ಗಂಟಲು ದ್ರವ ಬೇಕಿಲ್ಲ: ಕೊರೊನಾವೈರಸ್ ತಪಾಸಣೆಗೆ ಐಸಿಎಂಆರ್ ಹೊಸ ಮಾರ್ಗ!
ನವದೆಹಲಿ, ಆಗಸ್ಟ್.21: ಕೊರೊನಾವೈರಸ್ ಸೋಂಕು ತಪಾಸಣೆಗೆ ಇನ್ನು ಮುಂದೆ ಗಂಟಲು ದ್ರವವೇ ಬೇಕು ಎನ್ನುವಂತಿಲ್ಲ. ಕೇವಲ ಬಾಯಿ ಮುಕ್ಕಳಿಸಿದ ನೀರಿನಿಂದಲೂ ಸೋಂಕು ತಗುಲಿರುವುದನ್ನು ಪತ್ತೆ ಹಚ್ಚಲು ಸಾಧ್ಯ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.
Recommended Video
ಗಂಟಲು ದ್ರವ ಸಂಗ್ರಹಿಸುವುದಕ್ಕೆ ಬದಲಿ ಮಾರ್ಗವನ್ನು ಐಸಿಎಂಆರ್ ಪತ್ತೆ ಮಾಡಿದೆ. ಪ್ರಾಥಮಿಕ ಹಂತದಲ್ಲಿ ಗಂಟಲು ದ್ರವದ ಬದಲಿಗೆ ಬಾಯಿ ಮುಕ್ಕಳಿಸಿದ ನೀರಿನ ಮಾದರಿಯನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಬಹುದು ಎಂದು ಐಸಿಎಂಆರ್ ತಿಳಿಸಿದೆ.
ಕೊರೊನಾಗೆ ಬೆದರುವ ಬದಲು ಈ 'ಲಸಿಕೆ' ಹಾಕಿಸಿಕೊಳ್ಳಿ!
ಕೊರೊನಾವೈರಸ್ ಸೋಂಕು ತಪಾಸಣೆಗಾಗಿ ಗಂಟಲು ದ್ರವ ಸಂಗ್ರಹಿಸುತ್ತಿರುವ ಹಿನ್ನೆಲೆ ಮತ್ತೊಂದು ರೀತಿ ಅನಾರೋಗ್ಯವು ಜನರನ್ನು ಬಾಧಿಸುತ್ತಿರುವ ವಿಚಾರ ಇತ್ತೀಚಿಗೆ ವೈದ್ಯರು ನಡೆಸಿದ ಸಂಶೋಧನೆಯಿಂದ ಬೆಳಕಿಗೆ ಬಂದಿತ್ತು.
ಏಮ್ಸ್ ನ 50 ರೋಗಿಗಳ ಮೇಲೆ ವೈದ್ಯಕೀಯ ಸಂಶೋಧನೆ
ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಳೆದ ಮೇ-ಜೂನ್ ತಿಂಗಳಿನಲ್ಲಿ 50 ರೋಗಿಗಳನ್ನು ವೈದ್ಯಕೀಯ ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿತ್ತು. ಈ ವೇಳೆ ಗಂಟಲು ದ್ರವ ಸಂಗ್ರಹಿಸಿದ ರೋಗಿಗಳಲ್ಲಿ ಸಹಜವಾಗಿ ಕೆಮ್ಮು, ಸೀನುವ ಲಕ್ಷಣಗಳು ಕಂಡು ಬಂದಿದ್ದವು. ಪದೇ ಪದೆ ಗಂಟಲು ದ್ರವದ ಸಂಗ್ರಹಿಸುವುದರಿಂದ ಗಂಟಲು ಉರಿಯಂತಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದವು.
ವೈದ್ಯಕೀಯ ಸಿಬ್ಬಂದಿಗೂ ಇದು ಸುರಕ್ಷಿತ ಮಾರ್ಗ
ಕೊರೊನಾವೈರಸ್ ಸೋಂಕು ತಪಾಸಣೆಗಾಗಿ ಗಂಟಲು ದ್ರವದ ಮಾದರಿ ಸಂಗ್ರಹಿಸುವ ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಬೇಕಾಗುತ್ತದೆ. ಮಾದರಿ ಸಂಗ್ರಹಿಸಲು ತೆರಳಿದ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಗೂ ಸೋಂಕು ಅಂಟಿಕೊಳ್ಳುವ ಅಪಾಯ ಹೆಚ್ಚಾಗಿತ್ತು. ಆದರೆ ಬಾಯಿ ಮುಕ್ಕಳಿಸಿದ ನೀರನ್ನು ಸಂಗ್ರಹಿಸುವುದರಿಂದ ಈ ಅಪಾಯ ಇರುವುದಿಲ್ಲ. ಸಾರ್ವಜನಿಕರೇ ಸ್ವತಃ ತಾವು ಬಾಯಿ ಮುಕ್ಕಳಿಸಿದ ನೀರನ್ನು ಸಂಗ್ರಹಿಸಿ ವೈದ್ಯಕೀಯ ಸಿಬ್ಬಂದಿಗೆ ನೀಡುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಹರಡುವ ಅಪಾಯ ಇರುವುದಿಲ್ಲ.
ಗಂಟಲು ದ್ರವ ನೀಡದಂತಾ ಸ್ಥಿತಿಯಲ್ಲಿದ್ದವರಿಗೆ ಅನುಕೂಲ
ಕೆಲವು ಪ್ರಕರಣಗಳಲ್ಲಿ ತೀರಾ ಅಸ್ವಸ್ಥಗೊಂಡ ಕೊರೊನಾವೈರಸ್ ಸೋಂಕಿತ ವ್ಯಕ್ತಿಗಳಿಗೆ ಗಂಟಲು ದ್ರವನ್ನು ನೀಡುವಷ್ಟು ಸಾಮರ್ಥ್ಯವೂ ಇರುವುದಿಲ್ಲ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಂದ ಗಂಟಲು ದ್ರವ ಸಂಗ್ರಹಿಸುವುದಕ್ಕೂ ಸಾಧ್ಯವಾಗದ ಸ್ಥಿತಿಯಿರುತ್ತದೆ. ಇಂಥ ಸಂದರ್ಭದಲ್ಲಿ ರೋಗಿಗಳು ಬಾಯಿ ಮುಕ್ಕಳಿಸಿದ ನೀರನ್ನು ಸಂಗ್ರಹಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸುವುದು ಅತಿ ಉಪಯುಕ್ತ ಮಾರ್ಗವಾಗುತ್ತದೆ ಎಂದು ಐಸಿಎಂಆರ್ ತಿಳಿಸಿದೆ.
ಹಣದ ಜೊತೆಗೆ ಸಮಯವೂ ಉಳಿತಾಯ
ಕೊರೊನಾವೈರಸ್ ಸೋಂಕು ತಪಾಸಣೆ ಸಂದರ್ಭದಲ್ಲಿ ಗಂಟಲು ದ್ರವ ಸಂಗ್ರಹಿಸುವುದಕ್ಕೆ ಸಮಯ ತೆಗೆದುಕೊಳ್ಳಲಾಗುತ್ತದೆ. ಅದಕ್ಕಾಗಿ ಹಣವೂ ಹೆಚ್ಚಾಗಿ ಖರ್ಚಾಗುತ್ತಿದೆ. ಆದರೆ ಬಾಯಿ ಮುಕ್ಕಳಿಸಿದ ನೀರಿನ ಮಾದರಿಯನ್ನು ಸಂಗ್ರಹಿಸಲು ಯಾವುದೇ ರೀತಿ ಹಣ ಖರ್ಚು ಮಾಡುವ ಅಗತ್ಯವಿರುವುದಿಲ್ಲ. ಇನ್ನು, ಇದರಿಂದ ವೈದ್ಯಕೀಯ ಸಿಬ್ಬಂದಿಯ ಸಮಯವೂ ಉಳಿತಾಯವಾಗಲಿದೆ ಎಂದು ಐಸಿಎಂಆರ್ ತಿಳಿಸಿದೆ.