ಗುಜರಾತ್: ಮೊರ್ಬಿ ಆಸ್ಪತ್ರೆಯಲ್ಲಿ ಅಧಿಕಾರಿಗಳ ಬಣ್ಣದಾಟ- ಕೇಳೋರಿಲ್ಲ ಕಾಣೆಯಾದವರ ಪರದಾಟ
ಮೊರ್ಬಿ, ಗುಜರಾತ್ ನವೆಂಬರ್ 1: ಗುಜರಾತ್ನ ಮೊರ್ಬಿ ಸೇತುವೆ ದುರಂತ ದೇಶವನ್ನೇ ಬೆಚ್ಚಿ ಬೀಳಿಸಿದೆ. ನೂರಾರು ಜನರನ್ನು ಬಲಿ ಪಡೆದ ಸೇತುವೆ ಕುಸಿದ ನದಿಯಲ್ಲಿ ತಮ್ಮವರಿಗಾಗಿ ಹಲವಾರು ಜನ ಇಂದಿಗೂ ಹುಡುಕಾಟ ಮುಂದುವರೆಸಿದ್ದಾರೆ. ಹಿರಿಯರು ಕಿರಿಯರು ಎನ್ನದೇ ಮುಗ್ದ ಜೀವಗಳನ್ನು ಈ ಸೇತುವೆ ನದಿ ನೀರಿಗೆ ಚೆಲ್ಲಿದೆ. ದುರಂತ ಸಂಭವಿಸಿದ ಭಾನುವಾರದಿಂದ ಕಾಣೆಯಾದವರ ಹುಡುಕಾಟ ನದಿಯಲ್ಲಿ ಮುಂದುವರೆದಿದೆ.
ಈ ಹೃದಯ ವಿದ್ರಾವಕ ಘಟನೆಯ ಬಳಿಕ ಇಂದು ಪ್ರಧಾನಿ ಮೋದಿ ಗುಜರಾತ್ನ ಮೊರ್ಬಿಯ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿ ಬೆನ್ನಲ್ಲೆ ರಾತ್ರೋರಾತ್ರಿ ಆಸ್ಪತ್ರೆಯೊಂದಕ್ಕೆ ಮೆರುಗು ನೀಡಲಾಗಿದೆ. ಈ ನಡುವೆ ಮಧ್ಯರಾತ್ರಿ ಕಳೆದರೂ ಕಾಣೆಯಾದ ದಂಪತಿಗಾಗಿ ವ್ಯಕ್ತಿಯೊಬ್ಬರು ತೀವ್ರ ಹುಡುಕಾಟ ನಡೆಸಿರುವುದು ಬೆಳಕಿಗೆ ಬಂದಿದೆ. ಎಲ್ಲರೂ ಪ್ರಧಾನಿ ಆಗಮನಕ್ಕಾಗಿ ಆಸ್ಪತ್ರೆ ಸಿಂಗಾರದಲ್ಲಿ ತಲ್ಲೀನರಾದರೆ ವ್ಯಕ್ತಿಯೊಬ್ಬ ತಮ್ಮ ಸಂಬಂಧಿಕರನ್ನು ಆಸ್ಪತ್ರೆಯಲ್ಲಿ ಕಳೆದ ರಾತ್ರಿಯಿಂದಲೂ ಹುಡುಕುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಆದರೆ ಈವರೆಗೂ ಆಸ್ಪತ್ರೆಯಲ್ಲಿ ಯಾರೂ ಕೂಡ ತನ್ನವರು ಎಲ್ಲಿದ್ದಾರೆ ಎನ್ನುವ ಬಗ್ಗೆ ವ್ಯಕ್ತಿಗೆ ಮಾಹಿತಿಯನ್ನು ನೀಡಿಲ್ಲ. ಎಲ್ಲರೂ ಆಸ್ಪತ್ರೆ ಬಣ್ಣ ಸುಣ್ಣ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ದೂರಿದ್ದಾರೆ.

ವಿನೋದ್ ಅವರ ಸೊಸೆ ಮನಿಷಾ ಕೊನೆ ಕರೆ
ಭಾನುವಾರದ ವಿಹಾರಕ್ಕೆಂದು ಮೊರ್ಬಿ ತೂಗು ಸೇತುವೆಗೆ ಹೋಗಿದ್ದ ತನ್ನ ಸೋದರ ಮಾವನ ಚಿಕ್ಕ ಮಗಳು ಮತ್ತು ಆಕೆಯ ಭಾವಿ ಪತಿಗಾಗಿ ಎಲ್ಲೆಂದರಲ್ಲಿ ಹುಡುಕಿದ್ದೇನೆ ಎಂದು ವಿನೋದ್ ದಪತ್ ಹೇಳಿದ್ದಾರೆ.
"ನಾನು ಅವರನ್ನು ಹುಡುಕಲು ಆರಂಭಿಸಿ 24 ಗಂಟೆಗಳಿಗಿಂತ ಹೆಚ್ಚು ಸಮಯವಾಗಿದೆ. ನಾನು ಸೇತುವೆಯ ಸ್ಥಳಕ್ಕೆ ಹೋಗಿದ್ದೆ ಅಲ್ಲೂ ಅವರು ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಬಳಿಕ ಆಸ್ಪತ್ರೆಯಲ್ಲಿ ಎಲ್ಲಾ ಮಹಡಿಯನ್ನು ಹುಡುಕಿದೆ ಅವರು ಪತ್ತೆಯಾಗಿಲ್ಲ. ಅವರನ್ನು ನದಿ ನೀರಿನಿಂದ ಹೊರತೆಗೆಯಲಾಗಿದೆಯೇ? ಇಲ್ಲವೋ? ಯಾವ ಮಾಹಿತಿ ಕೂಡ ಸಿಕ್ಕಿಲ್ಲ. ಆದರೆ ಯಾರೂ ಸಹಾಯ ಕೂಡ ಮಾಡುತ್ತಿಲ್ಲ" ಎಂದು ಅವರು ಸ್ಥಳೀಯ ಮಾದ್ಯಮದ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ವಿನೋದ್ ಅವರ ಸೊಸೆ ಮನಿಷಾ ಕುಟುಂಬಕ್ಕೆ ಕರೆ ಮಾಡಿ ಸೇತುವೆಯತ್ತ ಹೋಗುವುದಾಗಿ ತಿಳಿಸಿದ್ದರು. ಅದೇ ಅವರು ಅವಳಿಂದ ಕೇಳಿದ ಕೊನೆಯ ಮಾತು.

ಕಾಣೆಯಾದವರ ಮಾಹಿತಿ ಸಿಗದೆ ಕುಟುಂಬಸ್ಥರು ಕಣ್ಣೀರು
ಸಂಜೆ 6.31 ರ ಸುಮಾರಿಗೆ ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ್ದಾರೆಂಬ ಸುದ್ದಿ ಕೇಳಿ ವಿನೋದ್ ದಪತ್ ಕುಟುಂಬಕ್ಕೆ ಸಿಡಿಲು ಬಡಿದಂತಾಗಿದೆ. ಅಂದಿನಿಂದ ಸೊಸೆ ಮನಿಷಾ ಅವರ ಫೋನ್ ಸ್ವಿಚ್ ಆಫ್ ಆಗಿದೆ. ಜೊತೆಗೆ ಅವರಿಬ್ಬರ ಬಗ್ಗೆ ಯಾವುದೇ ಮಾಹಿತಿ ಕೂಡ ಸಿಕ್ಕಿಲ್ಲ ಎಂದು ವಿನೋದ್ ಕಣ್ಣೀರು ಹಾಕಿದ್ದಾರೆ.
"ನಾನು ಜಾಮ್ನಗರದಿಂದ ಬಂದಿದ್ದೇನೆ. ನಿನ್ನೆಯಿಂದ ಆಸ್ಪತ್ರೆಯಿಂದ ಘಟನಾ ಸ್ಥಳಕ್ಕೆ ಘಟನಾ ಸ್ಥಳದಿಂದ ಆಸ್ಪತ್ರೆಗೆ ಅಲೆದಾಡಿದ್ದೇನೆ. ನಾನು ಸ್ಥಳಕ್ಕೆ ಹೋಗಿ ನದಿಯಿಂದ ಅನೇಕ ಶವಗಳನ್ನು ಹೊರತೆಗೆಯುವುದನ್ನು ನೋಡಿದೆ. ಆದರೆ ಅವರ ಸುಳಿವು ಸಿಗಲಿಲ್ಲ" ಎಂದು ವಿನೋದ್ ಕಣ್ಣೀರಿಟ್ಟಿದ್ದಾರೆ.

ಆಸ್ಪತ್ರೆಯ ಅಧಿಕಾರಿಗಳ ಮೇಲೆ ನಿರ್ಲಕ್ಷ್ಯದ ಆರೋಪ
ಘಟನೆ ನಡೆದು ಎರಡು ದಿನ ಕಳೆಯುತ್ತಾ ಬಂದಿದೆ. ಅವರ ಜೀವಂತವಾಗಿದ್ದಾರೆಂಬ ಭರವಸೆ ನಮ್ಮಿಂದ ದೂರವಾಗುತ್ತಿದೆ. ಅವರ ಬಗ್ಗೆ ಮಾಹಿತಿ ಇಲ್ಲದೆ ನಾನು ಕುಗ್ಗಿಹೋಗಿದ್ದೇನೆ. ಯಾರಾದರೂ ಅವರ ದೇಹಗಳ ಬಗ್ಗೆ ತಿಳಿದರೆ ನನಗೆ ಹೇಳಬಹುದು. ಆದರೆ ಯಾರೂ ನಮಗೆ ಏನನ್ನೂ ಹೇಳುತ್ತಿಲ್ಲ. ಆಸ್ಪತ್ರೆಯವರು ಪ್ರಧಾನಿಗಾಗಿ ತಮ್ಮ ಆಸ್ಪತ್ರೆ ಗೋಡೆಗಳಿಗೆ ಬಣ್ಣ ಬಳಿಯುತ್ತಿದ್ದಾರೆ. ಇದು ನಮ್ಮ ದೇಶದ ಸ್ಥಿತಿ" ಎಂದು ಅವರು ಆರೋಪಿಸಿದರು.

ಒಪ್ಪಂದದ ಷರತ್ತುಗಳ ಉಲ್ಲಂಘನೆ
ಅಕ್ಟೋಬರ್ 26 ರಂದು ಪುನಃ ತೆರೆಯಲಾದ ಹೊಸದಾಗಿ ನವೀಕರಿಸಿದ ಸೇತುವೆ ಭಾನುವಾರ( ಅಕ್ಟೋಬರ್ 30) ಸಂಜೆ ಸುಮಾರು 500 ಜನರ ತೂಕದ ಅಡಿಯಲ್ಲಿ ಛಿದ್ರವಾಯಿತು. ಸೇತುವೆಯನ್ನು ನವೀಕರಿಸಲು ಗುತ್ತಿಗೆ ಪಡೆದ ಕಂಪನಿಯ ಅಧಿಕಾರಿಗಳು ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ವಾಚ್ಮೇಕರ್ ಓರೆವಾ ಅವರು ನಿಗದಿತ ಅವಧಿಗೆ ಮುಂಚಿತವಾಗಿ ಸೇತುವೆಯನ್ನು ಸಾರ್ವಜನಿಕರಿಗೆ ತೆರೆಯುವ ಮೂಲಕ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮಾತ್ರವಲ್ಲದೆ ಸೇತುವೆ ದುರಸ್ತಿಯನ್ನು ಚಿಕ್ಕ ಕಂಪನಿಗೆ ಹೊರಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications