ಬುಧವಾರ ಕಾಂಗ್ರೆಸ್ ನಿಯೋಗದ ಜತೆ ಹಾರ್ದಿಕ್ ಪಟೇಲ್ ಮಹತ್ವದ ಮಾತುಕತೆ
ಅಹಮದಾಬಾದ್, ನವೆಂಬರ್ 7: ನಾಳೆ ಕಾಂಗ್ರೆಸ್ ಪಕ್ಷದ ಉನ್ನತ ಮಟ್ಟದ ನಿಯೋಗದ ಜತೆ ಹಾರ್ದಿಕ್ ಪಟೇಲ್ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಪಾಟೀದಾರ್ ಸಮುದಾಯಕ್ಕೆ ಹೇಗೆ ಮೀಸಲಾತಿ ನೀಡುತ್ತೀರಿ ಎಂಬ ಬಗ್ಗೆ ವಿವರಣೆ ನೀಡುವಂತೆ ಹಾರ್ದಿಕ್ ಪಟೇಲ್ ಕೇಳಿಕೊಂಡಿದ್ದಾರೆ. ಹೀಗಾಗಿ ನಾಳೆಯ ಭೇಟಿ ಕುತೂಹಲ ಹುಟ್ಟಿಸಿದೆ.

ಪಟೇಲ್ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ತಮ್ಮ ಬೇಡಿಕೆಗೆ ಕಾಂಗ್ರೆಸ್ ಮಣಿಯದಿದ್ದರೆ ರಾಹುಲ್ ಜಾಥಾಗೆ ಅಡ್ಡಿಪಡಿಸುವುದಾಗಿ ಹಾರ್ದಿಕ್ ವಾರದ ಹಿಂದೆ ಗುಡುಗಿದ್ದರು. ಆದರೆ ಕೊನೆಗೆ ಈ ಬೆದರಿಕೆಯಿಂದ ಸ್ವತಃ ಹಾರ್ದಿಕ್ ಪಟೇಲ್ ಹಿಂದಕ್ಕೆ ಸರಿದಿದ್ದರು.
ಬುಧವಾರ ಮಹತ್ವದ ಸಭೆಗೆ ಕಾಂಗ್ರೆಸ್ ಹಿರಿಯ ವಕೀಲ ಕಪಿಲ್ ಸಿಬಲ್ ನೇತೃತ್ವದ ತಂಡವನ್ನು ಕಳುಹಿಸಿಕೊಟ್ಟಿದೆ. ಈ ತಂಡದಲ್ಲಿ ಬಹುತೇಕರು ಸಂವಿಧಾನ ತಜ್ಞರೇ ಇದ್ದಾರೆ. ಹಾರ್ದಿಕ್ ಬಣದಿಂದ 10 ಜನ ಭಾಗವಹಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಭಯ ಬಣಗಳ ಸಭೆ ನಡೆಯಲಿದೆ.
ಮೂಲಗಳ ಪ್ರಕಾರ ಕಪಿಲ್ ಸಿಬಲ್ ನೇತೃತ್ವದ ತಂಡ ಪಟೇಲರ ಬೇಡಿಕೆಯನ್ನು ಹೇಗೆ ಪರಿಹರಿಸುತ್ತೇವೆ ಎಂಬುದನ್ನು ವಿವರಿಸಲಿದೆ. ಸರಕಾರಿ ಉದ್ಯೋಗ ಹಾಗೂ ಕಾಲೇಜುಗಳಲ್ಲಿ ಯಾವ ರೀತಿಯಾಗಿ ಸೀಟುಗಳನ್ನು ಮೀಸಲಿಡಲಿದೆ ಎಂಬುದನ್ನು ಸ್ಪಷ್ಟಪಡಿಸಲಿದೆ.
ಈಗಾಗಲೇ ಶೇಕಡಾ 50 ಮೀಸಲಾತಿ ಮೀರಬಾರದು ಎಂದು ಸುಪ್ರಿಂ ಕೋರ್ಟ್ ಗಡುವು ವಿಧಿಸಿದೆ. ಹೀಗಿದ್ದೂ ಕೆಲವು ಸರಕಾರಗಳು ಆರ್ಥಿಕ ಸ್ಥಿತಿಗತಿಗಳನ್ನು ಮುಂದಿಟ್ಟು ಕೆಲವು ಜಾತಿಗಳನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿವೆ. ಆದರೆ ಇವುಗಳು ನ್ಯಾಯಾಲಯದಲ್ಲಿ ನಿಂತಿಲ್ಲ.
ಇದೀಗ ಇದೇ ಸಮಸ್ಯೆ ಪಟೇಲ್ ಸಮುದಾಯಕ್ಕೂ ಇದೆ. ಮೇಲ್ವಗರ್ದ ಸಮುದಾಯವಾಗಿದ್ದು ಜತೆಗೆ ಶ್ರೀಮಂತ ಸಮುದಾಯವಾಗಿರುವ ಪಟೇಲರನ್ನು ಹಿಂದುಳಿದ ವರ್ಗಗಳ ಜತೆಗೆ ಸೇರಿಸಲು ಕಾನೂನು ತೊಡಕುಗಳಿವೆ. ಇದನ್ನು ಕಾಂಗ್ರೆಸ್ ಹೇಗೆ ನಿಭಾಯಿಸುತ್ತದೆ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.
ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ಮತದಾನ ನಡೆಯಲಿದ್ದು ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.












Click it and Unblock the Notifications