ಸಂಪುಟ ವಿಸ್ತರಣೆ; ಆರೋಗ್ಯ ಇಲಾಖೆ ಇಬ್ಬರು ಸಚಿವರ ರಾಜೀನಾಮೆ!
ನವದೆಹಲಿ, ಜುಲೈ 07; ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆಯಾಗಲಿದೆ. 43 ಸಚಿವರು ಸಂಪುಟ ಸೇರಲಿದ್ದಾರೆ. ಹಲವು ಸಚಿವರನ್ನು ಸಂಪುಟದಿಂದ ಕೈಬಿಟ್ಟಿದ್ದು, ಅವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.
ಕುತೂಹಲದ ವಿಚಾರವೆಂದರೆ ಆರೋಗ್ಯ ಇಲಾಖೆಯಲ್ಲಿ ಇಬ್ಬರು ಸಚಿವರು ರಾಜೀನಾಮೆ ನೀಡಿದ್ದಾರೆ. ಪ್ರತಿಪಕ್ಷದ ಹಲವು ನಾಯಕರು ಸಹ ಈ ವಿಚಾರದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಬುಧವಾರ ಕೇಂದ್ರ ಆರೋಗ್ಯ ಖಾತೆ ಸಚಿವ ಡಾ. ಹರ್ಷವರ್ಧನ್ ಮತ್ತು ಇಲಾಖೆಯ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಇಬ್ಬರೂ ಸಚಿವರ ರಾಜೀನಾಮೆ ಚರ್ಚೆಗೆ ಕಾರಣವಾಗಿದೆ.

ಕೋವಿಡ್ ನಿರ್ವಹಣೆ ಮಾಡಲು ವಿಫಲವಾದ ಹಿನ್ನಲೆಯಲ್ಲಿ ಇಬ್ಬರೂ ಸಚಿವರನ್ನು ಬದಲಾವಣೆ ಮಾಡಲಾಗಿದೆ ಎಂಬ ಸುದ್ದಿ ಹಬ್ಬಿದೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಸಹ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದ ಡಿ. ವಿ. ಸದಾನಂದ ಗೌಡ, ರಮೇಶ್ ಪೊಕ್ರಿಯಾಲ್, ಸಂತೋಷ್ ಗಂಗವರ್, ದೇವೇಂದ್ರ ಚೌಧರಿ, ಸಂಜಯ್, ಬಾಬುಲ್ ಸುಪ್ರಿಯೊ, ರಾವ್ ಸಾಹೇಬ್ ದಾನವೆ ಪಾಟಿಲ, ರತನ್ ಕಟಾರಿಯಾ, ಪ್ರತಾಪ್ ಸಾರಂಗಿ, ಥಾವರ್ ಚಂದ್ ಗೆಹ್ಲೋಟ್ ರಾಜೀನಾಮೆ ಸಲ್ಲಿಸಿದ್ದಾರೆ.
ಕರ್ನಾಟಕದ ನಾಲ್ವರು ಸಂಪುಟಕ್ಕೆ; ಪ್ರಧಾನಿ ನರೇಂದ್ರ ಮೋದಿ ಸಂಪುಟ ವಿಸ್ತರಣೆ ವೇಳೆ ಕರ್ನಾಟಕದ ನಾಲ್ವರು ಸಂಪುಟ ಸೇರುತ್ತಿದ್ದಾರೆ. ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಸಂಸದ ಎ. ನಾರಾಯಣ ಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಸಚಿವರಾಗುತ್ತಿದ್ದಾರೆ.
ಸದಾನಂದ ಗೌಡ ರಾಜೀನಾಮೆ; ಕರ್ನಾಟಕದ ನಾಲ್ವರು ಸಂಸದರು ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಲಿದ್ದಾರೆ. ಆದರೆ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ. ವಿ. ಸದಾನಂದ ಗೌಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
2014ರಲ್ಲಿ ಮೋದಿ ಪ್ರಧಾನ ಮಂತ್ರಿಯಾಗಿದ್ದಾಗ ಸದಾನಂದ ಗೌಡರಿಗೆ ಪ್ರಭಾವಿಯಾದ ರೈಲ್ವೆ ಖಾತೆ ನೀಡಲಾಗಿತ್ತು. ಬಳಿಕ ಖಾತೆಯನ್ನು ಬದಲಾವಣೆ ಮಾಡಲಾಗಿತ್ತು. 2019ರಲ್ಲಿಯೂ ಎನ್ಡಿಎ ಸರ್ಕಾರ ರಚನೆಯಾದಾಗ ಸದಾನಂದ ಗೌಡರಿಗೆ ಸಚಿವ ಸ್ಥಾನ ಸಿಕ್ಕಿತ್ತು.












Click it and Unblock the Notifications