ದೇಶದ ಆರ್ಥಿಕತೆ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣ ಮುಖ್ಯಾಂಶ
ನವದೆಹಲಿ, ಅಕ್ಟೋಬರ್ 24: ದೇಶದ ಸ್ಥೂಲ ಆರ್ಥಿಕ ಸ್ಥಿತಿಯು ಮೂಲಭೂತವಾಗಿ ಶಕ್ತಿಯುತವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಹೇಳಿದರು. ಆರ್ಥಿಕ ಸಚಿವಾಲಯದ ಉನ್ನತಾಧಿಕಾರಿಗಳ ಜತೆಗೆ ಪತ್ರಿಕಾಗೋಷ್ಠಿ ನಡೆಸಿದರು.
ದೇಶದ ಆರ್ಥಿಕ ಸ್ಥಿತಿ ಕುಲಗೆಡಿಸಿದ ಜೇಟ್ಲಿ: ಸ್ವಪಕ್ಷೀಯರಿಂದಲೇ ಟೀಕೆ
ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಪ್ರಸೆಂಟೇಷನ್ ಸಹ ನೀಡಿದರು. ಈ ರೀತಿ ಪ್ರಸೆಂಟೇಷನ್ ಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಶಾಸ್ತ್ರಿ ಭವನದಲ್ಲಿದ್ದ ಪತ್ರಿಕಾಗೋಷ್ಠಿಯನ್ನು ರಾಷ್ಟ್ರೀಯ ಮಾಧ್ಯಮ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ಕೇಂದ್ರ ಸರಕಾರದ ಆರ್ಥಿಕ ನೀತಿ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ.
ಜತೆಗೆ ಕೇಂದ್ರದ ಮಾಜಿ ಸಚಿವರಾದ (ಬಿಜೆಪಿಯ ಮುಖಂಡರು) ಯಶವಂತ್ ಸಿನ್ಹಾ ಹಾಗೂ ಅರುಣ್ ಶೌರಿ ಕೂಡ ವಾಗ್ದಾಳಿ ನಡೆಸಿದ್ದಾರೆ. ಅಪನಗದೀಕರಣ, ಜಿಎಸ್ ಟಿ ಜಾರಿಯಂಥ ವಿಚಾರಗಳನ್ನು ಕೇಂದ್ರ ಸರಕಾರ ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಅವರ ಆರೋಪ.
ಜಿಡಿಪಿ ಬೆಳವಣಿಗೆ ದರ ಕುಸಿತ ಚಿಂತೆಗೆ ಕಾರಣ: ಅರುಣ್ ಜೇಟ್ಲಿ
ಜೂನ್ ತ್ರೈಮಾಸಿಕದಲ್ಲಿ ಆರ್ಥಿಕ ಪ್ರಗತಿ ದರವು ಮೂರು ವರ್ಷದಲ್ಲೇ ಕನಿಷ್ಠವಾದ ಶೇ 5.7ಕ್ಕೆ ತಲುಪಿದೆ. ಸೋಮವಾರವಷ್ಟೇ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದರು. ಆಗಸ್ಟ್- ಸೆಪ್ಟೆಂಬರ್ ನಲ್ಲಿ ಜಿಎಸ್ ಟಿ ರಿಟರ್ನ್ ಸಲ್ಲಿಸುವುದು ತಡವಾಗಿರುವವರಿಗೆ ವಿಧಿಸಿದ ದಂಡವನ್ನು ಮನ್ನಾ ಮಾಡಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅರುಣ್ ಜೇಟ್ಲಿ ಭಾಷಣದ ಮುಖ್ಯಾಂಶಗಳು
* ಸಾರ್ವಜನಿಕ ವಲಯದ ಬ್ಯಾಂಕ್ ಗಳಿಗೆ ಇನ್ನು ಎರಡು ವರ್ಷದಲ್ಲಿ 2.11 ಲಕ್ಷ ಕೋಟಿ ಬಂಡವಾಳ ಪೂರೈಕೆ
* ಕಳೆದ ತಿಂಗಳೇ ನಾನು ತಿಳಿಸಿದ್ದೇ ಜಿಎಸ್ ಟಿ ಸವಾಲಿಗೆ ಸಮರ್ಪಕವಾಗಿ ಪ್ರತಿಕ್ರಿಯಿಸುತ್ತೇವೆ.
* ಕಳೆದ ಮೂರು ವರ್ಷಗಳಿಂದ ಭಾರತವು ಜಗತ್ತಿನ ಅತಿ ವೇಗವಾಗಿ ಬೆಳೆಯುವ ಬೃಹತ್ ಆರ್ಥ ವ್ಯವಸ್ಥೆಯಾಗಿಯೇ ಉಳಿದುಕೊಂಡಿದೆ.
* ದೇಶದ ಸ್ಥೂಲ ಆರ್ಥಿಕ ಸ್ಥಿತಿಯು ಮೂಲಭೂತವಾಗಿ ತುಂಬ ಗಟ್ಟಿಯಾಗಿದೆ.
* ಕೆಲವು ಬಾರಿ ಪ್ರಮುಖ ಸುಧಾರಣೆಗಳು ಕೆಲ ಸಣ್ಣ-ಪುಟ್ಟ ಅಡೆತಡೆಗಳನ್ನು ಒಡ್ಡುತ್ತವೆ. ಆದರೆ ಮಧ್ಯಮ ಮತ್ತು ದೀರ್ಘಾವಧಿಯಲ್ಲಿ ಇವುಗಳಿಂದ ಹೆಚ್ಚು ಲಾಭವಾಗುತ್ತವೆ ಎಂದು ಸಾಬೀತಾಗುತ್ತದೆ.
* 2014ರಿಂದ ಈಚೆಗೆ ಹಣದುಬ್ಬರ ದರದಲ್ಲಿ ನಿಯಮಿತವಾಗಿ ಇಳಿಕೆಯಾಗುತ್ತಿದೆ.
* ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಈಗ ತೆಗೆದುಕೊಂಡಿರುವ ಕ್ರಮಗಳಿಂದ ಮೂಲಸೌಕರ್ಯದ ಮೇಲಿನ ವೆಚ್ಚಕ್ಕೆ ಉತ್ತೇಜನ ಸಿಗುತ್ತದೆ.
ಸುಭಾಷ್ ಚಂದ್ರ ಗಾರ್ಗ್ ಭಾಷಣ ಮುಖ್ಯಾಂಶ
* ಹಣದುಬ್ಬರದಲ್ಲಿ ಇಳಿಕೆಯಾಗಿದೆ.
* ವಿದೇಶಿ ವಿನಿಮಯ ಸಂಗ್ರಹವು ನಾಲೂರು ಬಿಲಿಯನ್ ಅಮೆರಿಕ ಡಾಲರ್ ಅನ್ನು ಮೀರಿದೆ.
* ಜಿಎಸ್ ಟಿ ಎಂಬುದು ಅಪನಗದೀಕರಣ ಮತ್ತು ಕಪ್ಪು ಹಣದ ವಿರುದ್ಧದ ಹೋರಾಟದಂತೆಯೇ ಬಹು ದೊಡ್ಡ ಸುಧಾರಣೆ.
* ನಾವು ಚಾರಿತ್ರಿಕ ಎನಿಸುವಂಥ ರಸ್ತೆ ಹಾಗೂ ಮೂಲಸೌಲಭ್ಯ ನಿರ್ಮಾಣವನ್ನು ಕೈಗೊಂಡಿದ್ದೇವೆ.
* ಪರಿಣಾಮಕಾರಿ ಹಾಗೂ ಗುರಿ ತಲುಪಬೇಕಾದ ವಿಚಾರಗಳಿಗೆ ಹಣವನ್ನು ವ್ಯಯಿಸುವುದು ಸರಕಾರದ ಆದ್ಯತೆ
ಆರ್ಥಿಕ ಕಾರ್ಯದರ್ಶಿ ಅಶೋಕ್ ಲವಾಸ ಭಾಷಣದ ಮುಖ್ಯಾಂಶ
* ಭಾರತ್ ಮಾಲಾ ಕಾರ್ಯಕ್ರಮವು ರಸ್ತೆ ನಿರ್ಮಾಣದ ಪ್ರಮುಖ ಯೋಜನೆ
* 34,800 ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಬೇಕಿದ್ದು, ಅದಕ್ಕಾಗಿ ಮುಂದಿನ ಐದು ವರ್ಷದಲ್ಲಿ 5,35,000 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.
* ಅಂತರ ದೇಶೀಯ ವ್ಯವಹಾರಗಳಿಗೆ ಮೂಲಸೌಲಭ್ಯ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಾಗುವುದು
* ಭಾರತ್ ಮಾಲಾ ಯೋಜನೆಯ ಮೊದಲ ಹಂತದಲ್ಲಿ ಕರಾವಳಿ ಭಾಗದ ಎರಡು ಸಾವಿರ ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗುವುದು.