Rameshwaram Cafe: ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ವಿಭಾಗದ ದಾಳಿ
ಹೈದರಾಬಾದ್, ಮೇ. 24: ಇತ್ತೀಚೆಗಷ್ಟೇ ಬಾಂಬ್ ಸ್ಫೋಟದಿಂದ ಸುದ್ದಿ ಮಾಡಿದ್ದ ರಾಮೇಶ್ವರಂ ಕೆಫೆ ಈಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದೆ. ದಕ್ಷಿಣ ಭಾರತದ ಉಪಹಾರಕ್ಕೆ ಹೆಸರುವಾಸಿಯಾದ ಬೆಂಗಳೂರು ಮೂಲದ ಹೈದರಾಬಾದ್ನ ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ವಿಭಾಗವು ದಾಳಿ ನಡೆಸಿದೆ.
ಹೊಟೇಲ್ ಮೇಲೆ ನಡೆದ ದಾಳಿಯ ವೇಳೆ ತೆಲಂಗಾಣ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಹಲವಾರು ಆಹಾರ ಸುರಕ್ಷತಾ ಉಲ್ಲಂಘನೆಗಳನ್ನು ಪತ್ತೆ ಮಾಡಿದ್ದಾರೆ. ಈ ರೆಸ್ಟೋರೆಂಟ್ನಲ್ಲಿ ಅವಧಿ ಮುಗಿದ ಮತ್ತು ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ.

ರಾಮೇಶ್ವರಂ ಕೆಫೆಯಲ್ಲಿ ಅವಧಿ ಮೀರಿದ ಪದಾರ್ಥ ಬಳಕೆ!
ಆಹಾರ ಸುರಕ್ಷತಾ ಇಲಾಖೆ ಪ್ರಕಾರ, 16,000 ಮೌಲ್ಯದ 100 ಕೆ.ಜಿ ಉದ್ದಿನ ಬೇಳೆ, 10 ಕೆಜಿ ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅವಧಿ ಮುಗಿದಿದ್ದು, ಈ ಎಲ್ಲಾ ವಸ್ತುಗಳು ಅಡುಗೆಮನೆಯಲ್ಲಿ ಕಂಡುಬಂದಿದೆ. ಅಧಿಕಾರಿಗಳು ಅಡುಗೆಮನೆಯಲ್ಲಿ ಅಸಮರ್ಪಕ ಮತ್ತು ಅಸ್ಪಷ್ಟ ಲೇಬಲ್ ಮಾಡಿದ್ದ ಇತರ ಕೆಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸರಿಯಾಗಿ ಲೇಬಲ್ ಮಾಡಿದ 450 ಕೆಜಿ ಅಕ್ಕಿ, 20 ಕೆಜಿ ಬಿಳಿ ಅಲಸಂದೆ ಮತ್ತು 300 ಕೆಜಿ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ" ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ. ಈ ಮಧ್ಯೆ, ಆಹಾರ ನಿರ್ವಾಹಕರಿಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ ಮತ್ತು ರಾಮೇಶ್ವರಂ ಕೆಫೆಯಲ್ಲಿ ಡಸ್ಟ್ಬಿನ್ಗಳನ್ನು ಮುಚ್ಚಳದಿಂದ ಮುಚ್ಚಿಲ್ಲ ಎಂಬುದು ವರದಿಯಾಗಿದೆ.

ನೈರ್ಮಲ್ಯ ಮಾನದಂಡಗಳನ್ನು ನಿರ್ವಹಿಸದ ಕೆಫೆಗಳು!
ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಹೈದರಾಬಾದ್ನ ಅನೇಕ ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಅನೇಕ ಜನಪ್ರಿಯ ತಿನಿಸುಗಳು ನೈರ್ಮಲ್ಯ ಮಾನದಂಡಗಳನ್ನು ನಿರ್ವಹಿಸದಿರುವುದು ಕಂಡುಬಂದಿದೆ. ಅದೇ ದಿನ, ಬಾಹುಬಲಿ ಕಿಚನ್ ಹೆಸರಿನ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಲಾಯಿತು. ಅಲ್ಲಿ ಸ್ಟೋರ್ ಮಾಡಿದ್ದ ಆಹಾರ ಪದಾರ್ಥಗಳಲ್ಲಿ ಜಿರಳೆಗಳು ಕಂಡುಬಂದಿವೆ. ರೆಸ್ಟೋರೆಂಟ್ನ ಅಡುಗೆ ಕೋಣೆ ತುಂಬಾ ಅನೈರ್ಮಲ್ಯದಿಂದ ಕೂಡಿದ್ದು, ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಬೆಂಗಳೂರು ಮೂಲದ ರಾಮೇಶ್ವರಂ ಕೆಫೆ ಇತ್ತೀಚೆಗೆ ತನ್ನ ಕ್ವಿಕ್ ಸರ್ವಿಸ್ ರೆಸ್ಟೊರೆಂಟ್ (ಕ್ಯೂಎಸ್ಆರ್) ವಿಸ್ತರಿಸಿದೆ. ಈ ವರ್ಷದ ಜನವರಿಯಲ್ಲಿ ಹೈದರಾಬಾದ್ನ ಮಾದಾಪುರ ಪ್ರದೇಶದಲ್ಲಿ ಹೊಸ ಬ್ರಾಂಚ್ ಪ್ರಾರಂಭಿಸಲಾಯಿತು. ಕೆಫೆಯಲ್ಲಿನ ತುಪ್ಪದ ಇಡ್ಲಿಗಳು ಮತ್ತು ಮಸಾಲಾ ದೋಸೆಗಳಿಗೆ ಸಾವಿರಾರು ಮಂದಿ ಫ್ಯಾನ್ಸ್ ಇದ್ದಾರೆ.
ಸಂಪೂರ್ಣ ಜನಸಂದಣಿಯಿಂದ ಕೂಡಿರುವ ಈ ರೆಸ್ಟೊರೆಂಟ್ಗೆ ಅನೇಕ ಸೆಲೆಬ್ರಿಟಿಗಳು ಆಗಾಗ ಭೇಟಿ ನೀಡುತ್ತಿರುತ್ತಾರೆ. ಇನ್ನು, ಇತ್ತೀಚೆಗೆ ಬೆಂಗಳೂರಿನ ಕುಂದಲಹಳ್ಳಿ ಶಾಖೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ರಾಮೇಶ್ವರಂ ಕೆಫೆ ಸಕತ್ ಸುದ್ದಿಯಾಗಿತ್ತು. ಮಾರ್ಚ್ 1 ರಂದು ಬೆಂಗಳೂರಿನಲ್ಲಿ ಸಂಭವಿಸಿದ ಈ ಬಾಂಬ್ ಸ್ಫೋಟದಲ್ಲಿ 10 ಜನರು ಗಾಯಗೊಂಡಿದ್ದರು.












Click it and Unblock the Notifications