ವಿದೇಶದಿಂದ ಹಂತ ಹಂತವಾಗಿ ತಾಯ್ನಾಡಿಗೆ ಮರಳಲಿದ್ದಾರೆ ಭಾರತೀಯರು
ನವದೆಹಲಿ, ಮೇ 4: ವಿದೇಶದಲ್ಲಿರುವ ಭಾರತೀಯರನ್ನು ಹಂತ ಹಂತವಾಗಿ ಭಾರತಕ್ಕೆ ಕರೆತರುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಕೈಹಾಕಿದೆ.
ಕೊರೊನಾ ವೈರಸ್ ಎಲ್ಲೆಡೆ ಹಬ್ಬಿದ್ದು, ಕೆಲವು ವೈರಸ್ಗೆ ತುತ್ತಾಗಿದ್ದಾರೆ, ಇನ್ನೂ ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಹೀಗಾಗಿ ಮೇ 7ರ ಬಳಿಕ ಹಂತ ಹಂತವಾಗಿ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ತಾಯ್ನಾಡಿಗೆ ಕರೆ ತರಲಾಗುತ್ತದೆ.
ವಿಮಾನ ಹಾಗೂ ನೌಕಾ ಹಡಗುಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ತಗಲುವ ವೆಚ್ಚವನ್ನು ಪ್ರಯಾಣಿಕರೇ ಭರಿಸಬೇಕಾಗುತ್ತದೆ.
ವಿದೇಶದಲ್ಲಿರುವ ಭಾರತೀಯ ಹೆಸರುಗಳನ್ನು ಭಾರತೀಯ ರಾಯಭಾರಿ ಕಚೇರಿ ಹಾಗೂ ಹೈ ಕಮಿಷನ್ ಕಲೆ ಹಾಕುತ್ತಿದೆ. ಮೇ 7ರಿಂದ ಭಾರತೀಯರನ್ನು ಕರೆ ತರುವ ಪ್ರಯತ್ನ ನಡೆಯಲಿದೆ.
'ಕೊರೊನಾ ಹಾಗೂ ಇತರೆ ವೈರಸ್ಗಳು ವಿಮಾನದಲ್ಲಿ ಬೇಗ ಹರಡುವುದಿಲ್ಲ'
ಪ್ರಯಾಣಿಕರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ. ಕೊರೊನಾ ವೈರಸ್ನ ಯಾವುದೇ ಲಕ್ಷಣಗಳು ಇಲ್ಲದಿರುವವರಿಗೆ ಮಾತ್ರ ಭಾರತಕ್ಕೆ ಆಗಮಿಸಲು ಅವಕಾಶ ನೀಡಲಾಗುತ್ತದೆ.
ಭಾರತಕ್ಕೆ ಆಗಮಿಸುವ ಮುನ್ನ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಿಮಾನಯಾನ ಹಾಗೂ ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸಬೇಕು.
ಅವರು ಭಾರತಕ್ಕೆ ಬರುವ ಮುನ್ನ ಆರೋಗ್ಯ ಸೇತು ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಭಾರತಕ್ಕೆ ಬಂದಿಳಿದ ತಕ್ಷಣ ಆರೋಗ್ಯ ಸೇತು ಅಪ್ಲಿಕೇಷನ್ ಅಲ್ಲಿ ಹೆಸರು ನೋಂದಾಯಿಸಬೇಕು. ಪ್ರತಿಯೊಬ್ಬರು ಸ್ಕ್ರೀನಿಂಗ್ಗೆ ಒಳಗಾಗಬೇಕು. ಬಳಿಕ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ನಲ್ಲಿರಬೇಕು.
14 ದಿನಗಳ ಕ್ವಾರಂಟೈನ್ ಮುಗಿದ ಬಳಿಕ ಕೊವಿಡ್ 19 ಪರೀಕ್ಷೆ ಮಾಡಲಾಗುತ್ತದೆ.