ಒಂದೇ ಕುಟುಂಬದ 9 ಮಂದಿ ಆತ್ಮಹತ್ಯೆ: ಸಾಲಗಾರರ ಕಾಟವೇ ಕಾರಣ ಎಂದ ಪೊಲೀಸರು
ಮುಂಬೈ, ಜೂನ್ 21: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಒಂಬತ್ತು ಮಂದಿ ಆತ್ಮಹತ್ಯೆಗೆ ಸಾಲಗಾರರ ಕಾಟವೇ ಕಾರಣ ಎಂದು ತಿಳಿದುಬಂದಿದೆ. ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರಿಗೆ ತೊಂದರೆ ನೀಡಿದ ಆರೋಪದ ಮೇಲೆ 13 ಜನರನ್ನು ಬಂಧಿಸಲಾಗಿದೆ ಮತ್ತು 25 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಾಂಗ್ಲಿ ಎಸ್ಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ.
ಕೆಲವು ಖಾಸಗಿ ಲೇವಾದೇವಿದಾರರಿಂದ ಮೃತ ಕುಟುಂಬದವರು ಸಾಲ ಪಡೆದಿದ್ದರು, ಸಾಲಗಾರರ ಕಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವ ಪತ್ತೆಯಾದ ಸ್ಥಳದಲ್ಲಿ ಆತ್ಮಹತ್ಯೆಗೆ ಕಾರಣ ಏನೆಂದು ಪತ್ರದಲ್ಲಿ ಬರೆದಿದ್ದಾರೆ ಎಂದು ಎಸ್ಪಿ ದೀಕ್ಷಿತ್ ಗೆಡಮ್ ತಿಳಿಸಿದ್ದಾರೆ.
ಸೋಮವಾರ, ಇಬ್ಬರು ಸಹೋದರರ ಕುಟುಂಬದ ಒಂಬತ್ತು ಸದಸ್ಯರು ತಮ್ಮ ಮನೆಗಳಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಪೋಪಟ್ ಯಲ್ಲಪ್ಪ ವಾನ್ಮೋರೆ (52), ಸಂಗೀತಾ ಪೋಪಟ್ ವಾನ್ಮೋರೆ (48), ಅರ್ಚನಾ ಪೋಪಟ್ ವಾನ್ಮೋರೆ (30), ಶುಭಂ ಪೋಪಟ್ ವಾನ್ಮೋರೆ (28), ಮಾಣಿಕ್ ಯಲ್ಲಪ್ಪ ವ್ಯಾನ್ಮೋರೆ (49), ರೇಖಾ ಮಾಣಿಕ್ ವ್ಯಾನ್ಮೋರೆ (45), ಆದಿತ್ಯ ಮಾಣಿಕ್ ವ್ಯಾನ್ (15), ಅನಿತಾ ಮಾಣಿಕ್ ವ್ಯಾನ್ಮೋರ್ (28) ಮತ್ತು ಅಕ್ಕತೈ ವ್ಯಾನ್ಮೋರ್ (72) ಎಂದು ಗುರುತಿಸಲಾಗಿದೆ.

ಸಾಲಗಾರರ ಕಾಟದಿಂದ ಬೇಸತ್ತು ಆತ್ಮಹತ್ಯೆ
"ವ್ಯಾನ್ಮೋರ್ ಸಹೋದರರು ಮತ್ತು ಇತರ ಕೆಲವು ಕುಟುಂಬ ಸದಸ್ಯರು ಆರೋಪಿ ಲೇವಾದೇವಿದಾರರಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದಿದ್ದರು. ಸಕಾಲಕ್ಕೆ ಬಡ್ಡಿಯನ್ನು ಪಾವತಿಸುತ್ತಿದ್ದರೂ, ಸಾಲ ನೀಡಿದವರು ಮತ್ತು ಇತರ ಆರೋಪಿಗಳು ಪ್ರತಿನಿತ್ಯ ಅವರಿಗೆ ಮೌಖಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದರು. ಕಿರುಕುಳ ಹೆಚ್ಚಾದ ನಂತರ, ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ" ಎಂದು ಸ್ಥಳೀಯ ಅಪರಾಧ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಅಜಯ್ ಸಿಂಡ್ಕರ್ ಹೇಳಿದ್ದಾರೆ.
ಸೋಮವಾರ ಬೆಳಗ್ಗೆಯಿಂದ ಎರಡೂ ಮನೆಯ ಬಾಗಿಲು ತೆರೆದಿಲ್ಲ. ಬಾಗಿಲು ತೆರೆಯದಿರುವುದನ್ನು ನೆರೆಹೊರೆಯವರು ಗಮನಿಸಿದ್ದಾರೆ. ಬಾಗಿಲು ಬಡಿದ ವೇಳೆ ಯಾರೂ ಉತ್ತರಿಸದಿದ್ದಾಗ, ಬಾಗಿಲು ಒಡೆದು ಒಳಗೆ ಹೋದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಒಂದು ಮನೆಯಲ್ಲಿ ಆರು ಜನರ ಶವ ಪತ್ತೆಯಾದರೆ. ಉಳಿದ ಮೂವರ ಶವಗಳು ಮತ್ತೊಂದು ಮನೆಯಲ್ಲಿ ಪತ್ತೆಯಾಗಿದ್ದವು.
ಸಾಂಗ್ಲಿ ಜಿಲ್ಲೆಯ 15,000 ಜನಸಂಖ್ಯೆಯನ್ನು ಹೊಂದಿರುವ ಮಹೈಸಾಲ್ ಎಂಬ ಪಟ್ಟಣದಲ್ಲಿ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ, ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಮನೆಗಳ ಬಳಿ ಸಾಕಷ್ಟು ಜನ ಜಮಾಯಿಸಿದ್ದರು. ಪೊಲೀಸರು ಆಗಮಿಸಿ ಶವಗಳನ್ನು ಹೊರತೆಗೆದು, ಶವ ಪರೀಕ್ಷೆಗಾಗಿ ಆಸ್ಪತ್ರೆಗಾಗಿ ಸಾಗಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಕ್ಷಿತ್ ಕುಮಾರ್ ಗೆಡಮ್, ಉಪ ಪೊಲೀಸ್ ಅಧೀಕ್ಷಕ ಅಶೋಕ್ ವಿರ್ಕರ್ ಮತ್ತು ಉನ್ನತ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ದುಬುಲೆ ಸೇರಿದಂತೆ ಮೀರಜ್ಗಾಂವ್ ಪೊಲೀಸರ ತಂಡವು ಎರಡು ಸ್ಥಳಗಳಿಗೆ ಭೇಟಿ ನೀಡಿ ಸಾಮೂಹಿಕ ಆತ್ಮಹತ್ಯೆಯ ಕುರಿತು ತನಿಖೆ ಆರಂಭಿಸಿದ್ದಾರೆ.
ಪಶುವೈದ್ಯರಾಗಿದ್ದ ಕಿರಿಯ ಸಹೋದರ ಮಾಣಿಕ್ ಮತ್ತು ಆತನ ಕುಟುಂಬದ ಸಾವು ಗ್ರಾಮಸ್ಥರಲ್ಲಿ ದಿಗ್ಭ್ರಮೆ ಮೂಡಿಸಿದೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸುತ್ತಿದ್ದ ಮಾಣಿಕ್ ಕುಟುಂಬದ ಸದಸ್ಯರ ಆತ್ಮಹತ್ಯೆಯಿಂದ ಜನ ಆಘಾತಕ್ಕೊಳಗಾಗಿದ್ದಾರೆ.












Click it and Unblock the Notifications