ಚುನಾವಣಾ ಬಾಂಡ್ ಗಳಿಂದ ಪಾರದರ್ಶಕತೆ: ಜೇಟ್ಲಿ ಪ್ರತಿಪಾದನೆ
ನವದೆಹಲಿ, ಜನವರಿ 8: ಚುನಾವಣಾ ಬಾಂಡ್ ಗಳಿಂದ ಸದ್ಯದ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಸಾಧ್ಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರತಿಪಾದಿಸಿದ್ದಾರೆ. ಮಾತ್ರವಲ್ಲ ರಾಜಕೀಯ ಪಕ್ಷಗಳ ದೇಣಿಗೆ ಮತ್ತಷ್ಟು ಶುದ್ಧೀಕರಣಗೊಳಿಸಲು ಸರಕಾರ ಸಿದ್ದವಿದೆ ಎಂದು ಹೇಳಿದ್ದಾರೆ.
ಈ ಸಂಬಂಧ ಫೇಸ್ಬುಕ್ ಗೋಡೆ ಮೇಲೆ ಬರೆದುಕೊಂಡಿರುವ ಜೇಟ್ಲಿ, ಸದ್ಯದ ರಾಜಕೀಯ ವ್ಯವಸ್ಥೆಯಲ್ಲಿ ದೇಣಿಗೆ ಪಡೆದುಕೊಳ್ಳುತ್ತಾರೆ ಮತ್ತು ಖರ್ಚನ್ನು ಹಣದ ರೂಪದಲ್ಲಿ ಪಡೆದುಕೊಳ್ಳುತ್ತಾರೆ ಎಂದು ಜೇಟ್ಲಿ ಹೇಳಿದ್ದಾರೆ.
ಸಂಬಳದಾರ ವರ್ಗಕ್ಕೆ ಜೇಟ್ಲಿ ನೀಡಲಿದ್ದಾರೆ ಬಜೆಟ್ ನಲ್ಲಿ ಸಿಹಿಸುದ್ದಿ?
ಹಣದ ನೀಡುವವರು ಅಪರಿಚಿತರಾಗಿರುತ್ತಾರೆ ಅಥವಾ ಅವರ ಗುರುತನ್ನು ಮುಚ್ಚಿಡಲಾಗುತ್ತದೆ. ಜತೆಗೆ ಒಂದಷ್ಟು ಹಣವನ್ನು ಘೋಷಣೆಯೇ ಮಾಡುವುದಿಲ್ಲ. ಹೀಗೆ ಅಪರಿಚಿತ ಮೂಲಗಳಿಂದ ಚುನಾವಣಾ ವ್ಯವಸ್ಥೆಗೆ ಅಕ್ರಮ ಹಣ ಹರಿದು ಬರುತ್ತದೆ.
"ಒಟ್ಟಾರೆ ಇದು ಸಂಪೂರ್ಣವಾಗಿ ಪಾರದರ್ಶಕವಲ್ಲದ ವ್ಯವಸ್ಥೆ. ಹೆಚ್ಚಿನ ರಾಜಕೀಯ ಪಕ್ಷಗಳು ಸದ್ಯದ ವ್ಯವಸ್ಥೆ ಬಗ್ಗೆ ತೃಪ್ತಿಗೊಂಡಿವೆ. ಆದರೆ ಇದನ್ನು ಮುಂದುವರಿಸಲು ಮನಸ್ಸಿಲ್ಲ," ಎಂದು ಜೇಟ್ಲಿ ಹೇಳಿಕೊಂಡಿದ್ದಾರೆ.
"ಹೀಗಾಗಿ ರಾಜಕೀಯ ಹೂಡಿಕೆಯನ್ನು ಸ್ವಚ್ಛಗೊಳಿಸುವ ಪರ್ಯಾಯ ಮಾರ್ಗಗಳ ಬಗ್ಗೆ ಪ್ರಯತ್ನಿಸಲಾಗುತ್ತಿದೆ," ಎಂದು ಹೇಳಿದ್ದಾರೆ.
ಕಳೆದ ವಾರ ಜೇಟ್ಲಿ ಚುನಾವಣಾ ಬಾಂಡ್ ಗಳನ್ನು ಘೋಷಣೆ ಮಾಡಿದ್ದರು. ಈ ಬಾಂಡ್ ಗಳನ್ನು ಎಸ್.ಬಿ.ಐ ನಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಇದು 15 ದಿನಗಳ ಚಾಲ್ತಿಯನ್ನು ಹೊಂದಿರುತ್ತದೆ. ರಾಜಕೀಯ ಪಕ್ಷಗಳ ನಗದು ದೇಣಿಗೆಗೆ ಪರ್ಯಾಯವಾಗಿ ಇದನ್ನು ಕೇಂದ್ರ ಆರಂಭಿಸಿತ್ತು.
"ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದರೂ ಭಾರತಕ್ಕೆ ಕಳೆದ 7 ದಶಕಗಳಲ್ಲಿ ರಾಜಕೀಯ ದೇಣಿಗೆ ವ್ಯವಸ್ಥೆಯನ್ನು ಪಾರದರ್ಶಕ ಮಾಡಲು ಸಾಧ್ಯವಾಗಿಲ್ಲ," ಎಂದು ವಿಷಾದ ವ್ಯಕ್ತಪಡಿಸಿರುವ ಅರುಣ್ ಜೇಟ್ಲಿ, ಈ ಸಂಬಂಧ ಜನರು ನೀಡುವ ಯಾವುದೇ ಸಲಹೆಗಳನ್ನು ಸರಕಾರ ಸ್ವೀಕರಿಸಲು ಸಿದ್ದವಾಗಿದೆ ಎಂದು ಹೇಳಿದ್ದಾರೆ.