ಕಣಿವೆ ರಾಜ್ಯದಲ್ಲಿ ಕೋಲಾಹಲ ಎಬ್ಬಿಸಲು ಹುರಿಯತ್ ಹುನ್ನಾರ!
ನವದೆಹಲಿ, ನವೆಂಬರ್ 24: ಜಮ್ಮು-ಕಾಶ್ಮೀರದಲ್ಲಿ ನಿಧಾನಕ್ಕೆ ಶಾಂತಿ ಮರಳುತ್ತಿದೆ. ಸಹಜ ಸ್ಥಿತಿಗೆ ಕಣಿವೆ ರಾಜ್ಯ ಬರುತ್ತಿದ್ದು, ಹುರಿಯತ್ ನಾಯಕರು ಮತ್ತೊಂದು ಸುತ್ತು ಕೋಲಾಹಲ ಎಬ್ಬಿಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನೋಟು ರದ್ದು ಹುರಿಯತ್ ಗೂ ಬಿಸಿ ಮುಟ್ಟಿಸಿದೆ.
ಅದರೆ, ಹೊಸದಾಗಿ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಸಲುವಾಗಿ ಹುರಿಯತ್ ನವರು ನಿಧಾನಕ್ಕೆ ಹಣ ಒಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಹುರಿಯತ್ ಹೊಸದಾಗಿ ಕೋಲಾಹಲ ಎಬ್ಬಿಸಲು ಹವಣಿಸುತ್ತಿದ್ದರೆ, ಪಾಕಿಸ್ತಾನವು ಭಾರತದೊಳಗೆ ಹೆಚ್ಚಿನ ಸಂಖ್ಯೆಯ ಉಗ್ರರನ್ನು ಕಳಿಸಲು ಯತ್ನಿಸುತ್ತಿದೆ.[ಪಾಕ್ ಕ್ರೌರ್ಯಕ್ಕೆ ಸಾಕ್ಷಿಯಾದ ಮಚಿಲ್ ನಲ್ಲಿ ಪಹರೆ ಸುಲಭವಲ್ಲ!]
ಈ ಎರಡೂ ಪ್ರಯತ್ನಗಳು ಗಂಡಾಂತಕಾರಿ ಎಂದು ಗುಪ್ತಚರ ಅಧಿಕಾರಿಗಳು ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸರು ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದಿದ್ದಾರೆ. ಹುರಿಯತ್ ಮಾಡಿದ ಎಲ್ಲ ಯೋಜನೆಗಳು ಕಳೆದ ಕೆಲವು ವಾರಗಳಲ್ಲಿ ಹಾಳಾಗಿವೆ. ಇತ್ತೀಚೆಗೆ ಕಾಶ್ಮೀರದಲ್ಲಿ ಶಾಂತಿಯುತವಾಗಿ ನಡೆದ ವಿದ್ಯಾರ್ಥಿಗಳ ಪರೀಕ್ಷೆಗಳಿಂದ ಅದಕ್ಕೆ ಹಿನ್ನಡೆಯಾದಂತಾಗಿದೆ.
ಪರೀಕ್ಷೆಗಳು ತೊಂದರೆ ನೀಡಲು ಮಾಡಿದ ಯತ್ನಗಳು ವಿಫಲವಾದವು. ಸದ್ಯಕ್ಕೆ ಅವರಿಗೆ ನಗದಿಗೆ ಸಮಸ್ಯೆಯಾಗಿದೆ. ಹಿಂಸಾಚಾರಕ್ಕಾಗಿ ಇಟ್ಟುಕೊಂಡಿದ್ದದ್ದು ಕಪ್ಪು ಹಣ. 500, 1000 ನೋಟುಗಳನ್ನು ರದ್ದು ಮಾಡಿದ ನಂತರ ಅವು ಪ್ರಯೋಜನಕ್ಕೆ ಇಲ್ಲದಂತಾಗಿವೆ. ಆದ್ದರಿಂದ ಮತ್ತೆ ಹಣ ಒಗ್ಗೂಡಿಸುವ ಪ್ರಯತ್ನದಲ್ಲಿದ್ದಾರೆ.[ಹತರಾದ ಉಗ್ರರ ಬಳಿ ಸಿಕ್ಕಿತು 2 ಸಾವಿರ ರು. ನೋಟು]
ಅದು ಪೂರ್ಣ ಆಗುತ್ತಿದ್ದಂತೆ ಮತ್ತೆ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಾರೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಎಚ್ಚರಿಕೆ ಮಾತನಾಡಿದ್ದಾರೆ. ಇದೇ ವೇಳೆ ಪ್ರತ್ಯೇಕತಾವಾದಿಗಳ ಆರ್ಥಿಕ ವ್ಯವಹಾರಗಳ ಮೇಲೆ ಕಣ್ಣಿಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.