ಅಂಬೇಡ್ಕರ್ ಮತ್ತು ಮೋದಿ ಬ್ರಾಹ್ಮಣರು: ಗುಜರಾತ್ ಸ್ಪೀಕರ್
ಗಾಂಧಿನಗರ (ಗುಜರಾತ್) ಮೇ 1: ದಲಿತ ನಾಯಕ ಡಾ.ಬಿ.ಆರ್. ಅಂಬೇಡ್ಕರ್ ಒಬ್ಬ ಬ್ರಾಹ್ಮಣ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರೂ ಬ್ರಾಹ್ಮಣರೇ ಎಂದು ಗುಜರಾತ್ ವಿಧಾನಸಭೆ ಸ್ಪೀಕರ್ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ.
ತಿಳಿವಳಿಕೆ ಹೊಂದಿರುವ ಯಾವ ವ್ಯಕ್ತಿಯನ್ನಾದರೂ ಬ್ರಾಹ್ಮಣ ಎಂದು ಕರೆಯುವುದರಲ್ಲಿ ಯಾವ ತಪ್ಪೂ ಇಲ್ಲ ಎಂದು ಅವರು ವಿವರಣೆ ನೀಡಿದ್ದಾರೆ.
ಗಾಂಧಿನಗರದಲ್ಲಿ ಭಾನುವಾರ ಮೆಗಾ ಬ್ರಾಹ್ಮಣ ಉದ್ದಿಮೆ ಸಮಾವೇಶ ಉದ್ದೇಶಿಸಿ ಮಾತನಾಡುವಾಗ ಅವರು ಈ ಹೇಳಿಕೆ ನೀಡಿದ್ದಾರೆ.

'ಅಂಬೇಡ್ಕರ್ ಒಬ್ಬ ಬ್ರಾಹ್ಮಣರಾಗಿದ್ದರು ಎಂದು ಹೇಳುವುದಕ್ಕೆ ನನಗೆ ಅಂಜಿಕೆಯೂ ಇಲ್ಲ. ಜ್ಞಾನವಂತ ವ್ಯಕ್ತಿಯನ್ನು ಬ್ರಾಹ್ಮಣ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರೂ ಬ್ರಾಹ್ಮಣರಾಗಿದ್ದಾರೆ ಎಂದು ನಾನು ಹೇಳುತ್ತೇನೆ' ಎಂದಿದ್ದಾರೆ.
ಅಂಬೇಡ್ಕರ್ ಅವರಿಗೆ ನೀಡಿರುವ ಅಡ್ಡಹೆಸರು (ಸರ್ನೇಮ್) ಬ್ರಾಹ್ಮಣರದ್ದು ಮತ್ತು ಅದನ್ನು ನೀಡಿರುವ ಅವರ ಶಿಕ್ಷಕ ಕೂಡ ಬ್ರಾಹ್ಮಣರಾಗಿದ್ದರು ಎಂದು ತ್ರಿವೇದಿ ಹೇಳಿದ್ದಾರೆ.
ರಾಮ ಕ್ಷತ್ರಿಯ ಜಾತಿಗೆ ಸೇರಿದವನಾಗಿದ್ದರೆ, ಕೃಷ್ಣ ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದವನಾಗಿದ್ದಾನೆ. ಆದರೆ ಋಷಿಗಳು ಅವರನ್ನು ದೇವರನ್ನಾಗಿಸಿದರು ಎಂದೂ ಅವರು ಹೇಳಿಕೆ ನೀಡಿದ್ದಾರೆ.
ತ್ರಿವೇದಿ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಜಾತಿವಾದದ ವಿರುದ್ಧ ತಮ್ಮ ಜೀವಮಾನವಿಡೀ ಹೋರಾಟ ನಡೆಸಿದ ಅಂಬೇಡ್ಕರ್ ಅವರಿಗೆ ಜಾತಿ ಪ್ರಮಾಣಪತ್ರ ನೀಡಲು ತ್ರಿವೇದಿ ಅವರಿಗೆ ಯಾವುದೇ ಹಕ್ಕಿಲ್ಲ. ಅಂಬೇಡ್ಕರ್ ಅವರ ಬೋಧನೆಗಳು ಆರ್ಎಸ್ಎಸ್ ಜತೆ ನಂಟು ಹೊಂದಿರುವ ತ್ರಿವೇದಿ ಅವರಿಗೆ ಅರ್ಥವಾಗಲು ಸಾಧ್ಯವಿಲ್ಲ ಎಂದು ಶಾಸಕ ಜಿಗ್ನೇಶ್ ಮೇವಾನಿ ಟೀಕಿಸಿದ್ದಾರೆ.
ತಮ್ಮ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಸ್ಪಷ್ಟೀಕರಣ ನೀಡಿರುವ ತ್ರಿವೇದಿ, 'ವ್ಯಕ್ತಿಯ ಜ್ಞಾನದ ಮೇಲೆ ಜಾತಿ ನಿರ್ಧರಿತವಾಗಬೇಕೇ ಹೊರತು ಹುಟ್ಟಿನಿಂದ ಅಲ್ಲ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಆದ್ದರಿಂದ ಜ್ಞಾನ ಹೊಂದಿರುವ ಯಾರನ್ನಾದರೂ ಬ್ರಾಹ್ಮಣ ಎಂದೇ ಕರೆಯಬಹುದು. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ' ಎಂದು ತಿಳಿಸಿದ್ದಾರೆ.











Click it and Unblock the Notifications