ರಾಹುಲ್ ಗಾಂಧಿ-ಜಿಗ್ನೇಶ್ ಮೇವಾನಿ ಭೇಟಿ; ಕಾಂಗ್ರೆಸ್ ಗೆ ದಲಿತರ ಬೆಂಬಲ?
ಅಹಮದಾಬಾದ್, ನವೆಂಬರ್ 3: ರಾಷ್ಟ್ರೀಯ ದಲಿತ್ ಅಧಿಕಾರ್ ಮಂಚ್ ಸಂಚಾಲಕ ಜಿಗ್ನೇಶ್ ಮೆವಾನಿ ಇಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾದರು.
ಹಲವು ದಿನಗಳಿಂದ ನೀರಿಕ್ಷಿಸಲಾಗುತ್ತಿದ್ದ ಭೇಟಿ ಇಂದು ನವ್ಸಾರಿಯಲ್ಲಿ ನಡೆದು ಹೋಯಿತು. ಗುಜರಾತ್ ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ನಡೆದ ಈ ಭೇಟಿ ಕುತೂಹಲ ಹುಟ್ಟಿಸಿದೆ.

ಭೇಟಿ ವೇಳೆ ಜಿಗ್ನೇಶ್ ಮೇವಾನಿ ರಾಹುಲ್ ಗಾಂಧಿಯವರಿಗೆ 17 ಬೇಡಿಕೆಗಳ ಪಟ್ಟಿ ನೀಡಿದ್ದಾರೆ. ಇವುಗಳಲ್ಲಿ ಶೇಕಡಾ 90ರಷ್ಟು ಬೇಡಿಕೆಗಳಿಗೆ ಕಾಂಗ್ರೆಸ್ ಉಪಾಧ್ಯಕ್ಷರು ಒಪ್ಪಿಕೊಂಡಿದ್ದಾರೆ. ಜತೆಗೆ ರಾಹುಲ್ ಗಾಂಧಿಯವರ ನವಸರ್ಜನ್ ಯಾತ್ರೆಯಲ್ಲಿ ಜಿಗ್ನೇಶ್ ಕಾಣಿಸಿಕೊಂಡರು. ಈ ಹಿನ್ನಲೆಯಲ್ಲಿ ಜಿಗ್ನೇಶ್ ಮೇವಾನಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂಬ ಸುದ್ದಿಗಳು ಓಡಾಡುತ್ತಿವೆ.
ಉಭಯ ನಾಯಕರ ಭೇಟಿ ನಂತರ ಮಾತನಾಡಿದ ಜಿಗ್ನೇಶ್ ಮೇವಾನಿ, "ರಾಹುಲ್ ಜೀಯವರನ್ನು ಭೇಟಿಯಾದೆ. ನಮ್ಮ ಶೇ. 90 ಬೇಡಿಕೆಗಳು ಬೇಡಿಕೆಗಳಲ್ಲ. ಅವು ಸಾಂವಿಧಾನಿಕ ಹಕ್ಕುಗಳು ಎಂದು ಅವರು ಹೇಳಿದ್ದು ಅವುಗಳನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಭರವಸೆ ನೀಡಿದ್ದಾರೆ," ಎಂದು ಹೇಳಿಕೆ ನೀಡಿದ್ದಾರೆ.

ಬೇಡಿಕೆಗಳೇನು?
ದಲಿತರಿಗೆ ಐದು ಎಕರೆ ಕೃಷಿ ಭೂಮಿ ನೀಡುವುದು. ಜಾನುವಾರುಗಳ ಚರ್ಮ ತೆಗೆಯುವ ಮತ್ತು ಮಲ ತೆಗೆಯುವ ವೃತ್ತಿಯಲ್ಲಿರುವವರಿಗೆ ಪರ್ಯಾಯ ಉದ್ಯೋಗ ನೀಡುವುದು. 2012ರಲ್ಲಿ ದಲಿತ ಸಮುದಾಯದವರ ಮೇಲೆ ನಡೆದ ಥಂಗಧ್ ಶೂಟೌಟ್ ನ ತನಿಖಾ ವರದಿಯನ್ನು ಬಿಡುಗಡೆ ಮಾಡುವುದೂ ಸೇರಿದಂತೆ 17 ಬೇಡಿಕೆಗಳನ್ನು ಇಟ್ಟಿದ್ದಾರೆ.
ಇದರಲ್ಲಿ ಶೇ. 90 ಬೇಡಿಕೆಗಳಿಗೆ ಕಾಂಗ್ರೆಸ್ ಸಮ್ಮತಿಸಿರುವುದರಿಂದ ಜಿಗ್ನೇಶ್ ತುಸು ನಿರಾಳರಾದಂತೆ ಕಂಡು ಬಂತು. 'ಜತೆಗೆ ಕಾಂಗ್ರೆಸ್ ನವರು ಕನಿಷ್ಠ ನಮ್ಮ ಬೇಡಿಕೆಗಳಿಗೆ ಕಿವಿಯಾದರು. ಆದರೆ ಬಿಜೆಪಿಯವರು ಕೇಳಿಸಿಕೊಳ್ಳಲೂ ಸಿದ್ಧವಿಲ್ಲ. ಜನವಿರೋಧಿ ಬಿಜೆಪಿಯನ್ನು ತೊಲಗಿಸಲು ಎಲ್ಲಾ ರೀತಿಯಲ್ಲೂ ಶ್ರಮಿಸುವುದಾಗಿ' ಜಿಗ್ನೇಶ್ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್ ಬೆಂಬಲಿಸುತ್ತೇನೆ ಎಂಬ ಅಧಿಕೃತ ಹೇಳಿಕೆಯನ್ನು ಮಾತ್ರ ಬಾಕಿ ಉಳಿಸಿಕೊಂಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ಪಕ್ಷಕ್ಕೆ ಪಾಟೀದಾರ್ ಮೀಸಲಾತಿ ಹೋರಾಟದ ಮುಂದಾಳು ಹಾರ್ದಿಕ್ ಪಟೇಲ್, ಠಾಕೂರ್ ಸಮುದಾಯದ ಅಲ್ಪೇಶ್ ಠಾಕೂರ್ ಬೆಂಬಲ ನೀಡಿದ್ದು ಇದೀಗ ಜಿಗ್ನೇಶ್ ಬೆಂಬಲ ಪಡೆಯುವ ಹಾದಿಯಲ್ಲಿ ಕೈ ಪಕ್ಷವಿದೆ. ಇದು ಬಿಜೆಪಿಯ ನಿದ್ದೆಗೆಡಿಸಿದೆ.












Click it and Unblock the Notifications