ಶ್ರೀನಗರದ ಕುಪ್ವಾರದಲ್ಲಿ ಹಿಮದಲ್ಲಿ ಸಿಲುಕಿಕೊಂಡ ಐವರು ಸೈನಿಕರು
ಶ್ರೀನಗರ, ಜನವರಿ 28: ಶ್ರೀನಗರದಿಂದ 100 ಕಿಲೋಮೀಟರ್ ದೂರದಲ್ಲಿರುವ ಉತ್ತರ ಕಾಶ್ಮೀರದ ಮಚಲಿ ವಲಯ ವ್ಯಾಪ್ತಿಯ ಕುಪ್ವಾರದಲ್ಲಿ ಶನಿವಾರ ಐವರು ಸೈನಿಕರು ಹಿಮದಲ್ಲಿ ಸಿಲುಕಿಕೊಂಡಿದ್ದಾರೆ. ಪಹರೆಯಲ್ಲಿದ್ದ ಐವರು ಸೈನಿಕರು ಹಿಮದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಶ್ರೀನಗರ ಮೂಲದ ವಕ್ತಾರರೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.
ಹಿಮದಲ್ಲಿ ಸಿಲುಕಿದ ಸೈನಿಕರ ಪತ್ತೆ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತಂಡ ಆರಂಭಿಸಿದೆ ಎಂದು ಅವರು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯದ ಕಾರಣಕ್ಕೆ ರಕ್ಷಣಾ ಕಾರ್ಯಾಚರಣೆಗೂ ತೊಂದರೆಯಾಗುತ್ತಿದೆ. ಗಡಿ ನಿಯಂತ್ರಣ ರೇಖೆಯ ಸಮೀಪದಲ್ಲೇ ಮಚಲಿ ವಲಯವಿದೆ. ಈ ಮಾರ್ಗವನ್ನು ಉಗ್ರರು ದೇಶದೊಳಕ್ಕೆ ನುಗ್ಗಲು ಬಳಸುತ್ತಾರೆ.[ಜನರ ಜೀವ ಕಸಿಯುತ್ತಿದೆ ಜಮ್ಮು-ಕಾಶ್ಮೀರದ ಹಿಮ ಕುಸಿತ!]
ಕಳೆದ ವರ್ಷ ಪಾಕ್ ಹಾಗೂ ಭಾರತದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಾಗ ಪಾಕಿಸ್ತಾನವು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪ್ರದೇಶವಿದು. ಜನವರಿ 25ರಿಂದ ಈಚೆಗೆ ಕಣಿವೆ ರಾಜ್ಯದಲ್ಲಿನ ಹಿಮ ಕುಸಿತಕ್ಕೆ ಹದಿನೈದು ಸೈನಿಕರು ಸೇರಿದಂತೆ ಇಪ್ಪತ್ತೊಂದು ಮಂದಿ ಪ್ರಾಣಾ ಬಿಟ್ಟಿದ್ದಾರೆ.