ಪಿ. ಚಿದಂಬರಂ ಬಂಧನ: ಬುಧವಾರ ಇಡೀ ದಿನ ನಡೆದ ಹೈಡ್ರಾಮ
ನವದೆಹಲಿ, ಆಗಸ್ಟ್ 21: ಹಲವು ಹೈಡ್ರಾಮಾಗಳ ನಂತರ ಐಎನ್ಎಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ದೆಹಲಿಯ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.
ಬಿಳಿಯ ಕಾರಿನಲ್ಲಿ, ಬಿಳಿ ಬಟ್ಟೆ ಧರಿಸಿದ್ದ ಚಿದಂಬರಂ ಅವರನ್ನು ಕರೆದುಕೊಂಡು ಹೋಗಲಾಯಿತು. ಚಿದಂಬರಂ ಅವರ ಜೋರ್ ಬಾಗ್ ನಿವಾಸದ ಮುಂದೆ ಕಿಕ್ಕಿರಿದು ಸೇರಿದ್ದ ಮಾಧ್ಯಮದವರು, ಕಾಂಗ್ರೆಸ್ ಕಾರ್ಯಕರ್ತರು, ಪೊಲೀಸರು ಈ ಘಟನೆಗೆ ಸಾಕ್ಷಿಯಾದರು.
ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಇಂದು ದೆಹಲಿ ಹೈಕೋರ್ಟ್ ರದ್ದು ಮಾಡಿತು ಹಾಗಾಗಿ ಬೆಳಿಗ್ಗೆಯಿಂದಲೂ ಪಿ.ಚಿದಂಬರಂ ಬಂಧನ ಭೀತಿ ಎದುರಿಸುತ್ತಿದ್ದರು. ಅವರು ಸಿಬಿಐನಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎನ್ನಲಾಗಿತ್ತು.

ಅಂತಿಮವಾಗಿ ರಾತ್ರಿ ಎಂಟು ಗಂಟೆ ವೇಳೆಗೆ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರ ಜೊತೆ ಪ್ರತ್ಯಕ್ಷವಾದ ಅವರು, ಸುದ್ದಿಗೋಷ್ಠಿ ನಡೆಸಿ, ತಾವು ಕಾನೂನಿನಿಂದ ತಪ್ಪಿಸಿಕೊಂಡಿರಲಿಲ್ಲ, ಕಾನೂನಿನ ಮೂಲಕ ರಕ್ಷಣೆ ಪಡೆಯುವ ಪ್ರಯತ್ನ ಮಾಡುತ್ತಿದ್ದೆ ಎಂದರು. ಅಲ್ಲಿಂದ ತಮ್ಮ ಜೋರ್ ಭಾಗ್ ನಿವಾಸಕ್ಕೆ ತೆರಳಿದರು.
ಅಲ್ಲಿಗೆ ಮೊದಲು ಬಂದ ಸಿಬಿಐ ಅಧಿಕಾರಿಗಳಿಗೆ ಚಿದಂಬರಂ ಅವರ ಮನೆಯ ಗೇಟ್ ತೆರೆಯಲಾಗಲಿಲ್ಲ, ಆಗ ಅವರು ಗೋಡೆ ಹಾರಿ ಒಳಕ್ಕೆ ಪ್ರವೇಶಿಸಿದರು. ನಂತರ ಬಂದ ಇಡಿ ಅಧಿಕಾರಿಗಳನ್ನು ಹಿಂಬಾಗಿಲಿನಿಂದ ಒಳಕ್ಕೆ ಕರೆದುಕೊಂಡು ಹೋಗಲಾಯಿತು.
ಸಿಬಿಐಗೆ ಸೇರಿದ್ದ, ಪೊಲೀಸ್ ಎಂದು ಬರೆದಿದ್ದ ಬಿಳಿಯ ಕಾರೊಂದನ್ನು ಪಿ.ಚಿದಂಬರಂ ಅವರ ನಿವಾಸದ ಗೇಟ್ ಒಳಕ್ಕೆ ತೆಗೆದುಕೊಂಡು ಹೋಗ ಸಿಬಿಐ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಅದೇ ಕಾರಿನಲ್ಲಿ ಬಂಧಿಸಿ ಕರೆದುಕೊಂಡು ಹೋದರು.












Click it and Unblock the Notifications