ಈಶಾನ್ಯ ಭಾರತದಲ್ಲಿ ಚುನಾವಣಾ ಕಹಳೆ ಮೊಳಗಿಸಿದ ರಾಹುಲ್ ಗಾಂಧಿ
ಇಟಾನಗರ, ಮಾರ್ಚ್ 19: ಈಶಾನ್ಯ ಭಾರತದ ರಾಜ್ಯಗಳಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ರಾಹುಲ್ ಗಾಂಧಿ ಅವರು ಇಂದು, ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅರುಣಾಚಲ ಪ್ರದೇಶ ರಾಜ್ಯಕ್ಕೆ ವಿಶೇಷ ರಾಜ್ಯ ಸ್ಥಾನ-ಮಾನ ನೀಡುವುದಾಗಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಎಂದೂ ಈ ರಾಜ್ಯದ ಸ್ಥಳೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ನಾಶ ಮಾಡುವ ಪ್ರಯತ್ನ ಮಾಡುವುದಿಲ್ಲ ಕಾಂಗ್ರೆಸ್ ಪಕ್ಷವು ಅದನ್ನು ಉಳಿಸುವ ಕಾರ್ಯ ಮಾಡುತ್ತದೆ ಎಂದು ಹೇಳಿದರು.
ಅರುಣಾಚಲ ಪ್ರದೇಶಕ್ಕೆ ರಸ್ತೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್ಗಳು ಬೇಕಾಗಿವೆ. ಕಾಂಗ್ರೆಸ್ ಪಕ್ಷವು ಈಶಾನ್ಯದ ಎಲ್ಲ ರಾಜ್ಯಗಳಿಗೆ ವಿಶೇಷ ರಾಜ್ಯದ ಸ್ಥಾನ ಮಾನ ನೀಡಿದೆವು ಏಕೆಂದರೆ ಅದರ ಬಗ್ಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದು ರಾಹುಲ್ ಹೇಳಿದರು.

'ಸ್ವಂತ ನಿರ್ಧಾರಕ್ಕೆ ಅವಕಾಶವೇ ಇಲ್ಲ'
ಬಿಜೆಪಿ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಇಂದು ಅರುಣಾಚಲ ಪ್ರದೇಶದ ಜನ ತಮ್ಮ ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ, ಅವರಿಗೆ ದೆಹಲಿಯಿಂದ ಆಜ್ಞೆಗಳು ಬರುತ್ತಿವೆ ಅದನ್ನು ಅವರು ಪಾಲಿಸಬೇಕಾಗಿದೆ ಎಂದು ರಾಹುಲ್ ಹೇಳಿದರು.

ಆರ್ಎಸ್ಎಸ್ ವಿರುದ್ಧ ಗುಟುರು
ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಗುಟುರು ಹಾಕಿದ ರಾಹುಲ್ ಗಾಂಧಿ, ಇವೆರಡೂ ಸೇರಿಕೊಂಡು ಭಾರತದಾದ್ಯಂತ ಒಂದೇ ರೀತಿಯ ಯೋಚನಾ ಲಹರಿಯನ್ನು ಹರಡಿಸಲು ಹೊರಟಿದೆ, ಹೀಗೆ ಆದರೆ ಭಾರತದಲ್ಲಿ ವೈವಿದ್ಯತೆಗೆ ಅವಕಾಶ ಇರುವುದಿಲ್ಲ ಎಂದು ರಾಹುಲ್ ಹೇಳಿದರು.

ಪೌರತ್ವ ಮಸೂದೆ ವಿರುದ್ಧ ರಾಹುಲ್ ಗುಟುರು
ಅಸ್ಸಾಂನಲ್ಲಿ ತರಲು ಹೊರಟಿದ್ದ ಪೌರತ್ವ ಮಸೂದೆಯನ್ನು ವಿರೋಧಿಸಿದ ರಾಹುಲ್ ಗಾಂಧಿ, ಇದು ಬಿಜೆಪಿ ಮಾಡಲು ಯತ್ನಿಸುತ್ತಿರುವ ಅತಿ ದೊಡ್ಡ ದಾಳಿ ಎಂದರು, ನಾವು ಈ ಮಸೂದೆ ಅಂಗೀಕಾರವಾಗಲು ಬಿಡುವುದಿಲ್ಲ ಎಂದು ರಾಹುಲ್ ಹೇಳಿದರು.

'ಯಾವ ಪಕ್ಷವನ್ನೂ ಮುಕ್ತ ಮಾಡುವುದು ನಮ್ಮ ಗುರಿಅಲ್ಲ'
ವಿರೋಧಿಗಳನ್ನು ಮುಗಿಸಿ ಬಿಡುವ ಬಿಜೆಪಿಯ 'ಕಾಂಗ್ರೆಸ್ ಮುಕ್ತ ಭಾರತ' ರೀತಿಯ ಮನಸ್ಥಿತಿ ನಮ್ಮದಲ್ಲ ಎಂದ ರಾಹುಲ್ ಗಾಂಧಿ, ಬಿಜೆಪಿ ತಮ್ಮ ಧ್ಯೇಯದಲ್ಲಿ ನಡೆಯಲು ಅವರು ಸರ್ವ ಸ್ವತಂತ್ರ್ಯರು ಆದರೆ ಅವರ ನಂಬಿಕೆಯನ್ನು ಬಲವಂತವಾಗಿ ಅರುಣಾಚಲ ಪ್ರದೇಶ, ಅಸ್ಸಾಂ, ಅಥವಾ ಇನ್ಯಾವುದೇ ಪ್ರದೇಶದ ಮೇಲೆ ಹೇರಲು ನಾವು ಬಿಡುವುದಿಲ್ಲ ಎಂದು ರಾಹುಲ್ ಹೇಳಿದರು.












Click it and Unblock the Notifications