ಅತ್ಯಾಚಾರ ಆರೋಪ: ಅಂಡಮಾನ್- ನಿಕೋಬಾರ್ ಮಾಜಿ ಮುಖ್ಯ ಕಾರ್ಯದರ್ಶಿ ಬಂಧನ
ಪೋರ್ಟ್ ಬ್ಲೈರ್, ನವೆಂಬರ್ 11: ಸಾಮೂಹಿಕ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್ ಅವರನ್ನು ಬಂಧಿಸಲಾಗಿದೆ.
ಆರೋಪಿ ಜಿತೇಂದ್ರ ನರೇನ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪೋರ್ಟ್ ಬ್ಲೇರ್ನ ಸೆಷನ್ಸ್ ನ್ಯಾಯಾಲಯವು ತಿರಸ್ಕರಿಸಿದ ನಂತರ ಗುರುವಾರ ಅವರನ್ನು ಬಂಧಿಸಲಾಗಿದೆ.
ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿದ ಹಿರಿಯ ಐಎಎಸ್ ಅಧಿಕಾರಿ ಅಮಾನತು
ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ರಚಿಸಿರುವ ವಿಶೇಷ ತನಿಖಾ ತಂಡ (SIT) ಕಸ್ಟಡಿ ವಿಚಾರಣೆಯನ್ನು ಎದುರಿಸಲಿರುವ ನರೇನ್ ಅವರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ.
ಅಕ್ಟೋಬರ್ನಲ್ಲಿ 21 ವರ್ಷದ ಯುವತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೋರ್ಟ್ ಬ್ಲೇರ್ನ ಅಬರ್ಡೀನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ದೂರಿನಲ್ಲಿ ಜಿತೇಂದ್ರ ನರೇನ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಲೇಬರ್ ಕಮಿಷನರ್ ಆರ್ಎಲ್ ರಿಷಿಯನ್ನು ಹೆಸರಿಸಲಾಗಿದೆ. ಅಂದಿನಿಂದ ನರೇನ್ ಮತ್ತು ರಿಷಿ ಇಬ್ಬರನ್ನೂ ಅಮಾನತು ಮಾಡಲಾಗಿದೆ.
ಮಾಜಿ ಮುಖ್ಯ ಕಾರ್ಯದರ್ಶಿ ಜಿತೇಂದ್ರ ನರೇನ್ ಬಂಧನ
ಅಕ್ಟೋಬರ್ 15 ರಂದು ಪೋರ್ಟ್ ಬ್ಲೇರ್ನಲ್ಲಿರುವ ಯುವತಿಯೊಬ್ಬರು, ಮುಖ್ಯ ಕಾರ್ಯದರ್ಶಿಯ ಅಧಿಕೃತ ನಿವಾಸದಲ್ಲಿ ಜಿತೇಂದ್ರ ನರೇನ್ ಮತ್ತು ರಿಷಿ ಲೈಂಗಿಕ ದೌರ್ಜನ್ಯ ಮತ್ತು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇಬ್ಬರು ತನಗೆ ಸರ್ಕಾರಿ ಉದ್ಯೋಗದ ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಕ್ಟೋಬರ್ 28 ರಂದು ಎಸ್ಐಟಿಯು ಸಾಕ್ಷ್ಯವನ್ನು ಕಂಡುಹಿಡಿದಿದ್ದು, ಲೈಂಗಿಕ ದೌರ್ಜನ್ಯ ನಡ೩ಎಸಿರುವ ಕುರಿತು ಪ್ರಮುಖ ಸಾಕ್ಷಿ ಹೇಳಿಕೆಗಳನ್ನು ದಾಖಲಿಸಿದೆ. ನರೇನ್ ಅಧಿಕಾರಾವಧಿಯಲ್ಲಿ 20 ಕ್ಕೂ ಹೆಚ್ಚು ಮಹಿಳೆಯರನ್ನು ಪೋರ್ಟ್ ಬ್ಲೇರ್ನಲ್ಲಿರುವ ನರೇನ್ ಅವರ ನಿವಾಸಕ್ಕೆ ಕರೆದೊಯ್ಯಲಾಗಿದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವರಿಗೆ ಉದ್ಯೋಗಗಳನ್ನು ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಸಾಕ್ಷಿಗಳ ಮೇಲೆ ಆರೋಪಿ ಪ್ರಭಾವ ಬೀರುವ ಆತಂಕ
ಈ ಆರೋಪಗಳು ಘೋರ ಮತ್ತು ಹೇಯ ಸ್ವಭಾವದಿಂದ ಕೂಡಿವೆ ಎಂದು ಹೇಳಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುಭಾಷ್ ಕುಮಾರ್ ಕರ್, ಕಸ್ಟಡಿಯಲ್ ವಿಚಾರಣೆಯ ಅಗತ್ಯ, ಸರಿಯಾದ ಮತ್ತು ನಿಷ್ಪಕ್ಷಪಾತ ತನಿಖೆಯ ಹಿತಾಸಕ್ತಿಯನ್ನು ಒತ್ತಿ ಹೇಳಿದ್ದಾರೆ.
ಆರೋಪಿಯು ಮುಖ್ಯ ಕಾರ್ಯದರ್ಶಿಯ ಜವಾಬ್ದಾರಿಯನ್ನು ಹೊಂದಿದ್ದ ಉನ್ನತ ಶ್ರೇಣಿಯ ಅಧಿಕಾರಿಯಾಗಿದ್ದು, ಅವರ "ಅಧಿಕಾರ ಮತ್ತು ಸ್ಥಾನವನ್ನು ಸಾಮಾನ್ಯ ಸ್ತರದ ವ್ಯಕ್ತಿಯೊಂದಿಗೆ ಸಮೀಕರಿಸಲಾಗುವುದಿಲ್ಲ" ಎಂದು ನ್ಯಾಯಾಲಯವು ಒತ್ತಿಹೇಳಿದೆ.
ಎರಡು ಗಂಟೆಗಳ ಕಾಲ ನಡೆದ ವಿಚಾರಣೆಯಲ್ಲಿ, ಯುಟಿ ಆಡಳಿತದ ಪರವಾಗಿ ಹಾಜರಾದ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಮಹಿಳೆಯನ್ನು ಪ್ರತಿನಿಧಿಸುವ ವಕೀಲರು ನರೇನ್ ನಿರ್ಣಾಯಕ ಸಾಕ್ಷ್ಯಗಳನ್ನು ತಿರುಚುವ ಮತ್ತು ಪ್ರಮುಖ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ತನಿಖೆಗೆ ಸಹಕರಿಸದ ಆರೋಪಿ ಜೀತೇಂದ್ರ ನರೇನ್
ನ್ಯಾಯಾಲಯವು ತನ್ನ ಆದೇಶದಲ್ಲಿ, ನರೇನ್ ಎಸ್ಐಟಿ ಮುಂದೆ ಹಾಜರಾಗಿದ್ದರೂ, ಅವರು ತನಿಖೆಗೆ ಯಾವುದೇ ರೀತಿಯಲ್ಲಿ ಸಹಕರಿಸುತ್ತಿಲ್ಲ ಎಂಬ ರಾಜ್ಯದ ವಾದವನ್ನು ಗಮನಿಸಿ, ಅವರ ಕಸ್ಟಡಿ ವಿಚಾರಣೆಯನ್ನು ಅತ್ಯಗತ್ಯಗೊಳಿಸಿತು.
ಪ್ರಕರಣದ ಇತರ ಇಬ್ಬರು ಆರೋಪಿಗಳಾದ ರಿಷಿ ಮತ್ತು ಹೋಟೆಲ್ ಮಾಲೀಕ ರಿಂಕು ಅವರು ಎಫ್ಐಆರ್ ದಾಖಲಿಸಿದ ಸಮಯದಿಂದ ತಲೆಮರೆಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳ ಜಾಮೀನು ಅರ್ಜಿಯನ್ನು ಪೋರ್ಟ್ ಬ್ಲೇರ್ನ ನ್ಯಾಯಾಲಯವು ತಿರಸ್ಕರಿಸಿದೆ. ಇಬ್ಬರ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ನಿರೀಕ್ಷಣಾ ಜಾಮೀನಿನ ವಿರುದ್ಧ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದ ಅಂಡಮಾನ್
ಅಕ್ಟೋಬರ್ 20 ರಂದು, ದೆಹಲಿ ಹೈಕೋರ್ಟ್ ನರೇನ್ ಅವರಿಗೆ ಅಕ್ಟೋಬರ್ 28 ರವರೆಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತು. ಮರುದಿನ, ಅವರು ಪೋರ್ಟ್ ಬ್ಲೇರ್ನಲ್ಲಿ ಕುಳಿತು ಕಲ್ಕತ್ತಾ ಹೈಕೋರ್ಟ್ ಸರ್ಕ್ಯೂಟ್ ಬೆಂಚ್ ಅನ್ನು ಸಂಪರ್ಕಿಸಿದ್ದರು. ಆದರೆ, ಸರ್ಕ್ಯೂಟ್ ಬೆಂಚ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಯ ಮುಂದೆ ಹಾಜರಾಗುವಂತೆ ತಿಳಿಸಿತ್ತು.
ನಂತರ ಯುಟಿ ಆಡಳಿತವು ಆರೋಪಿ ನರೇನ್ಗೆ ನೀಡಲಾದ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿತ್ತು. ಯುಟಿ ಆಡಳಿತದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಿಆರ್ಪಿಸಿ ಸೆಕ್ಷನ್ 164 ರ ಅಡಿಯಲ್ಲಿ ಮಹಿಳೆ ಮ್ಯಾಜಿಸ್ಟ್ರೇಟ್ಗೆ ನೀಡಿದ ಹೇಳಿಕೆಯನ್ನು ಈಗಾಗಲೇ ಸ್ವತಂತ್ರ ಸಾಕ್ಷಿಗಳು ದೃಢಪಡಿಸಿದ್ದಾರೆ ಎಂದು ಹೇಳಿದ್ದರು.