ಗುಜರಾತ್ ಚುನಾವಣೆ:ಹಳ್ಳಿಗಳಲ್ಲಿ ಕಾಂಗ್ರೆಸ್ನಿಂದ ಕೆಳ ಹಂತಹ ಪ್ರಚಾರ- ಗೆಹಲೋಟ್
ನವದೆಹಲಿ, ಅಕ್ಟೋಬರ್ 18: ಗುಜರಾತ್ ವಿಧಾನಸಭಾ ಚುನಾವಣೆಯು ಸಮೀಪಿಸುತ್ತಿದೆ. ಕೆಲ ದಿನಗಳಲ್ಲೇ ಮತದಾನದ ದಿನಾಂಕ ಘೋಷಣೆಯಾಗಲಿದೆ. ಈ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಬಾರಿ ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಈ ಬಾರಿ ಆಮ್ ಆದ್ಮಿ ಪಕ್ಷವೂ ಕಣಕ್ಕೆ ಧುಮುಕಿದೆ. ಇದು ಆಡಳಿತಾರೂಢ ಬಿಜೆಪಿಗೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಆದರೆ, ಅಬ್ಬರದ ಪ್ರಚಾರಕ್ಕೆ ಕೈಹಾಕದ ಕಾಂಗ್ರೆಸ್ನ ನಡೆ ಮಾತ್ರ ನಿಗೂಢವಾಗೇ ಉಳಿದಿದೆ.
ಇತ್ತ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯಲ್ಲಿ ನಿರತರಾಗಿದ್ದಾರೆ. ಅತ್ತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಿಮಾಚಲ ಪ್ರದೇಶದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ರಾಷ್ಟ್ರ ಮಟ್ಟದ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ.
ಕೆಳ ಹಂತದ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್: ಗೆಹಲೋಟ್
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೋರಾಟ ನಡೆಸುತ್ತಿಲ್ಲ ಎಂಬುದು ಸುಳ್ಳು. ರಾಜ್ಯದಲ್ಲಿ ಪಕ್ಷವು ಕೆಳಹಂತದ ಪ್ರಚಾರ ಮಾಡುತ್ತಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಹೇಳಿದ್ದಾರೆ.
ಗುಜರಾತ್ನಲ್ಲಿ ಚುನಾವಣಾ ಪ್ರಚಾರದ ವೇಳೆ, ಗೆಹಲೋಟ್ ಅವರು ಎನ್ಡಿಟಿವಿಯೊಂದಿಗೆ ಮಾತನಾಡಿದ್ದಾರೆ.

'ಈ ಚುನಾವಣೆ ಹೋರಾಟದಲ್ಲಿ ನಾವಿಲ್ಲ ಎಂದು ನೀವು ಭಾವಿಸಿರಬಹುದು. ಆದರೆ, ನಾವು ಗುಜರಾತ್ನಲ್ಲಿ ದೊಡ್ಡ ಪ್ರಚಾರ ಮಾಡುತ್ತಿದ್ದೇವೆ. ನಮ್ಮ ಶಕ್ತಿ ಹಳ್ಳಿಗಳಲ್ಲಿದೆ. ಗುಜರಾತ್ನ ಗ್ರಾಮೀಣ ಭಾಗಗಳಲ್ಲಿ ಕಾಂಗ್ರೆಸ್ ಬಲಶಾಲಿಯಾಗಿದೆ. ನಾವು ನಗರಗಳಲ್ಲಿ ದುರ್ಬಲರಾಗಿರಬಹುದು. ಆದರೆ, ಕಳೆದ 27 ವರ್ಷಗಳಲ್ಲಿ ಬಿಜೆಪಿಯವರು ಏನು ಮಾಡಿದ್ದಾರೆ ಎಂಬುದನ್ನು ಜನರು ಅರಿತುಕೊಂಡಿದ್ದಾರೆ. ಇದು ನಮಗೆ ಲಾಭ ತಂದು ಕೊಡಲಿದೆ' ಎಂದು ಗೆಹಲೋಟ್ ಪ್ರತಿಪಾದಿಸಿದ್ದಾರೆ.
ಗುಜರಾತ್ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಪಾಲ್ಗೊಳ್ಳದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಗೆಹಲೋಟ್ , 'ಅವರಿಗೆ(ರಾಹುಲ್ ಗಾಂಧಿ) ಒಂದು ಮಾರ್ಗವಿದೆ. ಅವರು ಅದನ್ನು ಅನುಸರಿಸುತ್ತಾರೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಮ್ಮ ಪ್ರಚಾರ ಸಾಗುತ್ತಿದೆ. ಅಗತ್ಯವಿದ್ದಾಗ ರಾಹುಲ್ ಸಹ ಪ್ರಚಾರದಲ್ಲಿ ಭಾಗವಹಿಸಬಹುದು. ಆದರೆ, ನಮಗಿಲ್ಲಿ ಯಾವುದೇ ಕೊರತೆ ಕಂಡುಬಂದಿಲ್ಲ. ನಮ್ಮ ನಾಯಕರು ಇಲ್ಲಿಗೆ ಬರುತ್ತಿದ್ದಾರೆ. ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ' ಎಂದು ಹೇಳಿದ್ದಾರೆ.
ಗುಜರಾತ್ನಲ್ಲಿ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ ಅಲ್ಲ ಎಂದಿರುವ ಕೇಜ್ರಿವಾಲ್ ವಿರುದ್ಧ ಗೆಹಲೋತ್ ಹರಿಹಾಯ್ದಿದ್ದಾರೆ. 'ದೆಹಲಿ ಮತ್ತು ಪಂಜಾಬ್ನಲ್ಲಿ ಅವರು ವಿಷಮಕಾರಿ ಆಡಳಿತ ನಡೆಸುತ್ತಿದ್ದಾರೆ. ಇದನ್ನು ಜನರು ಅರ್ಥಮಾಡಿಕೊಳ್ಳಲಿದ್ದಾರೆ' ಎಂದು ಹೇಳಿದ್ದಾರೆ.

'ಪ್ರಧಾನಿ ಮೋದಿ ಸಹ ಕಾಂಗ್ರೆಸ್ ಪ್ರಚಾರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕಾಂಗ್ರೆಸ್ನಿಂದ ಅವರಿಗೆ ಪೈಪೋಟಿ ಎದುರಾಗಿದೆ. ಹೀಗಾಗಿ, ನಾವು ಗುಜರಾತ್ ಚುನಾವಣೆಯ ಹೋರಾಟದಲ್ಲಿ ಇಲ್ಲ ಎನ್ನುವುದು ತಪ್ಪು' ಎಂದು ಗೆಹಲೋತ್ ತಿಳಿಸಿದ್ದಾರೆ.
ಕಾಂಗ್ರೆಸ್ ಬಗ್ಗೆ ಎಚ್ಚರ ವಹಿಸಿ: ಪ್ರಧಾನಿ ಮೋದಿ
ಹಿಂದುತ್ವದ ಪ್ರಯೋಗ ಶಾಲೆಯಂತಿರುವ ಗುಜರಾತ್ನಲ್ಲಿ ಗೆಲ್ಲಲೇಬೇಕೆಂಬುದು ಬಿಜೆಪಿ ನಾಯಕರ ಯತ್ನವಾಗಿದೆ. ಮೋದಿಯವರ ತವರು ರಾಜ್ಯವಾಗಿರುವುದರಿಂದ ಗುಜರಾತ್ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಗುಜರಾತ್ಗೆ ಭೇಟಿ ನೀಡಿರುವ ಮೋದಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದೇ ವೇಳೆ, ಕಾಂಗ್ರೆಸ್ನ ಪ್ರಚಾರದ ಬಗ್ಗೆ ಅವರು ಎಚ್ಚರಿಸಿದ್ದಾರೆ.
'ಕಾಂಗ್ರೆಸ್ ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳ ಮನೆ ಮನೆಗೂ ತೆರಳಿ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ಕೈಗೊಂಡಿದ್ದಾರೆ. ಆ ಪಕ್ಷದ ಬಗ್ಗೆ ಎಚ್ಚರ ವಹಿಸಿ. ನನ್ನನ್ನು ಅವಹೇಳನ ಮಾಡುವ ಹೊರ ಗುತ್ತಿಗೆಯನ್ನು ಅವರು ಬೇರೆಯವರಿಗೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಮಾತ್ರ ಮೌನವಾಗಿದ್ದಾರೆ' ಎಂದು ತಿಳಿಸಿದ್ದಾರೆ.












Click it and Unblock the Notifications