ಮತ್ತಷ್ಟು ವಿಷಮಿಸಿದ ಯೋಧ ಹನುಮಂತಪ್ಪನ ಆರೋಗ್ಯ
ನವದೆಹಲಿ, ಫೆಬ್ರವರಿ 10 : ಇದೀಗ ಬಂದ ಮಾಹಿತಿಯ ಪ್ರಕಾರ, ಲಾನ್ಸ್ ನಾಯಕ್ ಅವರ ದೇಹಸ್ಥಿತಿ ಮತ್ತಷ್ಟು ವಿಷಮಿಸಿದ್ದು, ಅವರು ಬಹುಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಮತ್ತೊಂದು ಪವಾಡ ನಡೆಯುವ ಸಂಭವನೀಯತೆ ಕ್ರಮೇಣ ಕ್ಷೀಣಿಸುತ್ತಿದೆ.
ಸಂಜೆ 4 ಗಂಟೆಗೆ ರಿಸರ್ಚ್ ಅಂಡ್ ರೆಫರಲ್ ಆಸ್ಪತ್ರೆಯ ಅಧಿಕಾರಿಗಳು ಹನುಮಂತಪ್ಪ ಕೊಪ್ಪದ ಅವರ ಸ್ಥಿತಿಗತಿಯ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅವರ ಮಿದುಳಿಗೆ ಆಮ್ಲಜನಕ ಸರಬರಾಜು ಆಗುವುದು ಕಡಿಮೆಯಾಗಿದೆ. ಎರಡೂ ಪುಪ್ಪುಸಗಳಿಗೆ ಸೋಂಕು ತಗುಲಿದೆ. ಬಹುಅಂಗಾಂಗ ವೈಫಲ್ಯ ಮುಂದುವರಿದಿದೆ.
ಎಷ್ಟೇ ಪ್ರಯತ್ನ ಪಟ್ಟರೂ ಅವರ ಆರೋಗ್ಯ ಸ್ಥಿತಿ ವಿಷಮಿಸುತ್ತಾ ಸಾಗಿದೆ. ತುರ್ತು ಆರೈಕೆ ತಜ್ಞರು, ನವದೆಹಲಿಯ ಎಐಐಎಂಎಸ್ ಆಸ್ಪತ್ರೆಯ ತಜ್ಞರ ತಂಡ, ನರರೋಗ ತಜ್ಞರು, ಮೂತ್ರಕೋಶ ಪರಿಣಿತ ವೈದ್ಯರು ಸತತವಾಗಿ ಹನುಮಂತಪ್ಪ ಅವರ ಆರೋಗ್ಯ ಸುಧಾರಣೆಗೆ ಚಿಕಿತ್ಸೆ ನೀಡುತ್ತಿದ್ದಾರೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]
ಹಿಂದಿನ ಸುದ್ದಿ : ಈಗ ಮತ್ತೊಂದು ಪವಾಡ ನಡೆಯಬೇಕಾದಿದೆ! ಸಿಯಾಚಿನ್ ನೀರ್ಗಲ್ಲಿನಲ್ಲಿ ಹುಗಿದುಹೋಗಿ, ಪವಾಡಸದೃಶ ಪಾರಾಗಿ ಬಂದಿದ್ದ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ ಬದುಕುಳಿಯಬೇಕಾದರೆ ಮತ್ತೊಂದು ಪವಾಡ ನಡೆಯಲೇಬೇಕು!
ದೆಹಲಿಯ ರಿಸರ್ಚ್ ಅಂಡ್ ರೆಫರಲ್ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದ ಯೋಧ ಹನುಮಂತಪ್ಪ ಕೊಪ್ಪದ ಅವರ ದೇಹ ನುರಿತ ವೈದ್ಯರು ನೀಡುತ್ತಿರುವ ಚಿಕಿತ್ಸೆಗೆ ಅಷ್ಟಾಗಿ ಸ್ಪಂದಿಸುತ್ತಿಲ್ಲ. [ಹನುಮಂತಪ್ಪರನ್ನು ಪತ್ತೆಹಚ್ಚಿದ ಶ್ವಾನಗಳಿಗೆ ಸೆಲ್ಯೂಟ್]
ಇದೀಗ ಬಂದಿರುವ ಮಾಹಿತಿಯ ಪ್ರಕಾರ, ಅವರ ಎರಡೂ ಮೂತ್ರಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ. ಈ ಸುದ್ದಿ ತಿಳಿಯುತ್ತಿದ್ದ ವಯೋವೃದ್ಧ ನಿವೃತ್ತ ಸಿಐಎಸ್ಎಫ್ ಹೆಡ್ ಕಾನ್ಸ್ಟೇಬಲ್ ಪ್ರೇಮ್ ಸ್ವರೂಪ್ ಅವರು ತಮ್ಮದೊಂದು ಮೂತ್ರಕೋಶವನ್ನು ನೀಡಲು ಮುಂದೆ ಬಂದಿರುವುದು ನಿಜಕ್ಕೂ ಮನಕಲಕುವಂಥದ್ದು.
I heard in news that Lance Naik Hanamanthappa's kidney failed: Retd. CISF Head Constable Prem Swaroop pic.twitter.com/iaAd5Ok8uX
— ANI (@ANI_news) February 10, 2016
ಕಳೆದ 15 ಗಂಟೆಗಳಿಂದ ಹನುಮಂತಪ್ಪ ಅವರು ಕೋಮಾದಲ್ಲಿಯೇ ಇದ್ದಾರೆ. ರಕ್ತದೊತ್ತಡ ತೀವ್ರವಾಗಿ ಕುಸಿದಿದೆ, ನ್ಯುಮೋನಿಯಾದಿಂದಲೂ ಅವರು ಬಳಲುತ್ತಿದ್ದಾರೆ. ಜೊತೆಗೆ ಪಿತ್ತಜನಕಾಂಗ ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನರರೋಗ, ಮೂತ್ರಕೋಶ ತಜ್ಞರು ಅವರ ಆರೋಗ್ಯ ಸುಧಾರಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ. [ಹನುಮಂತಪ್ಪನನ್ನು ಬದುಕಿಸಿದ್ದು ಅಸಾಧ್ಯ ಮನೋಬಲ ಛಲ]
Praying for Lance Naik Hanumanthappa. Fighter, braveheart. Salute to the courageous soldiers who lost their lives in #SiachenAvalanche
— sachin tendulkar (@sachin_rt) February 9, 2016
ಈ ನಡುವೆ, ದೇಶದೆಲ್ಲೆಡೆ ಹನುಮಂತಪ್ಪನವರ ಆರೋಗ್ಯ ಸುಧಾರಿಸಲೆಂದು ಪ್ರಾರ್ಥನೆ ನಡೆಸಲಾಗುತ್ತಿದೆ. ವಾರಣಾಸಿಯಲ್ಲಿ ಹೋಮ ಮಾಡಲಾಗಿದೆ. ಸಚಿನ್ ತೆಂಡೂಲ್ಕರ್, ಅಮಿತಾಭ್ ಬಚ್ಚನ್ ಸೇರಿದಂತೆ ಖ್ಯಾತ ನಾಮರು ಹನುಮಂತಪ್ಪ ಅವರು ಚೇತರಿಸಿಕೊಳ್ಳಲೆಂದು ಭಗವಂತನಲ್ಲಿ ಬೇಡಿಕೊಳ್ಳುತ್ತಿದ್ದಾರೆ.
T 2140 - We pray for him that protects us in extreme circumstances and serves his country .,PRAYERS FOR L/N HUNUMANTHAPPA and his recovery
— Amitabh Bachchan (@SrBachchan) February 9, 2016
ಕಣ್ಣೀರು ತುಂಬಿಕೊಂಡೇ ಹನುಮಂತಪ್ಪ ಅವರ ತಾಯಿ ಬಸಮ್ಮ ಮತ್ತು ಹೆಂಡತಿ ಮಹಾದೇವಿ ತನ್ನ ಕಂದಮ್ಮನೊಡನೆ ದೆಹಲಿಯಲ್ಲಿದ್ದಾರೆ. ಮತ್ತೊಂದು ಪವಾಡ ನಡೆಯುವುದೆ? [ಹನುಮಂತಪ್ಪ ಹುಟ್ಟೂರಿನಲ್ಲಿ ಗ್ರಾಮಸ್ಥರ ಪ್ರಾರ್ಥನೆ]