ಟಿಡಿಪಿ ಎಂಪಿಗಳು ಬಿಜೆಪಿಗೆ, ರಾಜ್ಯಸಭೆಯಲ್ಲಿ ಸಂಖ್ಯಾಬಲ ಹೆಚ್ಚಳ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರಿಗೆ ಚುನಾವಣೆ ಸೋಲಿನ ಬಳಿಕ ಮತ್ತೊಂದು ಆಘಾತ ಉಂಟಾಗಿದ್ದು, ನಾಲ್ವರು ಟಿಡಿಪಿ ಎಂಪಿಗಳು ಬಿಜೆಪಿ ಸೇರಿದ್ದಾರೆ.
ಟಿಡಿಪಿ ರಾಜ್ಯಸಭಾ ಸದಸ್ಯರಾದ ಟಿಜಿ ವೆಂಕಟೇಶ್, ವೈಎಸ್ ಚೌದರಿ, ಜಿಎಂ ರಾವ್ ಮತ್ತು ಸಿಎಂ ರಮೇಶ್ ತಾವು ಬಿಜೆಪಿ ಸೇರುತ್ತಿರುವುದಾಗಿ ಗುರುವಾರ ಪ್ರಕಟಿಸಿದ್ದರು. ರಾಜ್ಯಸಭೆಯ ತೆಲುಗು ದೇಶಂನ ಶಾಸಕಾಂಗ ಪಕ್ಷವು ಗುರುವಾರ ಸಭೆ ನಡೆಸಿ ಟಿಡಿಪಿಯನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವ ಸಂಬಂಧ ನಿರ್ಣಯ ತೆಗೆದುಕೊಂಡಿದೆ.
ಮೇಲ್ಮನೆ ಸಂಖ್ಯಾಬಲ ಏನಾಗಲಿದೆ?:
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸದ್ಯಕ್ಕೆ 106 ಸದಸ್ಯ ಬಲ ಹೊಂದಿದೆ(ಟಿಡಿಪಿ ಸಂಸದರನ್ನು ಸೇರಿಸಿ) ಆದರೂ ಬಹಮತಕ್ಕೆ ಇನ್ನೂ 18 ಸದಸ್ಯರು ಬೇಕು. ಕಾಂಗ್ರೆಸ್ ನೇತೃತ್ವದ ಯುಪಿಎ ಒಟ್ಟು 66 ಸದಸ್ಯ ಬಲ ಹೊಂದಿದೆ. ಎನ್ಡಿಎ ಹಾಗೂ ಯುಪಿಎ ಎರಡಕ್ಕೂ ಸೇರದ ಸದಸ್ಯರ ಸಂಖ್ಯೆ ಕೂಡಾ 66 ರಷ್ಟಿದೆ. ಒಟ್ಟು 9 ಸ್ಥಾನಗಳು ಇನ್ನು ಖಾಲಿಯಿವೆ.

ಮಹಾರಾಷ್ಟ್ರ, ಜಾರ್ಖಂಡ್, ಹರ್ಯಾಣದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2020ರಲ್ಲಿ ರಾಜ್ಯಸಭೆಯಲ್ಲಿ ತನ್ನ ಬಲ ಪ್ರದರ್ಶನಕ್ಕೆ ಬಿಜೆಪಿ ಸಜ್ಜಾಗಿದೆ. ಬಿಹಾರದಲ್ಲಿ ಜೆಡಿಯು, ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆ ಉತ್ತಮ ಫಲಿತಾಂಶ ನೀಡಿದರೆ, 2021ರ ವೇಳೆಗೆ ಬಿಜೆಪಿ 124 ಸದಸ್ಯ ಬಲ ಹೊಂದಿ ಬಹುಮತ ಸಾಧಿಸುವ ನಿರೀಕ್ಷೆ ಹೊಂದಿದೆ.
ಎನ್ಡಿಎಯೇತರ ಪಕ್ಷಗಳಾದ ಬಿಜೆಡಿ, ಟಿಆರ್ ಎಸ್ ಹಾಗೂ ವೈಎಸ್ಸಾರ್ ಪಕ್ಷಗಳು ಆಡಳಿತಾರೂಢ ಪಕ್ಷಕ್ಕೆ ವಿಷಯಾಧಾರಿತ ಬೆಂಬಲ ನೀಡುವ ಸಾಧ್ಯತೆಗಳಿವೆ. ತ್ರಿವಳಿ ತಲಾಕ್, ನಾಗರಿಕ ಕಾಯ್ದೆ 1955ಕ್ಕೆ ತಿದ್ದುಪಡಿ ಸೇರಿದಂತೆ ಅನೇಕ ಮಸೂದೆಗಳು ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ವಿಧೇಯಕಗಳ ಅಂಗೀಕಾರ, ಬಹುಮತ ಗಳಿಸಲು ಮೇಲ್ಮನೆಯಲ್ಲಿ ಮೋದಿ ಸರ್ಕಾರಕ್ಕೆ ಇತರೆ ಪಕ್ಷಗಳ ನೆರವು ಅತ್ಯಗತ್ಯ.












Click it and Unblock the Notifications