ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್
ಜೈಪುರ, ಡಿ. 14: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಬುಧವಾರ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡರು.
ಬುಧವಾರ ಬೆಳಗ್ಗೆ ರಾಜಸ್ಥಾನದ ಸವಾಯಿ ಮಾಧೋಪುರದ ಭಡೋತಿಯಿಂದ ಯಾತ್ರೆ ಪುನರಾರಂಭವಾದ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಸೇರಿಕೊಂಡರು.
ಭಾರತ್ ಜೋಡೋ ಯಾತ್ರೆ: 100ನೇ ದಿನಕ್ಕೆ ಜೈಪುರದಲ್ಲಿ ಸಂಗೀತ ಸಂಭ್ರಮ
ಮಾಜಿ ಆರ್ಬಿಐ ಮುಖ್ಯಸ್ಥರಾಗಿದ್ದ ರಘುರಾಮ್ ರಾಜನ್, ನೋಟು ಅಮಾನ್ಯೀಕರಣದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಸಿದ್ದರು. ಸರ್ಕಾರದ ಈ ನಿರ್ಧಾರ ಭಾರತದ ಆರ್ಥಿಕ ಬೆಳವಣಿಗೆ ಮತ್ತು ವಿತ್ತೀಯ ಕೊರತೆಗೆ ಕಾರಣವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ರಾಜನ್ ತಮ್ಮ ಪುಸ್ತಕ ಐ ಡು ವಾಟ್ ಐ ಡು ನಲ್ಲಿ ನೋಟು ಅಮಾನ್ಯೀಕರಣವನ್ನು ವಿರೋಧಿಸಿದ್ದಾರೆ.
#WATCH | Former RBI Governor Raghuram Rajan briefly joins the Congress party's Bharat Jodo Yatra. The Yatra resumed this morning from Bhadoti of Sawai Madhopur in Rajasthan. pic.twitter.com/KAQSonrfxE
— ANI (@ANI) December 14, 2022
ಈ ಹಿಂದೆಯೂ ಹಲವು ಬಾರಿ ರಘುರಾಮ್ ರಾಜನ್ ಸರ್ಕಾರದ ನೀತಿಗಳನ್ನು ಟೀಕಿಸುತ್ತಲೇ ಇದ್ದಾರೆ. ಅರ್ಥಿಕ ನೀತಿಗಳ ಬಗ್ಗೆ ಆಗ್ಗಾಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುತ್ತಾರೆ.
"ಸರ್ಕಾರ ತಾನು ಯಾವುದೇ ತಪ್ಪು ಮಾಡುವುದಿಲ್ಲ ಎಂದು ನಂಬಿಕೊಂಡಿದೆ. ವಂದಿ ಮಾಗಧರು, ಹೊಗಳುಭಟ್ಟರನ್ನು ಸರ್ಕಾರ ಉತ್ತೇಜಿಸುತ್ತದೆ. ಯಾವುದೇ ಸರ್ಕಾರವಾಗಲೀ ತಪ್ಪು ಮಾಡುವುದು ಸಹಜ" ಎಂದು ಈ ಹಿಂದೆ ಕೇಂದ್ರದ ವಿರುದ್ಧ ಕಿಡಿಕಾರಿದ್ದರು.
ಜೊತೆಗೆ ನಾನು ಸಾಮಾನ್ಯವಾಗಿ ಸಮತೋಲನವಾಗಿ ವಿಮರ್ಶೆ ಮಾಡುತ್ತೇನೆ. ಕೆಲವೊಮ್ಮೆ ಕಟು ಟೀಕೆ ಕೂಡ ಮಾಡುತ್ತೇನೆ. ಈ ಹಿಂದಿನ ಯುಪಿಎ ಸರ್ಕಾರವನ್ನೂ ಟೀಕಿಸಿದ್ದೇನೆ. ಅದಕ್ಕೆ ಮುಂಚಿನ ಎನ್ಡಿಎ ಸರ್ಕಾರದಲ್ಲೂ ನಾನು ಕೆಲಸ ಮಾಡಿದ್ದೇನೆ. ಹೀಗಾಗಿ ವಿಮರ್ಶಿಸುವವರನ್ನು ಟೀಕಾಕಾರರೆಂದು ಹಣೆಪಟ್ಟಿ ಕೊಡುವುದು ಸರಿಯಲ್ಲ" ಎಂದು ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಹೇಳಿದ್ದರು.
ಇನ್ನು, ಸೆಪ್ಟಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸಂಚರಿಸಿದೆ. ಯಾತ್ರೆಯು ಫೆಬ್ರವರಿ 2023 ರ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ.
ಈವರೆಗೆ ಭಾರತ್ ಜೋಡೋ ಯಾತ್ರೆಯಲ್ಲಿ ಹಲವಾರು ರಾಜಕಾರಣಿಗಳು, ಚಿತ್ರರಂಗದ ಗಣ್ಯರು, ಹೋರಾಟಗಾರರು ಮತ್ತು ಸರ್ಕಾರದ ಮಾಜಿ ಅಧಿಕಾರಿಗಳು ಭಾಗವಹಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯ 100 ದಿನಗಳನ್ನು ಗುರುತಿಸಲು ಕಾಂಗ್ರೆಸ್ ಶುಕ್ರವಾರ ಜೈಪುರದಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಿದ್ದು, ಗಾಯಕಿ ಸುನಿಧಿ ಚೌಹಾಣ್ ಅವರ ನೇರ ಪ್ರದರ್ಶನ ನೀಡಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಂಗಳವಾರ ತಿಳಿಸಿದ್ದಾರೆ.