Breaking; ಬಿಸಿಗಾಳಿ ಆರ್ಭಟ ಮುಕ್ತಾಯ, ನಿಟ್ಟುಸಿರು ಬಿಟ್ಟ ಜನ
ನವದೆಹಲಿ, ಮೇ 02; ದೇಶದ ವಿವಿಧ ರಾಜ್ಯಗಳಲ್ಲಿ ಬಿಸಿಗಾಳಿಯ ಆರ್ಭಟ ಮುಕ್ತಾಯವಾಗಿದೆ. ಮುಂದಿನ 7 ರಿಂದ 8 ದಿನಗಳ ತನಕ ಉಷ್ಣಾಂಶ ಏರಿಕೆಯಾಗುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಸೋಮವಾರ ಭಾರತೀಯ ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಆರ್. ಕೆ. ಜಿನಮಣಿ ಈ ಕುರಿತು ಮಾತನಾಡಿದರು, "ದೇಶದ ವಿವಿಧ ಪ್ರದೇಶಗಳಲ್ಲಿ ಬಿಸಿಗಾಳಿಯ ಪ್ರಭಾವ ತಗ್ಗಿದೆ" ಎಂದರು.
"ದೆಹಲಿ, ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದಲ್ಲಿ ಬಿಸಿಗಾಳಿಯ ಪ್ರಭಾವ ಈಗ ಇಲ್ಲ. ಮುಂದಿನ ಏಳರಿಂದ ಎಂಟು ದಿನಗಳ ತನಕ ಯಾವುದೇ ರಾಜ್ಯದಲ್ಲಿ ಉಷ್ಣಾಂಶ ಏರಿಕೆಯಾಗುವುದಿಲ್ಲ" ಎಂದು ಹೇಳಿದರು.

"ಈಶಾನ್ಯ ಭಾರತದ ರಾಜ್ಯಗಳಲ್ಲಿ ಮಿಂಚು, ಗುಡುಗಿನಿಂದ ಕೂಡಿದ ಮಳೆಯಾಗಲಿದೆ. ಆದ್ದರಿಂದ ಯೆಲ್ಲೊ ಆಲರ್ಟ್ ಘೋಷಣೆ ಮಾಡಲಾಗಿದೆ. ನವದೆಹಲಿಯಲ್ಲಿ ಮೇ 3ರಂದು ಮಳೆಯಾಗಲಿದೆ" ಎಂದು ಆರ್. ಕೆ. ಜಿನಮಣಿ ತಿಳಿಸಿದರು.
ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 30ರಂದೇ ಬಿಸಿಗಾಳಿಯ ಪ್ರಭಾವ ತಗ್ಗಿದೆ. ಈ ರಾಜ್ಯಗಳಲ್ಲಿ ಎರಡು ದಿನಗಳ ಕಾಲ ಹೆಚ್ಚಿನ ಗಾಳಿ ಬೀಸಲಿದೆ. ರಾಜಸ್ಥಾನ, ದೆಹಲಿ, ಹರ್ಯಾಣ, ಪಂಜಾಬ್ನಲ್ಲಿ ಮೇ 3ರಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 7ರ ತನಕ ಯಾವುದೇ ರಾಜ್ಯದಲ್ಲಿ ಬಿಸಿಗಾಳಿಯ ಪ್ರಭಾವ ಇರುವುದಿಲ್ಲ. ಮುಂದಿನ ಹವಾಮಾನ ಬದಲಾವಣೆ ಬಗ್ಗೆ ಬಳಿಕ ಮಾಹಿತಿ ನೀಡಲಾಗುತ್ತದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಕಳೆದ ವಾರ ದೇಶದ ಹಲವು ರಾಜ್ಯಗಳು ಬಿಸಿಗಾಳಿಗೆ ಸಿಲುಕಿದ್ದವು. ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ದಾಟಿ ಜನರು ಪರದಾಡಿದ್ದರು. ಈಗ ಉಷ್ಣಾಂಶ ಕುಸಿತವಾಗುತ್ತಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.












Click it and Unblock the Notifications