ಗುಜರಾತ್ನಲ್ಲಿ ಬಿಜೆಪಿಯದ್ದು ಭ್ರಷ್ಟಾಚಾರ ಪ್ಲಸ್ ಕಮಿಷನ್ ಮಾದರಿ: ರಾಹುಲ್ ಗಾಂಧಿ ವಾಗ್ದಾಳಿ
ಗಾಂಧಿನಗರ, ನವೆಂಬರ್ 22: ಗುಜರಾತ್ನಲ್ಲಿ ಎರಡು ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿದರು. ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪರ ಪ್ರಚಾರ ಮಾಡುವುದಕ್ಕಾಗಿ ಭಾರತ್ ಜೋಡೋ ಯಾತ್ರೆಯಿಂದ ವಿರಾಮ ತೆಗೆದುಕೊಂಡಿದ್ದರು.
ಗುಜರಾತ್ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಆಡಳಿತಾರೂಢ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಗುಜರಾತಿನ ಮೋರ್ಬಿ ಸೇತುವೆ ಕುಸಿತದ ದುರಂತ, ರೈತರ ಸಾಲ ಮತ್ತು ನಿರುದ್ಯೋಗದ ಬಗ್ಗೆ ಮಾತನಾಡಿದರು.
ರಾಜ್ಯ ಸರ್ಕಾರವು ಮೋರ್ಬಿ ದುರಂತದ ಹಿಂದಿನ "ನಿಜವಾದ ಅಪರಾಧಿಗಳ" ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಗುಜರಾತ್ನಲ್ಲಿ ಬಿಜೆಪಿ ಸರ್ಕಾರವು "ಭ್ರಷ್ಟಾಚಾರ ಮತ್ತು ಕಮಿಷನ್ ಮಾದರಿ" ಅನ್ನು ಅನುಸರಿಸುತ್ತದೆ ಎಂದು ರಾಹುಲ್ ಗಾಂಧಿ ಕಿಡಿ ಕಾರಿದರು. ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಪ್ರಚಾರ ಅಬ್ಬರ ಹೇಗಿತ್ತು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಪ್ರಮುಖ ಅಪರಾಧಿಗಳ ವಿರುದ್ಧ ಏಕಿಲ್ಲ ಕ್ರಮ?
ಸೋಮವಾರ ರಾಜ್ಕೋಟ್ನಲ್ಲಿ ಚುನಾವಣಾ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಪಘಾತದ ಸ್ಥಳದಲ್ಲಿ ನಿಯೋಜಿಸಲಾಗಿದ್ದ ವಾಚ್ಮೆನ್ಗಳನ್ನು ಬಂಧಿಸಿ ಜೈಲಿನಲ್ಲಿಟ್ಟರೂ ನಿಜವಾದ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. 'ಬಿಜೆಪಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ದುರಂತದ ಅಪರಾಧಿಗಳಿಗೆ ಏನೂ ಆಗುವುದಿಲ್ಲವೇ,' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಉದ್ಯಮಿಗಳಿಗೆ ನೀಡುವ ಸಾಲಮನ್ನಾ ಸೌಲಭ್ಯ ರೈತರಿಗೆ ಏಕಿಲ್ಲ?
ರೈತರ ಸಾಲದ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರದ ವಿರುದ್ಧ ಹರಿ ಹಾಯ್ದರು. ರೈತರು ಪಡೆದುಕೊಂಡಿರುವ 50,000 ದಿಂದ 1 ಲಕ್ಷ ರೂಪಾಯಿ ಸಾಲವನ್ನು ಮನ್ನಾ ಮಾಡುತ್ತಿಲ್ಲ. ಆದರೆ ದೇಶದ ಮೂರರಿಂದ ನಾಲ್ಕು ಶ್ರೀಮಂತ ವ್ಯಕ್ತಿಗಳ ಕೋಟಿ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡಲಾಗಿದೆ. ಹಾಗಿದ್ದರೆ ರೈತರು ಮಾಡಿರುವ ತಪ್ಪಾದರೂ ಏನು ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.
"ರೈತರು ಸಾಲವನ್ನು ಹಿಂತಿರುಗಿಸದಿದ್ದರೆ, ಅವರನ್ನು ಸುಸ್ತಿದಾರರು ಎಂದು ಕರೆಯಲಾಗುತ್ತದೆ. ಆದರೆ ಕೋಟ್ಯಧಿಪತಿಗಳು ಅದೇ ರೀತಿ ಮಾಡಿದರೆ, ಅದನ್ನು ಅನುತ್ಪಾದಕ ಆಸ್ತಿ ಎಂದು ಕರೆಯಲಾಗುತ್ತದೆ. ಅಲ್ಲದೇ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ," ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದರು.

ಬಂಡವಾಳ ಹಾಕಿದರೂ ರೈತರಿಗೆ ಒಂದು ರೂ. ಸಿಗುವುದಿಲ್ಲ
ಪ್ರಧಾನ ಮಂತ್ರಿ ಭಿಮಾ ಯೋಜನೆಯಲ್ಲಿ ರೈತರು ಬಂಡವಾಳ ಹೂಡುತ್ತಾರೆ, ಆದರೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸರ್ಕಾರದಿಂದ ಸಹಾಯ ಪಡೆಯುವ ಸಮಯ ಬಂದಾಗ ಅವರಿಗೆ ಒಂದೇ ಒಂದು ರೂಪಾಯಿ ಕೂಡ ಸಿಗುವುದಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ದೇಶದ ಕೆಲವು ಬಿಲಿಯನೇರ್ಗಳ ಬಗ್ಗೆ ರಾಹುಲ್ ಗಾಂಧಿ ಸುಳಿವು ನೀಡಿದ್ದು, ಅಂಥವರು ಮಾತ್ರ ಭಾರತದಲ್ಲಿ ಮುಕ್ತವಾಗಿ ಕನಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. "ಈ ಎರಡು-ಮೂರು ಬಿಲಿಯನೇರ್ಗಳ ಬಗ್ಗೆ ನಿಮಗೆ ಗೊತ್ತಿದೆ. ಅವರು ಯಾವುದೇ ವಲಯ, ಯಾವುದೇ ಉದ್ಯಮ, ಡಿಪಾರ್ಟ್ಮೆಂಟಲ್ ಸ್ಟೋರ್ ಅಥವಾ ಏರ್ಪೋರ್ಟ್ಗೆ ಪ್ರವೇಶಿಸಬಹುದು, ಆದರೆ ಸಾಮಾನ್ಯ ನಾಗರಿಕರು ತಮ್ಮ ಕನಸುಗಳನ್ನು ನನಸಾಗಿಸಲು ಬಯಸಿದರೆ ಹಣದುಬ್ಬರ, ಭ್ರಷ್ಟಾಚಾರ ಮತ್ತು ನಿರುದ್ಯೋಗಕ್ಕೆ ಒಳಗಾಗುತ್ತಾರೆ," ಎಂದು ರಾಹುಲ್ ಗಾಂಧಿ ದೂಷಿಸಿದರು.

ಆದಿವಾಸಿಗಳ ಬಗ್ಗೆ ರಾಹುಲ್ ಗಾಂಧಿ ಉಲ್ಲೇಖ
ಸೂರತ್ನಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಆದಿವಾಸಿಗಳತ್ತ ಗಮನ ಹರಿಸಿ ಬಿಜೆಪಿ ಅವರನ್ನು ಅರಣ್ಯವಾಸಿಗಳು ಎಂದು ಕರೆಯುವ ಮೂಲಕ ಅವರನ್ನು ಮೂಲೆಗುಂಪು ಮಾಡಲು ಬಯಸುತ್ತದೆ, ಆದರೆ ಕಾಂಗ್ರೆಸ್ ಪಕ್ಷವು ಬುಡಕಟ್ಟು ಜನಾಂಗದವರಿಗೆ ಎಲ್ಲಾ ಹಕ್ಕುಗಳನ್ನು ನೀಡಲು ಬಯಸುತ್ತದೆ. ಏಕೆಂದರೆ ಅವರು "ದೇಶದ ಮಾಲೀಕರು" ಎಂದು ಹೇಳಿದರು. ಎನ್ಆರ್ಇಜಿಎ ಕುರಿತು ಎರಡು ಪಕ್ಷಗಳ ಕೆಲಸವನ್ನು ಹೋಲಿಕೆ ಮಾಡಿದ ಅವರು, ಕಾಂಗ್ರೆಸ್ ಸರ್ಕಾರ ಬುಡಕಟ್ಟು ಜನಾಂಗದವರಿಗೆ ಯೋಜನೆ ತಂದಿತು. ಎಲ್ಲರಿಗೂ ಉದ್ಯೋಗ ನೀಡಿತು, ಆದರೆ "ಬಿಜೆಪಿ ಬಂದು ಆದಿವಾಸಿಗಳ ಭೂಮಿಯನ್ನು ಕಸಿದುಕೊಂಡಿತು ಮತ್ತು ಎನ್ಆರ್ಇಜಿಎ ಹಗರಣ ಮಾಡಿತು," ಎಂದು ಆರೋಪಿಸಿದರು.
ಕಳೆದ ಸೆಪ್ಟೆಂಬರ್ 7ರಂದು ತಮಿಳುನಾಡಿನಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆಗೆ ರಾಹುಲ್ ಗಾಂಧಿ ವಿರಾಮ ತೆಗೆದುಕೊಂಡು ಪ್ರಸ್ತುತ ಮಹಾರಾಷ್ಟ್ರದ ಮೂಲಕ ಸಾಗುತ್ತಿದ್ದಾರೆ. ಮಂಗಳವಾರದವರೆಗೆ ಯಾತ್ರೆಗೆ ಎರಡು ದಿನಗಳ ವಿರಾಮವಿದ್ದು, ನಂತರ ಮಧ್ಯಪ್ರದೇಶದಿಂದ ಪುನರಾರಂಭವಾಗಲಿದೆ.












Click it and Unblock the Notifications