥಾನವನ್ನು ಆಕೆಯ ಪತಿ ವೀರಭದ್ರ ಸಿಂಗ್ ಪ್ರತಿನಿಧಿಸಿದ್ದಾರೆ. 2013 ರ ಉಪಚುನಾವಣೆಯಲ್ಲಿ ಅವರು ಅದೇ ಕ್ಷೇತ್ರದಿಂದ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರನ್ನು ಸೋಲಿಸಿದರು. ಅವರ ಪತಿ ಮುಖ್ಯಮಂತ್ರಿಯಾದ ನಂತರ ಮಂಡಿ ಸ್ಥಾನ ತೆರವಾಗಿತ್ತು. ಬಿಜೆಪಿ ಅಭ್ಯರ್ಥಿ ರಾಮ್ ಸ್ವರೂಪ್ ಶರ್ಮಾ ಅವರ ನಿಧನದ ನಂತರ 2021 ರಲ್ಲಿ ಮಂಡಿಯಿಂದ ಲೋಕಸಭಾ ಉಪಚುನಾವಣೆಯಲ್ಲಿ ಅವರು ಗೆದ್ದರು.