ನಿಜಕ್ಕೂ ಪಾಕ್ ಮಸೂದ್ನನ್ನು ವಶಕ್ಕೆ ಪಡೆದಿದೆಯೇ?
ಬೆಂಗಳೂರು, ಜನವರಿ 14 : ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನನ್ನು ವಶಕ್ಕೆ ಪಡೆದಿದೆ. ಪಾಕಿಸ್ತಾನದ ಈ ಹೇಳಿಕೆಯನ್ನು ಭಾರತ ಪರಿಶೀಲಿಸುತ್ತಿದ್ದು, ಶಾಂತಿ ಮಾತುಕತೆ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡಿಲ್ಲ.
ಜನವರಿ 15ರಂದು ಭಾರತ-ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆ ಆಯೋಜನೆಗೊಂಡಿದೆ. ಆದರೆ, ಈ ಸಭೆ ನಡೆಯುವುದೇ? ಇಲ್ಲವೇ ಎಂಬುದು ಇನ್ನೂ ಖಚಿತಗೊಂಡಿಲ್ಲ. ಪ್ಯಾರಿಸ್ಗೆ ತೆರಳಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಇಂದು ದೆಹಲಿಗೆ ವಾಪಸ್ ಆಗಲಿದ್ದು, ನಂತರ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. [ಮೌಲಾನಾ ಮಸೂದ್ ಸೆರೆ]

ಮಸೂದ್ ಅಜರ್ನನ್ನು ವಶಕ್ಕೆ ಪಡೆದು ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪಾಕ್ ಬುಧವಾರ ಹೇಳಿದೆ. ಶಾಂತಿ ಮಾತುಕತೆಯನ್ನು ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು ಈ ಕುರಿತು ಖಚಿತಪಡಿಸಿಕೊಳ್ಳಲು ಭಾರತ ನಿರ್ಧರಿಸಿದೆ. ವಶಕ್ಕೆ ಪಡೆದಿರುವ ಬಗ್ಗೆ ಸಾಕ್ಷಿಗಳನ್ನು ಭಾರತ ಕೇಳಲಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]
ಮೋದಿ, ಸುಷ್ಮಾ ಸಭೆ : ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಬುಧವಾರ ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಅಜಿತ್ ಡೋವಲ್ ಅವರು ಭಾರತಕ್ಕೆ ವಾಪಸ್ ಆದ ಬಳಿಕ ಶಾಂತಿ ಮಾತುಕತೆ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದ್ದಾರೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]
26/11ರ ದಾಳಿಯ ರೂವಾರಿ ಹಫೀಜ್ನನ್ನು ಪಾಕ್ ಮೊದಲು ಬಂಧಿಸಿರುವುದಾಗಿ ಹೇಳಿತ್ತು. ನಂತರ ಆತನನ್ನು ಬಿಡುಗಡೆ ಮಾಡಿತ್ತು. ಆದ್ದರಿಂದ, ಮಸೂದ್ ಬಂಧನದ ಕುರಿತು ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ಪಾಕ್ ಹೇಳುವಂತೆ ಮಸೂದ್ನನ್ನು ವಶಕ್ಕೆ ಪಡೆದು, ರಹಸ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಪಠಾಣ್ ಕೋಟ್ ದಾಳಿಯ ಸಂಚು ರೂಪಿಸಿದವರ ವಿರುದ್ಧ ಕೈಗೊಳ್ಳುವ ಕ್ರಮಗಳು ತೃಪ್ತಿದಾಯಕವಾಗಿದ್ದರೆ ಮಾತ್ರ ವಿದೇಶಾಂಗ ಕಾರ್ಯದರ್ಶಿಗಳ ಸಭೆಯನ್ನು ನಡೆಸುವ ಕುರಿತು ತೀರ್ಮಾನಿಸುತ್ತೇವೆ ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.












Click it and Unblock the Notifications