ಕಾಂಗ್ರೆಸ್ ನಾಯಕರ ಮೇಲೆ ನರೇಂದ್ರ ಮೋದಿ ಹಾಸ್ಯಚಟಾಕಿ
ಬಿಜನೂರ (ಉತ್ತರಪ್ರದೇಶ), ಫೆಬ್ರವರಿ 10 : ನೀವು ಒಂದು ಬಾರಿ ಗೂಗಲ್ಗೆ ಹೋಗಿ ಹುಡುಕಿ, ಕಾಂಗ್ರೆಸ್ ನಾಯಕರ ಮೇಲಿರುವಷ್ಟು ನಗೆಚಟಾಕಿಗಳು ಬಹುಶಃ ಯಾವ ನಾಯಕರ ಮೇಲೂ ಇರುವುದಿಲ್ಲ ಎಂದು ನರೇಂದ್ರ ಮೋದಿ ಹಾಸ್ಯಚಟಾಕಿ ಹಾರಿಸಿದ್ದಾರೆ.
ಉತ್ತರಪ್ರದೇಶದ ಬಿಜನೂರ ಜಿಲ್ಲೆಯ ಬಿಜನೂರಿನಲ್ಲಿ ಚುನಾವಣಾ ಭಾಷಣ ಮಾಡುತ್ತಿದ್ದ ಅವರು, ಉತ್ತರಪ್ರದೇಶದಲ್ಲಿ ಜಂಟಿಯಾಗಿ ಚುನಾವಣೆ ಎದುರಿಸುತ್ತಿರುವ ಸಮಾಜವಾದಿ ಮತ್ತು ಕಾಂಗ್ರೆಸ್ ನಾಯಕರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ವಿದ್ರೋಹಿಗಳನ್ನು ಜೈಲಿನಲ್ಲಿ ಹಾಕಿಸಲು ಕಾನೂನಿನ ದುರುಪಯೋಗ ಮಾಡಿಕೊಳ್ಳುತ್ತಿದ್ದೀರಿ. ಸರಕಾರದ ಉಪಯೋಗವನ್ನು ಹೀಗೆ ಮಾಡಿಕೊಳ್ಳುವುದಾ ಎಂದು ಮೋದಿ ಅಖಿಲೇಶ್ ಅವರನ್ನು ದೂರಿದರು.
ಬಲವಂತವಾಗಿ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಹಾಕಲಾಗಿದೆ. ಇದರ ಪರಿಣಾಮ ನಿಮಗೆ ಮಾರ್ಚ್ 11ರಂದು ದೊರೆಯಲಿದೆ ಎಂದು ಮೋದಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಎಚ್ಚರಿಕೆ ನೀಡಿದರು.
ಉತ್ತರಪ್ರದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ಅತ್ಯಾಚಾರಗಳಾಗುತ್ತಿರುವುದು ನಿಜಕ್ಕೂ ದುರಾದೃಷ್ಟಕರ. ಆದರೆ, ಇವುಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಅಖಿಲೇಶ್ ಯಾದವ್ ಅವರು ಮಾಧ್ಯಮಗಳನ್ನೇ ದೂರುತ್ತಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ ಎಂದರು.