ಜ್ಞಾನವಾಪಿ ಮಸೀದಿ: ಮೇ 17ರೊಳಗೆ ಸರ್ವೇಗೆ ವಾರಣಾಸಿ ಕೋರ್ಟ್ ಆದೇಶ
ವಾರಾಣಸಿ, ಮೇ 12: ಜ್ಞಾನವಾಪಿ ಮಸೀದಿ ವಿವಾದ ಸಂಬಂಧ ಇಂದು ವಾರಣಾಸಿಯ ವಿಶೇಷ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಮೇ 17ರೊಳಗೆ ಮಸೀದಿಯೊಳಗೆ ಸರ್ವೇಕ್ಷಣೆ ನಡೆಸುವಂತೆ ಸೂಚಿಸಿದೆ. ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯಲ್ಲಿ ಹಿಂದು ದೇವರ ವಿಗ್ರಹಗಳ ಕುರುಹುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಲ್ಲಿ ಸರ್ವೇಕ್ಷಣೆ ಮಾಡಬೇಕೆಂಬುದು ಹಿಂದೂಗಳ ಮನವಿಯಾಗಿದೆ. ಈ ಹಿನ್ನೆಲೆಯಲ್ಲಿ ಮಸೀದಿಯೊಳಗೆ ವಿಡಿಯೋ ಚಿತ್ರೀಕರಣ ಮಾಡಲು ಕೋರ್ಟ್ ಆದೇಶ ಮಾಡಿದೆ. ಕೋರ್ಟ್ ಕಮಿಷನರ್ ಅಜಯ್ ಮಿಶ್ರಾ ನೇತೃತ್ವದ ತಂಡಕ್ಕೆ ಮಸೀದಿಯೊಳಗೆ ಸರ್ವೇಕ್ಷಣೆ ಮಾಡಲು ಸೂಚಿಸಲಾಗಿದೆ. ಮೇ 17ರೊಳಗೆ ಈ ತಂಡ ವರದಿ ಸಲ್ಲಿಸಬೇಕಿದೆ.
ವಾರಣಾಸಿಯ ಕಾಶಿ ವಿಶ್ವನಾಥ್ ಮಂದಿರದ ಬದಿಯಲ್ಲಿರುವ ಗ್ಯಾನವಾಪಿ ಮಸೀದಿ (Gyanvapi Masjid Complex) ವಿಚಾರ ಹಿಂದೂ ಮುಸ್ಲಿಮ್ ನಡುವಿನ ತಿಕ್ಕಾಟಕ್ಕೆ ಕಾರಣವಾಗುತ್ತಿದೆ. ಪುರಾತನ ಹಿಂದೂ ಮಂದಿರ ಕೆಡವಿ ಆ ಸ್ಥಳದಲ್ಲಿ ಜ್ಞಾನವಾಪಿ (ಜ್ಞಾನವಾಪಿ) ಮಸೀದಿ ಕಟ್ಟಲಾಗಿದೆ ಎಂಬುದು ಕೆಲ ಹಿಂದೂಗಳ ಆರೋಪ. ಜ್ಞಾನವಾಪಿ ಮಸೀದಿ ಆವರಣದಲ್ಲಿ ಶೃಂಗಾರ್ ಗೌರಿ ಮತ್ತಿತರ ದೇವರುಗಳ ವಿಗ್ರಹಗಳಿದ್ದು ಅಲ್ಲಿ ದಿನವೂ ಪೂಜೆ ಸಲ್ಲಿಸಬೇಕೆಂದು ಐವರು ಮಹಿಳೆಯರು ಕಳೆದ ವರ್ಷ ವಿಶೇಷ ಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲಿರುವ ಹಿಂದೂ ದೇವರ ವಿಗ್ರಹಗಳಿಗೆ ಯಾವುದೇ ಹಾನಿಯಾಗದಂತೆ ಭದ್ರತೆ ಒದಗಿಸಬೇಕೆಂದು ಇವರು ಕೋರಿದ್ದರು. ಈ ಅರ್ಜಿ ಮೇರೆಗೆ ವಾರಾಣಸಿಯ ಸಿವಿಲ್ ಕೋರ್ಟ್, ಅಡ್ವೊಕೇಟ್ ಆಯುಕ್ತರಿಗೆ ಈದ್ ಬಳಿಕ ಆ ಸ್ಥಳದಲ್ಲಿ ವಿಡಿಯೋ ಸರ್ವೆ ನಡೆಸಿ ಮೇ 10ರೊಳಗೆ ವರದಿ ಸಲ್ಲಿಸಬೇಕೆಂದು ಏಪ್ರಿಲ್ 26ರಂದು ಆದೇಶ ಮಾಡಿತ್ತು. ಕೋರ್ಟ್ ಆದೇಶದಂತೆ ಗ್ಯಾನವಾಪಿ ಮಸೀದಿ ಸ್ಥಳದಲ್ಲಿ ವಿಡಿಯೋ ರೆಕಾರ್ಡ್ ಮಾಡುವ ಕಾರ್ಯಕ್ಕೆ ಮುಸ್ಲಿಮ್ ಸಮುದಾಯದವರು ಅಡ್ಡಿಪಡಿದ್ದರು.
ಕುತೂಹಲವೆಂದರೆ ಜ್ಞಾನವಾಪಿ ಮಸೀದಿಯಲ್ಲಿರುವ ಹಿಂದೂ ದೇವರುಗಳ ಪೂಜೆಗೆ ಅವಕಾಶ ಮಾಡಬೇಕೆಂದು ಕೋರಿದ ಐವರು ಹಿಂದೂ ಮಹಿಳೆಯರ ಪೈಕಿ ರಾಖಿ ಸಿಂಗ್ ಎಂಬಾಕೆ ತಮ್ಮ ಅರ್ಜಿಯನ್ನ ಹಿಂಪಡೆದುಕೊಂಡಿದ್ದರು. ಅವರ ಈ ನಿರ್ಧಾರಕ್ಕೆ ಏನು ಕಾರಣ ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.

ಜ್ಞಾನವಾಪಿ ವಿವಾದದ ಮೂಲ:
ಜ್ಞಾನವಾಪಿ ಕಾಂಪ್ಲೆಕ್ಸ್ನಲ್ಲಿ ಹಿಂದೂ ದೇವರ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ 1991ರಲ್ಲಿ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಕೆಲವಾರು ಅರ್ಜಿಗಳು ಸಲ್ಲಿಕೆಯಾದವು. 17ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬರ ಆದೇಶದಂತೆ ಕಾಶಿ ವಿಶ್ವನಾಥ ಮಂದಿರದ ಒಂದು ಭಾಗವನ್ನು ಕೆಡವಿ ಗ್ಯಾನವಾಪಿ ಮಸೀದಿ ಕಟ್ಟಲಾಯಿತು ಎಂಬುದು ಅರ್ಜಿದಾರರ ವಾದವಾಗಿತ್ತು. 2019ರಲ್ಲಿ ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್ನ ಇಡೀ ಪ್ರದೇಶದಲ್ಲಿ ಸರ್ವೇಕ್ಷಣೆ ನಡೆಯಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು. 2021 ಸೆಪ್ಟೆಂಬರ್ 9ರಂದು ಅಲಹಾಬಾದ್ ಹೈಕೋರ್ಟ್ ಗ್ಯಾನವಾಪಿಯಲ್ಲಿ ಸರ್ವೇಕ್ಷಣೆ ಕಾರ್ಯಕ್ಕೆ ತಡೆ ನೀಡಿತು.
ಬಳಿಕ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶೃಂಗಾರ್ ಗೌರಿ ಮತ್ತಿತರ ಹಿಂದೂ ದೇವರ ವಿಗ್ರಹಗಳಿದ್ದು ಅಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೊಡಬೇಕೆಂದು ಐವರು ಹಿಂದೂ ಅರ್ಜಿದಾರರು ಮನವಿ ಮಾಡಿದರು. ಅಲ್ಲದೇ, ಸಂಕೀರ್ಣದ ಸರ್ವೇಕ್ಷಣೆ ನಡೆಯಬೇಕು ಎಂಬುದು ಹಿಂದೂ ಸಮುದಾಯದವರ ಬೇಡಿಕೆ. ಶೃಂಗಾರ್ ಗೌರಿ ವಿಗ್ರಹ ಇರುವುದನ್ನು ಋಜುವಾತುಡಿಸಲು ಮಸೀದಿಯೊಳಗೆ ಪ್ರವೇಶ ಮಾಡಬೇಕು. ಅದಕ್ಕಾಗಿ ಮಸೀದಿಗೆ ಹೋಗಿ ವಿಡಿಯೋ ಶೂಟ್ ಮಾಡಲು ಸರ್ವೇಕ್ಷಣಾ ತಂಡಕ್ಕೆ ಅನುವು ಮಾಡಿಕೊಡಬೇಕು ಎಂಬುದು ಹಿಂದೂಗಳ ಕೇಳಿಕೊಂಡಿದ್ದರು. ಅದರಂತೆ, ನ್ಯಾಯಾಲಯವು ಸರ್ವೇಕ್ಷಣೆ ನಡೆಸಲು ತಂಡವೊಂದನ್ನು ರಚಿಸಿ ಮೇ 10ರೊಳಗೆ ವರದಿ ನೀಡುವಂತೆ ಸೂಚಿಸಿತು.
ಆದರೆ, ಕೋರ್ಟ್ ನೇಮಿತ ತಂಡವು ಮಸೀದಿಗೆ ಸರ್ವೇಕ್ಷಣೆ ನಡೆಸಲು ಹೋದಾಗ ಅಲ್ಲಿ ಅಡ್ಡಿ ಎದುರಾಗಿದೆ. ಹೀಗಾಗಿ ಸರ್ವೇಕ್ಷಣೆ ಸಾಧ್ಯವಾಗಲಿಲ್ಲ. ಮೇ 9ರಂದು ವಾದ ಪ್ರತಿವಾದ ಆಲಿಸಿದ ನ್ಯಾಯಾಲಯ ಇಂದು ಗುರುವಾರಕ್ಕೆ ತೀರ್ಪು ಕಾಯ್ದಿರಿಸಿತ್ತು.

ಮುಸ್ಲಿಮರ ವಾದವೇನು?:
ಜ್ಞಾನವಾಪಿ ಮಸೀದಿಯ ಪಶ್ಚಿಮ ಭಾಗದ ಗೋಡೆಯ ಹೊರಗೆ ಶೃಂಗಾರ್ ಗೌರಿ ವಿಗ್ರಹ ಇರುವುದು. ಅಲ್ಲದೇ, ಮಸೀದಿಯೊಳಗೆ ವಿಡಿಯೋ ಶೂಟ್ ಮಾಡಬೇಕೆಂದು ಕೋರ್ಟ್ ಆದೇಶ ಮಾಡಿರಲಿಲ್ಲ. ಬ್ಯಾರಿಕೇಡ್ ಆಚೆ ಇರುವ ಕೋರ್ಟ್ಯಾರ್ಡ್ವರೆಗೆ ಮಾತ್ರ ವಿಡಿಯೋ ರೆಕಾರ್ಡಿಂಗ್ ಮಾಡಬಹುದು ಎಂದು ಜ್ಞಾನವಾಪಿ ಮಸೀದಿಯ ನಿರ್ವಹಣಾ ಸಮಿತಿ ಹೇಳಿತ್ತು.

ಮಸೀದಿಯೊಳಗೆ ಮಂದಿರ ಇದೆಯಾ?:
ಜ್ಞಾನವಾಪಿ ಮಸೀದಿ ವಿವಾದದಲ್ಲಿ ಹಿಂದೂಗಳ ಪರ ವಕಾಲತು ಮಾಡುತ್ತಿರುವ ಹರಿಶಂಕರ್ ಜೈನ್ ಪ್ರಕಾರ, ಮಸೀದಿ ಕಟ್ಟಡದಿಂದ ಮಂದಿರದ ಗುರುತುಗಳೆಲ್ಲವನ್ನೂ ಹಂತಹಂತವಾಗಿ ನಾಶ ಮಾಡಲಾಗುತ್ತಿದೆ. ಮಸೀದಿ ಆವರಣದ ಒಳಗೆ ಸರ್ವೇಕ್ಷಣೆ ನಡೆಸಿದರೆ ಅಲ್ಲಿ ಪೂರ್ವದಲ್ಲಿ ಐತಿಹಾಸಿಕ ದೇವಸ್ಥಾನ ಅಸ್ತಿತ್ವದಲ್ಲಿದ್ದುದಕ್ಕೆ ಸಾಕ್ಷಿ ಸಿಗುತ್ತದೆ ಎಂದಿದ್ದಾರೆ. ಮಸೀದಿ ಹೊರಗೆ ನಡೆದ ಉತ್ಖನನದ ವೇಳೆ ಮಸೀದಿಯ ಗೋಡೆಗಳ ಮೇಲೆ ಎರಡು ಪುರಾತನ ಸ್ವಸ್ತಿಕಾ ಚಿಹ್ನೆಗಳ ಕುರುಹು ಸಿಕ್ಕವು. ದೇವರ ವಿಗ್ರಹಗಳ ಅವಶೇಷ, ದೇವರ ಮೂರ್ತಿ ಕೆತ್ತಲಾದ ಕಲ್ಲುಗಳು ಇತ್ಯಾದಿ ವಸ್ತುಗಳು ಸಿಕ್ಕಿರುವುದು ಅಲ್ಲಿ ಹಿಂದೂ ಮಂದಿರ ಅಸ್ತಿತ್ವದಲ್ಲಿದ್ದುಕ್ಕೆ ಸಾಕ್ಷಿಗಳಾಗಿವೆ ಎಂಬುದು ಹರಿಶಂಕರ್ ಜೈನ್ ಅಬಿಪ್ರಾಯ.
(ಒನ್ಇಂಡಿಯಾ ಸುದ್ದಿ)












Click it and Unblock the Notifications