ಕಮಲ್ ರಾಜಕೀಯ ಭವಿಷ್ಯದ ಬಗ್ಗೆ ಜ್ಯೋತಿಷಿ ಹೇಳಿದ ಇಂಟರೆಸ್ಟಿಂಗ್ ಸಂಗತಿ
ನಟ ಕಮಲ್ ಹಾಸನ್ ತಮಿಳುನಾಡು ರಾಜಕಾರಣಕ್ಕೆ ಪ್ರವೇಶ ಮಾಡುವುದು ಬಹುತೇಕ ಖಚಿತವಾಗಿದೆ. ಆದರೆ ರಾಜಕಾರಣದಲ್ಲಿ ಅವರ ಭವಿಷ್ಯ ಹೇಗಿದೆ, ಅದರಲ್ಲಿ ಯಶಸ್ಸು ಕಾಣುತ್ತಾರಾ? ಕಮಲ್ ಹಾಸನ್ ಜಾತಕದ ಪ್ರಕಾರ ಅವರ ಭವಿಷ್ಯ ಹೇಗಿದೆ ಎಂಬ ಬಗ್ಗೆ ದೆಹಲಿಯಲ್ಲಿ ವಾಸವಿರುವ ತಮಿಳುನಾಡು ಮೂಲದ ಜ್ಯೋತಿಷಿಯಾದ ರಾಧನ್ ಪಂಡಿತ್ ತಿಳಿಸಿದ್ದಾರೆ.
ಅವರು ಹೇಳುವ ಪ್ರಕಾರ ಕಮಲ್ ಹಾಸನ್ ರ ಜಾತಕವು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ ಅವರ ಜಾತಕವನ್ನು ಹೋಲುತ್ತದಂತೆ. ಮತ್ತು ಕಮಲ್ ರ ಉಚ್ಛ್ರಾಯ ಕಾಲ ಈಗಷ್ಟೇ ಆರಂಭವಾಗಿದೆಯಂತೆ. ಅವರ ಜಾತಕದ ಪ್ರಕಾರ ಇನ್ನೂ ಇಪ್ಪತ್ತು- ಇಪ್ಪತ್ತೈದು ವರ್ಷ ರಾಜಕಾರಣದಲ್ಲಿ ಇರುವಷ್ಟು ಕಮಲ್ ಆರೋಗ್ಯ ಸ್ಥಿತಿಯೂ ಚೆನ್ನಾಗಿರುತ್ತದಂತೆ.
ತಮಿಳುನಾಡಿನ ರಾಜಕಾರಣದಲ್ಲಿ ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರ ಜಾತಕ ಅದ್ಭುತವಾಗಿದೆಯಂತೆ. ಆದರೆ ಅದನ್ನೂ ಮೀರಿಸುವಂಥ ಯೋಗ ಕಮಲ್ ಗೆ ಇದೆ ಎಂದು ಭವಿಷ್ಯ ನುಡಿದಿರುವ ರಾದನ್ ಪಂಡಿತ್, ಮುಂದೊಂದು ದಿನ ಕಮಲ್ ತಮಿಳುನಾಡಿನ ಮುಖ್ಯಮಂತ್ರಿ ಆಗುವ ಬಗ್ಗೆ ಸುಳಿವು ನೀಡಿದ್ದಾರೆ. ಒಟ್ಟಾರೆಯಾಗಿ ಕಮಲ್ ರಾಜಕಾರಣದ ಪ್ರವೇಶ ಹಾಗೂ ಭವಿಷ್ಯದ ಬಗ್ಗೆ ಜ್ಯೋತಿಷಿ ರಾದನ್ ಪಂಡಿತ್ ಹೇಳಿರುವುದನ್ನು ತಿಳಿಯಲು ಮುಂದೆ ಓದಿ.

ಹಟವಾದಿ ಕಮಲ್ ಹಾಸನ್
ಕಮಲ್ ಹಾಸನ್ ರದು ತುಲಾ ಲಗ್ನ್. ಅವರ ಜನ್ಮ ಜಾತಕದಲ್ಲಿ ಶುಕ್ರ ಹಾಗೂ ಕುಜ ಉಚ್ಚ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ತುಂಬ ಒಳ್ಳೆ ಆಡಳಿತಗಾರರಾಗುತ್ತಾರೆ. ಹೇಳುವುದನ್ನೇ ಮಾಡುವ, ಮಾಡುವುದನ್ನೇ ಹೇಳುವ ಕಮಲ್ ಹಾಸನ್ ವಿಪರೀತ ಎನಿಸುವಷ್ಟು ಹಟವಾದಿ. ಬುದ್ಧಿವಂತರು ಹಾಗೂ ತೀಕ್ಷ್ಣಮತಿ.

ಶುಭ ಯೋಗಗಳಿರುವ ಜಾತಕ
ಚಂದ್ರ-ಮಂಗಳ ಯೋಗ, ಗುರು-ಮಂಗಳ ಯೋಗ, ಗುರು-ಚಂದ್ರ ಯೋಗ, ಮಹಾಲಕ್ಷ್ಮಿ ಯೋಗ ಸೇರಿದಂತೆ ಕಮಲ್ ಹಾಸನ್ ರ ಜನ್ಮ ಜಾತಕದಲ್ಲಿ ನಾನಾ ಶುಭ ಯೋಗಗಳಿವೆ. ಆದರೆ ಕಳತ್ರ ದೋಷವಿದೆ. ಇದರಿಂದ ಸಿನಿಮಾ ರಂಗದಲ್ಲಿ ಕಮಲ್ ಅದೇನೇ ಹೆಸರು, ಕೀರ್ತಿ ಸಂಪಾದಿಸಿರಬಹುದು. ಆದರೆ ಸಾಮಾನ್ಯ ಮನುಷ್ಯರು ಪಡುವಂಥ ಸುಖಗಳನ್ನು ಅವರು ಪಟ್ಟಿಲ್ಲ.

90 ವರ್ಷ ಆಯುಷ್ಯ
63 ವರ್ಷದ ಕಮಲ್ ಹಾಸನ್ ರ ಆಯುಷ್ಯ ಇನ್ನೂ ಇಪ್ಪತ್ತೈದು ವರ್ಷಕ್ಕೂ ಹೆಚ್ಚಿದೆ. ಇನ್ನು ಮುಂದಿರುವುದು ಅವರ ಬಾಳಿನ ಅತ್ಯುತ್ತಮ ಸಮಯ. ಇವರಿಂದ ಬೇರೆಯವರು ಸಹಾಯ ಪಡೆದು ಮೇಲೆ ಬಂದಿರುತ್ತಾರೆ ವಿನಾ, ಇವರು ಇತರರ ಸಹಾಯ ಅಷ್ಟೇನೂ ಪಡೆದಿಲ್ಲ. ಆದರೆ ಸಂಸಾರದ ವಿಚಾರಕ್ಕೆ ಬಂದರೆ ತೀರಾ ಸಾಧಾರಣ ಜಾತಕವಿದು.

2036ನೇ ಇಸವಿಯವರೆಗೆ ಒಳ್ಳೆ ಸಮಯ
ಸದ್ಯಕ್ಕೆ ಕಮಲ್ ಹಾಸನ್ ಗೆ ಶುಕ್ರ ದಶೆ ಬುಧ ಭುಕ್ತಿ ನಡೆಯುತ್ತಿದೆ. ಮುಖ್ಯಮಂತ್ರಿ ಆಗುವ ಎಲ್ಲ ಲಕ್ಷಣಗಳು ಈ ಜಾತಕಕ್ಕಿದೆ. ಮುಂದೆ ಇವರಿಗೆ ರವಿ ದಶೆ ಆರಂಭವಾಗುತ್ತದೆ. ಆಗಂತೂ ತುಂಬ ಒಳ್ಳೆ ಕಾಲ ನಡೆಯುತ್ತದೆ. 2036ನೇ ಇಸವಿಯವರೆಗೆ ಸಮಯ ಬಹಳ ಚೆನ್ನಾಗಿರುತ್ತದೆ ಆದ್ದರಿಂದ ರಾಜಕೀಯದಲ್ಲಿ ಬಹಳ ಸಾಧನೆ ಮಾಡುತ್ತಾರೆ.

ಜಗತ್ತಿನ ನಾನಾ ಭಾಗದಿಂದ ನೆರವು
ಕಮಲ್ ಹಾಸನ್ ಜಾತಕದಲ್ಲೇ ಅದು ಸ್ಪಷ್ಟವಾಗುತ್ತದೆ. ಇವರು ಸುಲಭಕ್ಕೆ ಸೋತು ವಾಪಸ್ ಆಗುವವರಲ್ಲ. ಗುರಿ ಅಂತ ಬಂದರೆ, ಅದೆಷ್ಟೇ ಕಷ್ಟವಾದರೂ ಅದನ್ನು ಸಾಧಿಸಿಯೇ ಸಾಧಿಸುತ್ತಾರೆ. ಇವರಿಗೆ ವಿಶ್ವ ಮಟ್ಟದಿಂದ ಬೆಂಬಲ ದೊರೆಯುತ್ತದೆ. ನಾಳೆ ಇವರು ಪಕ್ಷ ಆರಂಭಿಸಿದರೆ ಹಣಕ್ಕೆ ಎಲ್ಲಿ ಹೋಗುತ್ತಾರೆ ಎಂಬ ಪ್ರಶ್ನೆ ಬರುತ್ತದೆ. ಆ ವಿಷಯದಲ್ಲಿ ಇವರಿಗೆ ಜಗತ್ತಿನ ನಾನಾ ಕಡೆಯಿಂದ ಬೆಂಬಲ ದೊರೆಯುತ್ತದೆ. ಮುಂದಿನ ಚುನಾವಣೆಯಲ್ಲಿ ಡಿಎಂಕೆಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ.

ಪೂರ್ಣ ಪ್ರಮಾಣದಲ್ಲಿ ಮನಸ್ಸು ಮಾಡಬೇಕು
ಇನ್ನೂ ಪೂರ್ಣ ಪ್ರಮಾಣದಲ್ಲಿ ಮನಸ್ಸು ಮಾಡಿರದ ಕಮಲ್ ಹಾಸನ್, ಗುರಿಯಿಟ್ಟು ಪ್ರಯತ್ನಿಸಿದರೆ ಮುಂದಿನ ಚುನಾವಣೆಯಲ್ಲಿಯೇ ಡಿಎಂಕೆ ಸ್ಟಾಲಿನ್ ಅವರನ್ನೂ ಮೀರಿಸಿದ ಜನಪ್ರಿಯತೆ ಹಾಗೂ ಯಶಸ್ಸು ದೊರೆಯುತ್ತದೆ. ಒಂದು ಪಕ್ಷ ಮುಂದಿನ ಚುನಾವಣೆಗೆ ಆಗದಿದ್ದಲ್ಲಿ ಅದರ ಮುಂದಿನ ಚುನಾವಣೆಯಲ್ಲಿ ಕಮಲ್ ಗೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಎಂ.ಜಿ.ಆರ್ ಜಾತಕದ ಜತೆಗೆ ಕಮಲ್ ಸಾಮ್ಯತೆ
ಕಮಲ್ ಹಾಸನ್ ಜಾತಕ ಹತ್ತಿರಹತ್ತಿರ ಎಂ.ಜಿ.ಆರ್ ಅವರ ಜಾತಕದ ಥರವೇ ಇದೆ. ಕಮಲ್ ಒಬ್ಬರು ಸಂಪೂರ್ಣ ಮನುಷ್ಯ. ಆದರೆ ಈ ವರೆಗೆ ಸಾಮರ್ಥ್ಯಕ್ಕೆ ತಕ್ಕಂತೆ ಅವರು ಜೀವನ ನಡೆಸಿಲ್ಲ. ಇನ್ನು ಮುಂದೆ ತಮಿಳುನಾಡಿನ ಜನರಿಗಾಗಿ ಶ್ರಮಿಸುತ್ತಾರೆ.












Click it and Unblock the Notifications