ಸುಪ್ರೀಂ ಕೋರ್ಟ್ ಜಡ್ಜ್ ಗೇ 14 ಕೋಟಿ ರು. ಪರಿಹಾರ ಕೇಳಿದ ನ್ಯಾ. ಕರ್ಣನ್
ಸುಪ್ರೀಂ ಕೋರ್ಟ್ ಆದೇಶಗಳಿಂದ ನನಗೆ ಮಾನಸಿಕ ಹಿಂಸೆ ಆಗಿದೆ. ಅದ್ದರಿಂದ 14 ಕೋಟಿ ರುಪಾಯಿ ಪರಿಹಾರ ನೀಡಬೇಕು ಎಂದು ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಕರ್ಣನ್ ಸುಪ್ರೀಂ ಕೋರ್ಟ್ ಗೆ ಪತ್ರ ಬರೆದಿದ್ದಾರೆ
ಬೆಂಗಳೂರು, ಮಾರ್ಚ್ 17: ನ್ಯಾ. ಕರ್ಣನ್ ಅವರು ಸುಪ್ರೀಂ ಕೋರ್ಟ್ ಗೆ ಒಂದು ಪತ್ರ ಬರೆದಿದ್ದು, "ಸುಪ್ರೀಂ ಕೋರ್ಟ್ ನ ಆದೇಶಗಳು ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿವೆ. ಆದ್ದರಿಂದ 14 ಕೋಟಿ ರುಪಾಯಿಯನ್ನು ಪರಿಹಾರವಾಗಿ ನೀಡಬೇಕು" ಎಂದು ಕೇಳಿದ್ದಾರೆ.
ಕಲ್ಕತ್ತಾ ಹೈ ಕೋರ್ಟ್ ನ ನ್ಯಾಯಮೂರ್ತಿ ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಗೆ ಆದೇಶಿಸಿತ್ತು. ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಆದರೆ ಸುಪ್ರೀಂ ಆದೇಶವನ್ನು ಪಾಲಿಸದ ಕರ್ಣನ್, ಕೋರ್ಟ್ ಗೆ ಕೂಡ ಹಾಜರಾಗಲಿಲ್ಲ.
ತಾನು ದಲಿತ ಎಂಬ ಕಾರಣಕ್ಕೆ ಹೀಗೆಲ್ಲ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದು, ತೀವ್ರ ಚರ್ಚೆಗೆ ಕಾರಣವಾಯಿತು. ಮದ್ರಾಸ್ ಹೈಕೋರ್ಟ್ ನಿಂದ ಕಲ್ಕತ್ತಾಗೆ ವರ್ಗಾವಣೆ ಮಾಡಿದ ಬಗ್ಗೆ ಸುಪ್ರೀಂ ಕೋರ್ಟ್ ನ ಕೊಲಿಜಿಯಂನ ಕೂಡ ಕರ್ಣನ್ ಪ್ರಶ್ನೆ ಮಾಡಿದ್ದರು. ಹಿರಿಯ ವಕೀಲ ಕೆಕೆ ವೇಣುಗೋಪಾಲ್ ಅವರು ಮದ್ರಾಸ್ ಹೈಕೋರ್ಟ್ ನಲ್ಲಿ, ನ್ಯಾ.ಕರ್ಣನ್ ಅವರು ಮಾಡುತ್ತಿರುವ ನಿಂದನೆ ಹಾಗೂ ಆರೋಪದ ವಿರುದ್ಧ ರಕ್ಷಣೆ ಒದಗಿಸಬೇಕು ಎಂದು ಕೇಳಿದ್ದರು.[ಹೈಕೋರ್ಟ್ ಜಡ್ಜ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ]
ಕಲ್ಕತ್ತಾ ಹೈಕೋರ್ಟ್ ನ ನ್ಯಾಯಮೂರ್ತಿ ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತ್ತು. ಫೇಬ್ರವರಿ 13ರಂದು ಹಾಜರಾಗಿ, ನಿಂದನೆ ವಿಚಾರಣೆ ಏಕೆ ನಡೆಸಬಾರದು ಎಂದು ವಿವರಿಸುವಂತೆ ತಿಳಿಸಿತ್ತು. ಕರ್ಣನ್ ನಡೆಸುತ್ತಿದ್ದ ಎಲ್ಲ ವಿಚಾರಣೆಗಳ ಕಡತವನ್ನು ಹಿಂತಿರುಗಿಸುವಂತೆ ಕೂಡ ತಿಳಿಸಿತ್ತು.
ಇದೇ ಮೊದಲ ಬಾರಿಗೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಎದುರಾಗಿತ್ತು. ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ಸುಪ್ರೀಂ ಕೋರ್ಟ್ ಮುಖಯ್ ನ್ಯಾಯಮೂರ್ತಿಗಳಾದ ಜೆಎಸ್ ಖೇಳ್ಕರ್ ನೇತೃತ್ವದ ಸಂವಿಧಾನ ಪೀಠವು ಕರ್ಣನ್ ವಿಚಾರಣೆಯನ್ನು ಕೈಗೆತ್ತಿಕೊಂಡಿತು.
ನ್ಯಾ,ಕರ್ಣನ್ ಅವರು ತಮ್ಮ ಸಹೋದ್ಯೋಗಿಗಳ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ನ್ಯಾ.ಕರ್ಣನ್ ಜನವರಿ 23ರಂದು ಪ್ರಧಾನಿಗೆ ಕೂಡ ಪತ್ರ ಬರೆದಿದ್ದರು. ಆ ಬಗ್ಗೆ ತನಿಖೆ ಆಗಬೇಕು ಎಂದು ಮನವಿ ಮಾಡಿದ್ದರು.