ದಯವಿಟ್ಟು ನನ್ನ ದೇವತೆಯಂಥ ಮಗಳನ್ನು ಬದುಕಿಸಿಕೊಡಿ
ಮಲಗುವ ಮುನ್ನ ಪ್ರತೀರಾತ್ರಿ ನನ್ನ 10 ತಿಂಗಳ ಮಗಳನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತೇನೆ, ಎದೆಗೆ ಬಿಗಿಯಾಗಿ ಅಪ್ಪಿಕೊಂಡು, ಇನ್ನು 15 ದಿನಗಳಲ್ಲಿ ಹೇಗಪ್ಪಾ ಹಣ ಹೊಂದಿಸುವುದು ಅಂತ ಚಿಂತಿಸುತ್ತಿರುತ್ತೇನೆ. ಏಕೆಂದರೆ, ಆ ಪುಟಾಣಿ ನನ್ನ ಬಿಟ್ಟು ಹೋಗಬಾರದಲ್ಲ!
ಸರಿಯಾದ ಸಮಯಕ್ಕೆ ಹಣ ನೀಡದಿದ್ದರೆ ಆಕೆಯ ನಿಶ್ಚಲವಾದ ದೇಹವನ್ನು ನೋಡಬೇಕಾಗುತ್ತದಲ್ಲ ಅಂತ ನನ್ನ ಮನಸ್ಸು ಹೆದರಿಕೆಯಿಂದ ಕಂಪಿಸುತ್ತಿರುತ್ತದೆ, ಪ್ರತಿದಿನ ಹೃದಯ ವಿಲವಿಲ ಒದ್ದಾಡುತ್ತಿರುತ್ತದೆ. ನಂಬಲೇ ಸಾಧ್ಯವಾಗುತ್ತಿಲ್ಲ, ಇದೆಲ್ಲ ಹೇಗಾಯಿತೆಂದು.
ಎಷ್ಟೇ ನಿಲ್ಲಿಸಲು ಯತ್ನಿಸಿದರೂ ಕಣ್ಣಂಚಿನಿಂದ ಧುಮುಕುತ್ತಿದ್ದ ನೀರನ್ನು ತನ್ನ ದುಪಟ್ಟಾದಿಂದ ಒರೆಸಿಕೊಂಡ ಸುಮಯ್ಯಾಳ ತಾಯಿ ತನ್ನ ಮಗಳ ದುರಂತ ಕಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು, ದೇವರ ಸ್ವರೂಪದಲ್ಲಿ ಯಾರಾದರೂ ಹಣಸಹಾಯ ಮಾಡಿ ಮಗಳನ್ನು ಬದುಕಿಸಿಕೊಡುತ್ತಾರೋ ಎಂದು ಎದುರು ನೋಡುತ್ತ.
2016ರ ಜುಲೈ 13ರಂದು ಸ್ವರ್ಗವೇ ಧರೆಗಿಳಿದಂತಿತ್ತು. ಸುಮಯ್ಯಾ ಮತ್ತು ಕುಲ್ಸುಮ್ ಎಂಬ ಎರಡು ಮುದ್ದಾದ ಪುಟಾಣಿಗಳು ಧರೆಗಿಳಿದು ಬಂದಿದ್ದವು. ಅವರಿಬ್ಬರೂ ದಿನದಿಂದ ದಿನಕ್ಕೆ ಬೆಳೆಯುವುದನ್ನು ನೋಡುವುದೇ ಸ್ವರ್ಗಸದೃಶವಾಗಿತ್ತು.
ಅವಳಿ ಜವಳಿಗಳನ್ನು ಬೆಳೆಸುವುದೇ ಅತ್ಯಂತ ಸಂತೋಷವಾದದ್ದು. ಒಬ್ಬರನ್ನೊಬ್ಬರು ನೋಡುತ್ತ ನಗುವುದನ್ನು, ಅಳುವುದನ್ನು ಕಲಿಯುತ್ತಾರೆ. ಉರುಳಾಡುತ್ತ ಹೊರಳಾಡುತ್ತ ಡಬಲ್ ಸಂತೋಷವನ್ನು ಮೊಗೆಮೊಗೆದು ನೀಡುತ್ತಾರೆ. ಆದರೆ, ಅವರಿಬ್ಬರ ಬೆಳವಣಿಗೆಯಲ್ಲಿ ಏರುಪೇರು ಕಂಡಾಗ ಸುಮಯ್ಯಾಳ ತಂದೆ ಮತ್ತು ನಾನು ಕಳವಳಕ್ಕೀಡಾದೆವು.
ಮೇ ತಿಂಗಳಲ್ಲಿ ಕುಲ್ಸುಮ್ ಕತ್ತು ದೃಢವಾಗಿ ನಿಂತಿತ್ತು, ಆಕೆ ತಾನಾಗಿಯೇ ಕುಳಿತುಕೊಂಡು ಕಲಿತಿದ್ದಳು. ಸುಮಯ್ಯಾ ಸ್ವಲ್ಪ ಚಿಕ್ಕವಳಾದ್ದರಿಂದ ಕುಳಿತುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ಸಮಾಧಾನ ಮಾಡಿಕೊಂಡೆವು. ತಿಂಗಳಾದರೂ ಬದಲಾವಣೆ ಕಾಣಿಸಲೇ ಇಲ್ಲ.
ಕುಲ್ಸುಮ್ ಚಟುವಟಿಕೆ ಜೋರಾದರೆ ಸುಮಯ್ಯಾ ಇನ್ನೂ ಹಾಸಿಗೆಯಲ್ಲಿಯೇ ಹೊರಳಾಡುತ್ತಿದ್ದಳು. ಆಕೆ ಕುಳಿತುಕೊಳ್ಳಲು ಏಕೆ ಪ್ರಯತ್ನಿಸುತ್ತಿಲ್ಲ, ಏಕೆ ತಲೆ ಇನ್ನೂ ಗಟ್ಟಿಯಾಗಿ ನಿಂತಿಲ್ಲ? ಎಂಬ ಚಿಂತೆಗಳು ನಮ್ಮಿಬ್ಬರನ್ನು ವಿಪರೀತ ಕಾಡಲು ಆರಂಭಿಸಿದವು.
ನಾವೇ ಸ್ವಲ್ಪ ಪ್ರಯತ್ನಪಟ್ಟರೆ ಆದೀತೆಂದು, ಆಕೆಯನ್ನು ಬಲವಂತವಾಗಿ ನೆಲದ ಮೇಲೆ ಕೂಡಿಸಿದರೆ ಬಲವಾಗಿ ಚೀರಿ ಅಳಲು ಆರಂಭಿಸಿದಳು. ಆಕೆ ಆಪರಿ ಚೀರಿದ್ದು, ಅತ್ತಿದ್ದು ಎಂದೂ ಕಂಡಿರಲಿಲ್ಲ. ಅದನ್ನು ನೆನೆಸಿಕೊಂಡರೇ ನನ್ನ ಹೃದಯ ನೋಯಲು ಆರಂಭಿಸುತ್ತದೆ. ಆ ಕ್ಷಣದಿಂದ ನನ್ನ ಜಗತ್ತೇ ಬದಲಾಯಿತು. ಆ ತಪ್ಪಿಗಾಗಿ ನಾನು ನನ್ನನ್ನು ಎಂದೂ ಕ್ಷಮಿಸುವುದಿಲ್ಲ.
ಇಷ್ಟುದಿನ ಸ್ವರ್ಗವಾಗಿದ್ದ ನಮ್ಮ ಮನೆ ಮರುದಿನದಿಂದ ನರಕದಂತೆ ಕಾಣಿಸಲು ಆರಂಭಿಸಿತು. ಏಕೆಂದರೆ ಸುಮಯ್ಯಾಳ ದೇಹ ನೀಲಿಯಾಗಲು ಆರಂಭಿಸಿತು. ಸುಂದರ ಗೊಂಬೆಯಂತಿದ್ದ ಪುಟಾಣಿ ಸುಮಯ್ಯಾಳ ಮುಖ ನೀಲಿನೀಲಿ! ನೋಡುತ್ತಲೇ ಬೆಚ್ಚಿಬಿದ್ದೆ, ಮನಸ್ಸು ಏನೇನೋ ಕಲ್ಪಿಸಲು ಆರಂಭಿಸಿತು. ಇನ್ನು ನನ್ನ ಪುಟ್ಟ ಕಂದಮ್ಮ ಹೆಚ್ಚು ದಿನ ಬದುಕುವುದಿಲ್ಲ ಎಂದು ಅರಿವಾಗಲು ಆರಂಭಿಸಿತು.
ಈರೀತಿಯ ನರಕಯಾತನೆ ಯಾವ ತಾಯಿಗೂ ದೇವರು ಕರುಣಿಸಬಾರದು. ಸುಮಯ್ಯಾಳ ತಂದೆಯ ಜೊತೆ ಕೂಡಲೆ ಆಸ್ಪತ್ರೆಗೆ ಧಾವಿಸಿದೆ. ಅವರು ಕೆಲವು ಪರೀಕ್ಷೆಗಳನ್ನು ಮಾಡಿಸಲು ಶಿಫಾರಸು ಮಾಡಿದರು. ಅವರು ವಿವರಿಸಿದ್ದು ಹೆಚ್ಚು ಅರ್ಥವಾಗಲಿಲ್ಲವಾದರೂ ಆಕೆಗೆ ಜನ್ಮಜಾತವಾದ ಹೃದಯಸಂಬಂಧಿ ತೊಂದರೆಯಿದೆ ಎಂದು ಗೊತ್ತಾಯಿತು. ಆಕೆಯ ಪುಟಾಣಿ ಹೃದಯದಲ್ಲಿ ರಂಧ್ರವಿದೆ ಎಂದರು ವೈದ್ಯರು. ನನಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು.
ಇದೆಲ್ಲ ಒಂದು ಕೆಟ್ಟ ಕನಸು, ನಿದ್ದೆಯಿಂದೆಲ್ಲ ಮೇಲೆ ಎಲ್ಲ ತಿಳಿಯಾಗಿರುತ್ತದೆ, ಅಂಥದ್ದೇನೂ ಆಗಿರುವುದಿಲ್ಲ ಎಂದು ಎಷ್ಟೋ ಹೇಳಿಕೊಳ್ಳಲು ಯತ್ನಿಸಿದೆ. ಮನೆಗೆ ಮರಳಿ ಸಂತಸದ ಜೀವನ ನಡೆಸಬೇಕೆಂದಿದ್ದ ನನಗೆ ಆ ಆಸ್ಪತ್ರೆಯ ಹಾಸಿಗೆ, ಜೀವತೆಗೆಯುವ ಸೂಜಿ, ವೈದ್ಯರು, ಮಗಳ ಹೃದಯದಲ್ಲಿನ ರಂಧ್ರ... ಇವೆಲ್ಲವೂ ಕಲ್ಪನೆಯಲ್ಲ ಸತ್ಯಸಂಗತಿ ಎಂಬುದನ್ನು ಮತ್ತೆ ಮತ್ತೆ ಹೇಳುತ್ತಿದ್ದವು.
ಸರಿ ಇನ್ನೇನು, ಏನನ್ನೂ ಅರಿಯದ ಕಂದಮ್ಮ ಸುಮಯ್ಯಾಳಿಗೆ ಚಿಕಿತ್ಸೆ ಕೊಡಿಸಿದರಾಯಿತು, ಸರಿಹೋಗುತ್ತಾಳೆ ಎಂದುಕೊಳ್ಳುತ್ತಿದ್ದಾಗ ಬಂತಲ್ಲ ಮತ್ತೊಂದು ಆಘಾತ, ವೈದ್ಯರ ಬಿಲ್! ಸುಮಾರು 2,30,000 ರುಪಾಯಿ ಖರ್ಚಾಗಬಹುದು ಎಂದು ವೈದ್ಯರು ಹೇಳಿದಾಗ ಧರೆಯೇ ಇಬ್ಭಾಗವಾದಂತೆ ಭಾಸವಾಗಿತ್ತು. ಅಷ್ಟು ಹಣವನ್ನೇ ಜೀವನದಲ್ಲಿ ಎಂದೂ ಕಂಡಿಲ್ಲ.
ಕುಟುಂಬದ ಏಕೈಕ ಆಸರೆದಾತರಾಗಿರುವ ಸುಮಯ್ಯಾಳ ತಂದೆ ಕೈಮಗ್ಗದಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಹೆಚ್ಚೆಂದರೆ 3,000 ರುಪಾಯಿ ದುಡಿಯುತ್ತಾರೆ. ನಾನು ಗೃಹಿಣಿ. ಇನ್ನು ಸುಮಯ್ಯಾಳ ಚಿಕಿತ್ಸೆಗೆ ಅಷ್ಟೊಂದು ಹಣವನ್ನು ಹೊಂದಿಸುವುದಾದರೂ ಹೇಗೆ? ಭಗವಾನ್!
ಬೇರೆದಾರಿ ಕಾಣದೆ ನಾನು ಮತ್ತು ಸುಮಯ್ಯಾಳ ತಂದೆ ಹಣ ಹೊಂದಿಸಲು ನಿರ್ಧರಿಸಿದೆವು. ದಯವಿಟ್ಟು ಸಾಧ್ಯವಾದಷ್ಟು ಹಣ ಸಹಾಯ ಮಾಡಿ, ನನ್ನ ಪುಟಾಣಿ ಮಗಳು ಸುಮಯ್ಯಾಳನ್ನು ಬದುಕಿಸಿಕೊಡಲು ನೆರವಾಗಿ. ನೀವು ಕೊಡುವ ದೇಣಿಗೆ ಭಗವಂತನೇ ನೀಡಿದ್ದಾನೆಂದು ತಿಳಿಯುತ್ತೇವೆ.
ಸುಮಯ್ಯಾಳಿಗೆ ಸಿಟಿ ಸ್ಕ್ಯಾನ್ ಮಾಡಿಸಲು ನಾನು ಮದುವೆಯಲ್ಲಿ ಧರಿಸಿದ್ದ ಒಡವೆಯನ್ನು ಒತ್ತೆಯಿಟ್ಟಿದ್ದೇನೆ. ಸುಮಯ್ಯಾಳ ತಂದೆ ದುಡಿಯುವ ಹಣವೆಲ್ಲ ಆಸ್ಪತ್ರೆಯ ಬಿಲ್ ಮತ್ತು ಮಾತ್ರೆಗಳಿಗೇ ಹೋಗುತ್ತಿದೆ. ಸರಕಾರಕ್ಕೂ ಸಹಾಯ ಮಾಡಲು ಅರ್ಜಿ ಸಲ್ಲಿಸಿದ್ದೇವೆ. ಆದರೆ, ಸರಕಾರದಿಂದ ಹಣ ಬರುವುದು ತಡವಾಗುವುದರಿಂದ ಅಷ್ಟು ದಿನ ಕಾಯಲು ಸಾಧ್ಯವೇ ಇಲ್ಲ.
ನಮಗೆ ಪರಿಚಯವಿದ್ದ ಎಲ್ಲ ಬಂಧುಗಳ ಬಾಗಿಲನ್ನೂ ತಟ್ಟಿದ್ದೇವೆ. ಆದರೆ, ಬಹುತೇಕ ಎಲ್ಲರೂ ಮುಚ್ಚಿದ್ದ ಬಾಗಿಲನ್ನು ತೆರೆದಿಲ್ಲ. ಕೆಲವರು ನಂತರ ಹಣದ ಭರವಸೆ ನೀಡಿದರೂ, ಕೇಳಿದಾಗ ಏನೇನೋ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಕಡೆಗೆ ನಮಗೆ ಅರಿವಾಗಿದ್ದೇನೆಂದರೆ, ಬಂಧುಗಳನ್ನು ಕೇಳದೆ ಆ ದೇವತೆಯಂಥ ಮಗಳನ್ನು ಬದುಕಿಸಿಕೊಳ್ಳಲು ನಾವೇ ಏನಾದರೂ ಮಾಡಬೇಕೆಂದು.
ನಾನು ನನ್ನ ಮುದ್ದಾದ ಮಗಳನ್ನು ತುಂಬಾ ಪ್ರೀತಿಸುತ್ತೇನೆ, ಆಕೆಗಾಗಿ ಎಲ್ಲವನ್ನೂ ಧಾರೆಯೆರೆದಿದ್ದೇನೆ. ಆದರೆ ದುರಾದೃಷ್ಟದ ಸಂಗತಿಯೆಂದರೆ, ಅದು ಆಕೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನ ಮಗಳನ್ನು ಬದುಕಿಸಿಕೊಡಿ, Ketto ಮೂಲಕ ಕೈಲಾದಷ್ಟು ದೇಣಿಗೆ ನೀಡಿರಿ. ಇನ್ನು ಕೇವಲ ಕೆಲವೇ ದಿನಗಳು ಉಳಿದಿವೆ.
[ಸುಮಯ್ಯಾಳನ್ನು ಉಳಿಸಲು ದೇಣಿಗೆ ನೀಡಲು ಇಚ್ಛಿಸುವ ಹೃದಯವಂತರು ಮೇಲಿನ ಕೊಂಡಿಯನ್ನು ಕ್ಲಿಕ್ಕಿಸಿ ದೇಣಿಗೆಯನ್ನು ನೀಡಬಹುದು - ಸಂಪಾದಕ.]