ಆರ್.ಕೆ.ನಾರಾಯಣ್ ಗೆ ನಮನ ಸಲ್ಲಿಸಿದ ಗೂಗಲ್
ಬೆಂಗಳೂರು, ಅ. 10 : ಅಕ್ಟೋಬರ್ 10 ಆರ್.ಕೆ.ನಾರಾಯಣ್ ಜನ್ಮದಿನ. 'ಮಾಲ್ಗುಡಿ ಡೇಸ್' ನಿರ್ಮಾತೃ ಆರ್.ಕೆ.ನಾರಾಯಣ್ ಅವರ 108ನೇ ಜನ್ಮ ದಿನಕ್ಕೆ ಗೂಗಲ್ ಸಹ ಗೌರವ ಸೂಚಿಸಿದೆ. ತನ್ನ ಸರ್ಚ್ ಎಂಜಿನ್ಗೆ ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಓದುತ್ತಿರುವ ವ್ಯಕ್ತಿಯೊಬ್ಬರ ಚಿತ್ರ ಅಳವಡಿಸಿ ವಂದನೆ ಸಲ್ಲಿಸಿದೆ.
'ಭಾರತದ ಕಾದಂಬರಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿ, ವಿಭಿನ್ನ ದೃಷ್ಟಿಕೋನ ಬೆಳೆಯಲು ಕಾರಣರಾದ ನಾರಾಯಣ್ಗೆ ಗೌರವ ಸಲ್ಲಿಸುತ್ತಿದ್ದೇವೆ. ಹ್ಯಾಪಿ ಬರ್ತ್ ಡೆ ನಾರಾಯಣ್' ಎಂದು ತನ್ನ ಪೇಜ್ನಲ್ಲಿ ಬರೆದುಕೊಂಡಿದೆ.

ದಕ್ಷಿಣ ಭಾರತದ ಪುಟ್ಟ ಗ್ರಾಮ ಮಾಲ್ಗುಡಿಯನ್ನು ಇಡೀ ಪ್ರಪಂಚಕ್ಕೆ ಪರಿಚಯಿಸಿದ ನಾರಾಯಣ್ ರಚಿಸಿದ ಅನೇಕ ಕಾದಂಬರಿಗಳು ಜನಪ್ರಿಯತೆ ಗಳಿಸಿದವು. ಸ್ವಾಮಿ ಮತ್ತು ಫ್ರೆಂಡ್ಸ್, ಬ್ಯಾಚುಲರ್ ಆಫ್ ಆರ್ಟ್ಸ್ ಮತ್ತು ಇಂಗ್ಲೀಷ್ ಟೀಚರ್ ಕಾದಂಬರಿಗಳ ಮೂಲಕ ಭಾರತದ ವಾಸ್ತವ ಸ್ಥಿತಿ ಪರಿಚಯಿಸುವ ಪ್ರಯತ್ನ ಮಾಡಿದ್ದರು. ದಿವಂಗತ ಶಂಕರ್ನಾಗ್ ನಿರ್ದೇಶನದಲ್ಲಿ ಮಾಲ್ಗುಡಿ ಡೇಸ್ ಧಾರಾವಾಹಿಯಾಗಿಯೂ ಪ್ರಸಾರಗೊಂಡು ಜನಮನ್ನಣೆ ಗಳಿಸಿತ್ತು. [ಆರ್ಕೆ ನಾರಾಯಣ್ ಜೀವಿಸಿದ ಮನೆ ನೆಲಸಮಕ್ಕೆ ತಡೆ]
ಆರ್.ಕೆ.ನಾರಾಯಣ್ ಬಗ್ಗೆ ಒಂದಿಷ್ಟು
1906ರ ಅಕ್ಟೋಬರ್ 10 ರಂದು ಚೆನ್ನೈನಲ್ಲಿ ಜನಿಸಿದ ರಾಯ್ಸಪುರಂ ಕೃಷ್ಣಸ್ವಾಮಿ ಐಯ್ಯರ್ ನಾರಾಯಣಸ್ವಾಮಿ ಅಂದಿನ ಮದ್ರಾಸ್ ಪ್ರಾಂತ್ಯದಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ನಂತರ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು.[ಗೂಗಲ್ ಡೂಡ್ಲ್ ಫೈನಲ್ ನಲ್ಲಿ ಬೆಂಗಳೂರಿನ ಶ್ರಾವ್ಯ]
ತಮ್ಮ ಕೃತಿಗಳ ಮೂಲಕ ಸಾಮಾನ್ಯ ಜನರ ಜೀವನವನ್ನು, ಮಧ್ಯಮ ವರ್ಗದ ತೊಳಲಾಟವನ್ನು, ಇಂಗ್ಲಿಷ್ ಕಲಿಕೆ ಅಗತ್ಯ ಮತ್ತು ಸಮಸ್ಯೆಗಳನ್ನು, ಉದ್ಯೋಗ ಅರಸಿ ನಗರಕ್ಕೆ ದೌಢಾಯಿಸುವ ಯುವಕರ ಮನಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದೇ ಅವರ ಕಾದಂಬರಿಗಳು ಜನಪ್ರಿಯವಾಗಲು ಕಾರಣವಾಯಿತು.
ಮೇ 13, 2001ರಲ್ಲಿ ಆರ್.ಕೆ. ನಾರಾಯಣ್ ಇಹಲೋಕ ತ್ಯಜಿಸಿದರು. ಪದ್ಮವಿಭೂಷಣ, ಸಾಹಿತ್ಯ ಅಕಾಡಮಿ ಪುರಸ್ಕಾರಗಳು ಅವರಿಗೆ ಸಂದಿದ್ದವು.












Click it and Unblock the Notifications