ಪಾಕ್ ನಿಂದ ವಲಸೆ ಬಂದಿದ್ದ ಹಿಂದೂಗಳಿಗೆ ಭಾರತದ ಪೌರತ್ವ
ಸುಮಾರು 16 ವರ್ಷಗಳ ಹಿಂದೆ ಪಾಕಿಸ್ತಾನದಿಂದ ಗುಜರಾತ್ ಗೆ ವಲಸೆ ಬಂದಿದ್ದ 114 ಹಿಂದೂಗಳಿಗೆ ಭಾರತದ ಪೌರತ್ವ. ಪಾಕಿಸ್ತಾನದಲ್ಲಿ ಮಿತಿ ಮೀರಿದ ಭಯೋತ್ಪಾದನೆಗೆ ಹೆದರಿ ಭಾರತಕ್ಕೆ ವಲಸೆ ಬಂದಿದ್ದ ಹಿಂದೂ ಕುಟುಂಬಗಳು.
ಗಾಂಧೀನಗರ, ಜುಲೈ 21: ಹದಿನಾರು ವರ್ಷಗಳ ಹಿಂದೆ ಪಾಕಿಸ್ತಾನದಿಂದ ಗುಜರಾತ್ ಗೆ ವಲಸೆ ಬಂದಿದ್ದ 114 ಹಿಂದೂಗಳಿಗೆ ಭಾರತ ಸರ್ಕಾರ ಈಗ ಇಲ್ಲಿನ ಪೌರತ್ವ ನೀಡಿದೆ.
ಈ ಬಗ್ಗೆ ಆ ಕುಟುಂಬಗಳು ಹರ್ಷ ವ್ಯಕ್ತಪಡಿಸಿದ್ದು, ಭಾರತ ಸರ್ಕಾರವು ತಮ್ಮನ್ನು ದೇಶದ ಪ್ರಜೆಗಳನ್ನಾಗಿಸಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಈ ಕುಟುಂಬದ ಕೆಲವರು ತಮ್ಮ ಹರ್ಷ ಹಂಚಿಕೊಂಡಿದ್ದಾರೆ. ಭಾರತದ ಪೌರತ್ವದ ಬಗ್ಗೆ ಹೆಮ್ಮೆ ಹಾಗೂ ಖುಷಿ ವ್ಯಕ್ತಪಡಿಸಿದ ನಂದಲಾಲ್ ಮೆಘಾನಿ ಅವರು, ''ಅಲ್ಲಿ (ಪಾಕಿಸ್ತಾನ) ಭಯೋತ್ಪಾದನೆ ದಿನೇ ದಿನೇ ಹೆಚ್ಚುತ್ತಿದ್ದ ಕಾರಣಕ್ಕೆ ಹಾಗೂ ಹಿಂದೂಗಳ ಮೇಲೆ ಅಲ್ಲಿನ ಸ್ಥಳೀಯ ಆಡಳಿತಗಳು ಭಾರೀ ದಬ್ಬಾಳಿಕೆ ನಡೆಸುತ್ತಿರುವುದನ್ನು ನೋಡಿ ಬೇಸತ್ತಿದ್ದ ನಾವು ಆ ದೇಶ ತೊರೆಯಲು ನಿರ್ಧರಿಸಿದ್ದೆವು. ಆಗ, ಅಲ್ಲಿದ್ದ ನಮ್ಮ ಮುಸ್ಲಿಂ ಸ್ನೇಹಿತರೂ ಕೂಡ ಪಾಕಿಸ್ತಾನ ತೊರೆದು ಭಾರತದಲ್ಲಿ ಆಶ್ರಯ ಪಡೆಯುವಂತೆ ಸಲಹೆ ನೀಡುತ್ತಿದ್ದರು. ಹಾಗಾಗಿ, ನಾವು 16 ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿದ್ದೆ'' ಎಂದು ತಮ್ಮ ಕಥೆ ಹೇಳಿಕೊಂಡಿದ್ದಾರೆ.
ಪಾಕಿಸ್ತಾನದಲ್ಲಿ ಆಟೋಮೊಬೈಲ್ ಬಿಡಿಭಾಗಗಳ ವ್ಯಾಪಾರ ನಡೆಸುತ್ತಿದ್ದ ತಾವು ಭಾರತದಲ್ಲಿ ಇದೀಗ ಇಂಟೀರಿಯರ್ ಡೆಕೋರೇಷನ್ ಸಂಸ್ಥೆಯೊಂದನ್ನು ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಿಸಿರುವ ಸರ್ಕಾರಿ ಮೂಲಗಳು, 1951ರ ನಾಗರಿಕ ಕಾಯ್ದೆ ಅನ್ವಯ ವಲಸಿಗರಿಗೆ ಪೌರತ್ವ ನೀಡಲಾಗಿದೆ. ಅವರು ಸಲ್ಲಿಸಿದ್ದ ಎಲ್ಲಾ ದಾಖಲಾತಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪೌರತ್ವ ನೀಡಲಾಗಿದೆ ಎಂದು ಹೇಳಿವೆ.












Click it and Unblock the Notifications