ಗುಜರಾತ್, ಹಿಮಾಚಲ ಚುನಾವಣೆ ಸಮೀಕ್ಷೆ: ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ?
ನವದೆಹಲಿ, ನವೆಂಬರ್ 10: ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆಗೆ ಚುನಾವಣೆ ದಿನಾಂಕಗಳು ಘೋಷಣೆಯಾಗಿವೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಸಾರಿಯ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಚಾರವೀಗ ಕುತೂಹಲ ಕೆರಳಿಸಿದೆ.
ಈಗಾಗಲೇ ಬಂದಿರುವ ಕೆಲ ಸಮೀಕ್ಷೆಗಳ ಪ್ರಕಾರ, ಆಡಳಿತಾರೂಢ ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಪ್ರಧಾನಿ ಮೋದಿ ವರ್ಚಸ್ಸು ಹಾಗೂ ಹಿಂದುತ್ವ ಈ ಚುನಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಲಿದೆ. ಆಡಳಿತ ವಿರೋಧಿ ಅಲೆ ಕಂಡುಬಂದರೂ, ವಿರೋಧ ಪಕ್ಷಗಳಿಗೆ ಅಷ್ಟಾಗಿ ಲಾಭವಾಗುವುದಿಲ್ಲ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ.
ಹಿಮಾಚಲ ಪ್ರದೇಶ ಚುನಾವಣಾ ರಿಪಬ್ಲಿಕ್ ಸಮೀಕ್ಷೆ: ಬಿಜೆಪಿಗೆ ಗೆಲುವು ಸಾಧ್ಯತೆ
ಮತ್ತೆ ಅಧಿಕಾರ ಗದ್ದುಗೆ ಏರಲಿರುವ ಬಿಜೆಪಿ
ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಮತ್ತೊಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ರಿಪಬ್ಲಿಕ್ ಟಿವಿ-ಪಿ-ಮಾರ್ಕ್ ಸಮೀಕ್ಷೆ ಪ್ರಕಾರ, ಗುಜರಾತ್ನಲ್ಲಿ ಬಿಜೆಪಿಗೆ ಮೂರನೇ ಎರಡರಷ್ಟು ಜಯ ಸಿಗಲಿದೆ.
ಗುಜರಾತ್ನ ಒಟ್ಟು 182 ವಿಧಾನಸಭಾ ಕ್ಷೇತ್ರಗಳಲ್ಲಿ 127 ರಿಂದ 140 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಶೇ. 46.2 ಮತಗಳು ಬಿಜೆಪಿ ಪಾಲಾಗಲಿವೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಸಾರಿ ಗುಜರಾತ್ನಲ್ಲಿ ಬಿಜೆಪಿಗೆ 99 ಸೀಟುಗಳು ಸಿಕ್ಕಿದ್ದವು.
ಕಾಂಗ್ರೆಸ್ಗೆ 37 ರಿಂದ 45 ಸ್ಥಾನಗಳು ದೊರೆಯಲಿವೆ. ಶೇ.28.4ರಷ್ಟು ಮತಗಳನ್ನು ಕಾಂಗ್ರೆಸ್ ಗಳಿಸಲಿದೆ. ಎಎಪಿ ಶೇ 20.6 ರಷ್ಟು ಮತಗಳೊಂದಿಗೆ 9 ರಿಂದ 21 ಸ್ಥಾನಗಳನ್ನು ಗೆಲ್ಲಲಿದೆ.
ಹಿಮಾಚಲ ಪ್ರದೇಶದಲ್ಲೂ ಬಿಜೆಪಿಗೆ ಅಧಿಕಾರ
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ರಿಪಬ್ಲಿಕ್ ಟಿವಿ-ಪಿ-ಮಾರ್ಕ್ ಭವಿಷ್ಯ ನುಡಿದಿದೆ. 68 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 37 ರಿಂದ 45 ಸ್ಥಾನಗಳು ಪಡೆಯಲಿದೆ. ಶೇ 45.2 ಮತಗಳು ಬಿಜೆಪಿ ಪಾಲಾಗಲಿವೆ.
ಕಾಂಗ್ರೆಸ್ 22 ರಿಂದ 28 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ. ಶೇ. 40.1 ಮತಗಳು ಕಾಂಗ್ರೆಸ್ಗೆ ಸಿಗಲಿದೆ. 2017ರ ಚುನಾವಣೆಯ ಫಲಿತಾಂಶಕ್ಕಿಂತ ಈ ಸಾರಿ ಕಾಂಗ್ರೆಸ್ ಸುಧಾರಣೆ ಕಾಣಲಿದೆ ಎಂದು ಸಮೀಕ್ಷೆ ಹೇಳಿದೆ. ಎಎಪಿ ಒಂದು ಸ್ಥಾನವನ್ನು (ಶೇ 5.2) ಪಡೆದರೆ, ಇತರರು 1-4 ಸ್ಥಾನಗಳನ್ನು ಪಡೆಯಬಹುದು.
ಗುಜರಾತ್ನಲ್ಲಿ ತ್ರಿಕೋನ ಸ್ಪರ್ಧೆ
ಪ್ರಧಾನಿ ಮೋದಿ ತವರು ರಾಜ್ಯವಾದ ಗುಜರಾತ್ ಪ್ರತಿಷ್ಠೆಯ ಕಣವಾಗಿದೆ. ಕಳೆದ ಸಾರಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಈ ಸಾರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪೈಪೋಟಿ ಒಡ್ಡಿದೆ. ಎಎಪಿ ನಾಯಕರ ಪ್ರಕಾರ, ಆಮ್ ಆದ್ಮಿ ಪಕ್ಷವು 40 ರಿಂದ 50 ಸ್ಥಾನಗಳನ್ನು ಗೆಲ್ಲಲಿದೆ.
ಗುಜರಾತ್ನಲ್ಲಿ ಕಾಂಗ್ರೆಸ್ ಮೌನ
ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಎಪಿ ಅಬ್ಬರದ ಪ್ರಚಾರ ಕೈಗೊಂಡಿವೆ. ಆದರೆ, ಕಾಂಗ್ರೆಸ್ ಮಾತ್ರ ಮೌನಕ್ಕೆ ಶರಣಾಗಿದೆ. ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ ಕೆಳ ಹಂತದ ಪ್ರಚಾರಕ್ಕೆ ಮಣೆ ಹಾಕಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ಕಾರ್ಯನಿರತರಾಗಿದ್ದಾರೆ. ಕಾಂಗ್ರೆಸ್ನ ಈ ಮೌನ ಪ್ರಚಾರದ ಬಗ್ಗೆ ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದ್ದಾರೆ. 'ನಾವು ಗುಜರಾತ್ನಲ್ಲಿ ಕೆಳ ಹಂತದ ಪ್ರಚಾರ ಮಾಡುತ್ತಿದ್ದೇವೆ' ಎಂದು ರಾಜಸ್ಥಾನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಅಶೋಕ್ ಗೆಹಲೋಟ್ ಹೇಳಿದ್ದಾರೆ. ಭಾರತ್ ಜೋಡೊ ಯಾತ್ರೆಯಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಗುಜರಾತ್ ಚುನಾವಣಾ ಪ್ರಚಾರಕ್ಕೆ ದುಮುಖಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.