ಗೋವಾ: ಕಮಲ ಪಾಳೆಯಕ್ಕೆ ಜಿಗಿದ ಇಬ್ಬರು ಶಾಸಕರು, ಕಾಂಗ್ರೆಸ್ ಕಕ್ಕಾಬಿಕ್ಕಿ
ನವದೆಹಲಿ, ಅಕ್ಟೋಬರ್ 16: ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭವನ್ನೇ ಬಳಸಿಕೊಂಡು ಗೋವಾದಲ್ಲಿನ ಬಿಜೆಪಿ ಮೈತ್ರಿ ಸರ್ಕಾರ ಉರುಳಿಸಿ ಹೊಸ ಸರ್ಕಾರ ರಚನೆಯ ಕನಸು ಕಂಡಿದ್ದ ಕಾಂಗ್ರೆಸ್ಗೆ, ಅವರದೇ ಪಕ್ಷದ ಶಾಸಕರು ಆಘಾತ ನೀಡಿದ್ದಾರೆ.
ಬಿಜೆಪಿಗಿಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರಕ್ಕೇರುವ ಅವಕಾಶ ಪಡೆದುಕೊಳ್ಳದ ಕಾಂಗ್ರೆಸ್, ಇತರೆ ಪಕ್ಷದ ಶಾಸಕರ ಮನವೊಲಿಸಿ ಸರ್ಕಾರ ರಚಿಸುವ ಆಸೆ ಹೊಂದಿತ್ತು. ಆದರೆ, ಕಾಂಗ್ರೆಸ್ನ ಇಬ್ಬರು ಶಾಸಕರು ಬಿಜೆಪಿ ಸೇರಿಕೊಂಡಿದ್ದಾರೆ.
ಶಾಸಕರಾದ ದಯಾನಂದ ಸೊಪ್ಟೆ ಮತ್ತು ಸುಭಾಷ್ ಶಿರೋಡ್ಕರ್ ಕಾಂಗ್ರೆಸ್ ಹಿಡಿತದಿಂದ ನುಣಚಿಕೊಂಡು ದೆಹಲಿ ಸೇರಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿ, ಕಮಲ ಪಕ್ಷದ ಕೈಹಿಡಿದಿದ್ದಾರೆ.
ಇಬ್ಬರು ಸಚಿವರನ್ನು ಸಂಪುಟದಿಂದ ಕೈಬಿಟ್ಟ ಗೋವಾ ಸಿಎಂ ಪರಿಕ್ಕರ್
'ನಾವು ಇಂದು ಬಿಜೆಪಿ ಸೇರ್ಪಡೆಯಾಗುತ್ತಿದ್ದೇವೆ. ಇಂದಲ್ಲದಿದ್ದರೂ, ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಇಬ್ಬರು-ಮೂವರು ಶಾಸಕರು ಬರಲಿದ್ದಾರೆ ಎಂದು ಅಮಿತ್ ಶಾ ಅವರೊಂದಿಗಿನ ಸಭೆ ಬಳಿಕ ಸುಭಾಷ್ ಶಿರೋಡ್ಕರ್ ತಿಳಿಸಿದ್ದಾರೆ.
ಮೌನ ವಹಿಸಿದ್ದ ಶಾಸಕರು
ಗೋವಾದಿಂದ ದೆಹಲಿಗೆ ತೆರಳುವಾಗ ಇಬ್ಬರೂ ತಮ್ಮ ನಡೆಯನ್ನು ರಹಸ್ಯವಾಗಿರಿಸಿದ್ದರು. ಸೋಮವಾರ ರಾತ್ರಿ 'ನಾನು ಬಿಜಿನೆಸ್ಗೆ ಸಂಬಂಧಿಸಿದಂತೆ ಪ್ರವಾಸ ಮಾಡುತ್ತಿದ್ದೇನೆ' ಎಂದು ದಯಾನಂದ್ ಸೊಪ್ಟೆ ಹೇಳಿದ್ದರು. ಬಿಜೆಪಿ ಸೇರ್ಪಡೆಯಾಗುತ್ತಿದ್ದೀರಾ ಎಂಬ ಪ್ರಶ್ನೆಗೆ ಇಬ್ಬರೂ ಪ್ರತಿಕ್ರಿಯೆ ನೀಡಿರಲಿಲ್ಲ. 'ನಾವು ಅದನ್ನು ಮಾಡಿದರೆ ನಿಮಗೆ ತಿಳಿಯುತ್ತದೆಯಲ್ಲ' ಎಂದು ಉತ್ತರಿಸಿದ್ದರು.
ತಾವು ಇಬ್ಬರೂ ಮುಖಂಡರೊಂದಿಗೆ ಮಾತನಾಡಿದ್ದು, ಅವರ ಪಕ್ಷ ತೊರೆಯುವುದಿಲ್ಲ ಎಂಬ ಭರವಸೆ ನೀಡಿದ್ದಾರೆ ಎಂದು ಗೋವಾ ಕಾಂಗ್ರೆಸ್ ಮುಖಂಡ ಎ. ಚೆಲ್ಲಕುಮಾರ್ ಹೇಳಿದ್ದರು. ಆದರೆ, ಮಂಗಳವಾರ ಬೆಳಿಗ್ಗೆ ಈ ನಾಟಕೀಯ ಬೆಳವಣಿಗೆಗಳು ನಡೆದಿವೆ.
ಗೋವಾಕ್ಕೆ ಹೊಸ ಸಿಎಂ ಹುಡುಕಾಟ: ಅವಕಾಶ ಕೊಡುವಂತೆ ಮಿತ್ರ ಪಕ್ಷದ ಬೇಡಿಕೆ
ಸಿಎಂ ಸ್ಥಾನಕ್ಕೆ ವಿಶ್ವಜಿತ್ ರಾಣೆ ತಂತ್ರ
ಬಿಜೆಪಿಯವರು ತಮ್ಮ ಶಾಸಕರನ್ನು ಸೆಳೆದುಕೊಂಡಿದೆ. ಅವರನ್ನು ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಬೇಟೆಯಾಡಿದ್ದಾರೆ. ಪರ್ರಿಕರ್ ಅವರು ಅನಾರೋಗ್ಯದಿಂದಾಗಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಿದರೆ ಕುರ್ಚಿಗೇರಲು ವಿಶ್ವಜಿತ್ ರಾಣೆ ಗುರಿ ಹೊಂದಿದ್ದಾರೆ ಎಂದು ಚೆಲ್ಲಕುಮಾರ್ ಆರೋಪಿಸಿದ್ದಾರೆ.
ನಮ್ಮ ಶಾಸಕರನ್ನು ಮನವೊಲಿಸಿ ದೆಹಲಿಗೆ ಕರೆದೊಯ್ದು ಬಿಜೆಪಿ ಹೈಕಮಾಂಡ್ ಜತೆ ಚೌಕಾಸಿ ನಡೆಸಿದ್ದು ರಾಣೆ ಅವರೇ ಎಂಬ ಮಾಹಿತಿ ಬಂದಿದೆ. ಇಬ್ಬರು ಕಾಂಗ್ರೆಸ್ ಶಾಸಕರನ್ನು ಹಿಡಿದು ತಂದರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗುತ್ತದೆ ಎಂದು ಚೆಲ್ಲಕುಮಾರ್ ಹೇಳಿದ್ದಾರೆ.
ಆಸ್ಪತ್ರೆಯಲ್ಲೇ ಸಂಪುಟ ಸಭೆ ಕರೆದ ಗೋವಾ ಮುಖ್ಯಮಂತ್ರಿ ಪರಿಕ್ಕರ್
|
ರಾಜೀನಾಮೆ ಸಲ್ಲಿಕೆ
ಕಾಂಗ್ರೆಸ್ನ ಇಬ್ಬರೂ ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ದಯಾನಂದ ಸೊಪ್ಟೆ ಮತ್ತು ಸುಭಾಷ್ ಶಿರೋಡ್ಕರ್ ಅವರ ರಾಜೀನಾಮೆ ಪತ್ರ ಕೈಸೇರಿದೆ. ಯಾವುದೇ ಒತ್ತಡಕ್ಕೆ ಒಳಗಾಗದೆ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದೇನೆ. ಈ ಪ್ರಕ್ರಿಯೆ ಪೂರ್ಣಗೊಳಿಸಿ ವಿಧಾನಸಭೆ, ರಾಜ್ಯಪಾಲರು ಮತ್ತು ಚುನಾವಣಾ ಆಯೋಗಕ್ಕೆ ಪ್ರತಿಗಳನ್ನು ಕಳುಹಿಸಲಾಗುವುದು ಎಂದು ಗೋವಾ ವಿಧಾನಸಭೆ ಸ್ಪೀಕರ್ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಕಾಂಗ್ರೆಸ್ ಕನಸು ಭಗ್ನ
ಕಾಂಗ್ರೆಸ್ನ ಇಬ್ಬರು ಶಾಸಕರ ರಾಜೀನಾಮೆಯು ಸಮ್ಮಿಶ್ರ ಸರ್ಕಾರದ ರಚನೆಯ ಅದರ ಪ್ರಯತ್ನಕ್ಕೆ ತೀವ್ರ ಹಿನ್ನಡೆಯುಂಟುಮಾಡಿದೆ. 40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ 16 ಶಾಸಕರನ್ನು ಹೊಂದಿದೆ. ಈಗ ಇಬ್ಬರು ಶಾಸಕರ ಬಲ ಕಳೆದುಕೊಂಡಿರುವುದರಿಂದ ಅತಿ ದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚಿಸಲು ಅವಕಾಶ ನೀಡಬೇಕು ಎಂಬ ವಾದವನ್ನು ಮಂಡಿಸುವ ತಾರ್ಕಿಕ ಬೆಂಬಲವನ್ನೇ ಅದು ಕಳೆದುಕೊಂಡಂತಾಗಿದೆ.
|
ಬಿಜೆಪಿ ಸಮ್ಮಿಶ್ರ ಸರ್ಕಾರ
14 ಶಾಸಕರನ್ನು ಹೊಂದಿರುವ ಬಿಜೆಪಿ, ಮಹಾರಾಷ್ಟ್ರವಾದಿ ಗೋಮಾತಕ್ ಪಾರ್ಟಿ ಮತ್ತು ಗೋವಾ ಫಾರ್ವರ್ಡ್ ಪಾರ್ಟಿಯ ತಲಾ ಮೂವರು ಶಾಸಕರು ಹಾಗೂ ಮೂವರು ಸ್ವತಂತ್ರ ಶಾಸಕರು ಮತ್ತು ಎನ್ಸಿಪಿಯ ಒಬ್ಬ ಶಾಸಕನ ಬೆಂಬಲದೊಂದಿಗೆ ಗೋವಾದಲ್ಲಿ ಸರ್ಕಾರ ರಚಿಸಿದೆ.