ಬಂಧಿತರಾಗಿರುವ ಐವರು ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು?
ನವದೆಹಲಿ, ಆಗಸ್ಟ್ 29: ಮಾವೋವಾದಿಗಳ ಜತೆ ನಂಟು ಶಂಕೆ, ಪ್ರಧಾನಿ ಹತ್ಯೆ ಸಂಚು ಶಂಕೆ, ಭೀಮಾ ಕೊರೆಗಾವ್ ಹಿಂಸಾಚಾರಕ್ಕೆ ಕುಮ್ಮಕ್ಕು ಹೀಗೆ ಹಲವು ಕಾರಣಗಳಡಿ ಹಲವು ವಿಚಾರವಾದಿಗಳನ್ನು ಏಕಾ-ಏಕಿ ನಿನ್ನೆ ಬಂಧಿಸಲಾಗಿದೆ. ಇದರ ವಿರುದ್ಧ ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಆಂಧ್ರಪ್ರದೇಶದ ಕ್ರಾಂತಿಕಾರಿ ಕವಿ ವರವರ ರಾವ್. ವಕೀಲೆ, ನಾಗರೀಕ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರಧ್ವಜ್. ವಿರ್ನೋನ್ ಗೋನ್ಸಾಲ್ವೀಸ್, ಅರುಣ್ ಫರೇರಿಯಾ, ಗೌತಮ್ ನಾಲ್ವಾಕ್ಕಾ ಅವರುಗಳನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಏನಿದು ಭೀಮಾ ಕೊರೆಗಾಂವ್ ವಿವಾದ? ವಿಚಾರವಾದಿಗಳ ಬಂಧನ ಏಕೆ?
ದೇಶದಾದ್ಯಂತ ವಿಚಾರವಾದಿಗಳು ಬಂಧನದ ವಿರುದ್ಧ ಧನಿ ಎತ್ತಿದ್ದಾರೆ. ಸಾಮಾಜಿಕ ಹೋರಾಟಗಾರರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಬಂಧಿತರಾದ ಈ ವಿಚಾರವಾದಿಗಳು ಯಾರು, ಅವರ ಹಿನ್ನೆಲೆ ಏನು, ಬಂಧಿಸಲು ಕಾರಣವೇನು ಎಂಬ ಮಾಹಿತಿ ಇಲ್ಲಿದೆ ನೋಡಿ...
ಕ್ರಾಂತಿಕಾರಿ ಕವಿ ವರವರ ರಾವ್ ಬಂಧನ
ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಕ್ರಾಂತಿಕಾರಿ ಕವಿಯೆಂದು ಗುರುತಿಸಿಕೊಂಡಿರುವ ವರವರರಾವ್ ಅವರನ್ನು ನಿಷೇಧಿತ ಮಾವೋವಾದಿಗಳ ಜೊತೆ ಸಂಪರ್ಕ ಶಂಕೆ ಮತ್ತು ಮೋದಿ ಹತ್ಯೆ ಸಂಚು ಆರೋಪಗಳ ಮೇಲೆ ಹೈದರಾಬಾದ್ನ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಪತ್ರಕರ್ತರೂ ಆಗಿರುವ ಇವರು ಈ ಹಿಂದೆಯೂ ಕೆಲವು ಬಾರಿ ಸರ್ಕಾರದ ವಿರುದ್ಧ ಹೇಳಿಕೆ, ಧಂಗೆ ಏಳಿಸುವ ಭಾಷಣಗಳಿಗಾಗಿ ಬಂಧಿತರಾಗಿದ್ದಾರೆ. ಇವರು ಕಟ್ಟಿದ್ದ 'ವಿರಸಂ' ಎಂಬ ಕ್ರಾಂತಿಕಾರಿ ಲೇಖಕರ ಸಂಘವನ್ನು ಸಹ ಆಂಧ್ರ ಸರ್ಕಾರ ನಿಷೇಧಿಸಿತ್ತು.
ಬಡವರ ವಕೀಲೆ ಸುಧಾ ಭಾರಧ್ವಾಜ್
ಅಮೆರಿಕದ ಪೌರತ್ವವನ್ನು ತೊರೆದು ಭಾರತಕ್ಕೆ ಬಂದ ಸುಧಾ ಭಾರಧ್ವಾಜ್ ಅವರು, ಬಡವರ ವಕೀಲೆ ಎಂದೇ ಚಿರಪರಿಚಿತರು. ಚತ್ತೀಸ್ಘಡದ ನಿವಾಸಿಯಾಗಿದ್ದ ಇವರು, ನಾಗರೀಕ ಹಕ್ಕುಗಳ ಹೋರಾಟಗಾರ್ತಿಯಾಗಿದ್ದರು, ಅಲ್ಲದೆ ಕೂಲಿ ಕಾರ್ಮಿಕರ, ಬಡವರ ಕೇಸುಗಳನ್ನು ಉಚಿತವಾಗಿ ಹೋರಾಡುತ್ತಿದ್ದರು. ಅತ್ಯಂತ ಸರಳವಾಗಿದ್ದ ಸುಧಾ ಭಾರಧ್ವಾಜ್ ಅವರನ್ನು ಬಡವರ ವಕೀಲೆ ಎಂದೆ ಕರೆಯಲಾಗುತ್ತಿತ್ತು. ಐಐಟಿ ಕಾನ್ಪುರದಲ್ಲಿ ಕಲಿತಿದ್ದ ಅವರು ವಕೀಲಿಕೆ ವೃತ್ತಿ ಮಾಡುತ್ತಿದ್ದರು.
ದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸ
60 ವರ್ಷದ ವೆರ್ನೋನ್ ಗೊನ್ಸಾಲ್ವೇಸ್ ಬಂಧನ
60 ವರ್ಷದ ವೆರ್ನೋನ್ ಗೊನ್ಸಾಲ್ವೇಸ್ ಅವರು ಮೋದಿ ಹತ್ಯೆ ಸಂಚಿನ ಆರೋಪದಲ್ಲಿ ಬಂಧಿತರಾಗಿದ್ದಾರೆ. ಈ ಹಿಂದೆಯೂ ಅವರು 2014ರಲ್ಲಿ ಮಾವೋವಾದಿಗಳ ಜತೆ ನಂಟಿನ ಆರೋಪದಲ್ಲಿ ಬಂಧಿತರಾಗಿದ್ದರು. ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲೂ ಅವರನ್ನು ಬಂಧಿಸಲಾಗಿತ್ತು. ಅವರ ಮೇಲೆ ದಾಖಲಾಗಿದ್ದ 20 ಪ್ರಕರಣಗಳಲ್ಲಿ 17ರಲ್ಲಿ ಅವರು ಖುಲಾಸೆಯಾದರು. ಅವರು ಮುಂಬೈ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕ ವಿಜೇತ ವಿದ್ಯಾರ್ಥಿಯಾಗಿದ್ದರು. ಗೊನ್ಸಾಲ್ವೇಸ್ ಅವರನ್ನು ಅವರ ಪುಣೆಯ ಮನೆಯಿಂದ ಬಂಧಿಸಲಾಗಿದೆ.
ಸಾಹಿತಿ, ವಕೀಲ ಅರುಣ್ ಫೆರೇರಿಯಾ ಬಂಧನ
ಮುಂಬೈನಲ್ಲಿ ವಕೀಲಿ ವೃತ್ತಿ ಮಾಡುತ್ತಿರುವ ಸಾಮಾಜಿಕ ಹೋರಾಟಗಾರ ಅರುಣ್ ಫೆರೇರಿಯಾ ಅವರು, ವ್ಯಂಗ್ಯಚಿತ್ರಕಾರ, ಸಾಹಿತಿಯೂ ಆಗಿದ್ದಾರೆ. ನಕ್ಸಲ್ ಜೊತೆ ನಂಟು ಹೊಂದಿರುವ ಆರೋಪದಲ್ಲಿ ಅವರನ್ನು 2007 ರಲ್ಲಿ ಬಂಧಿಸಲಾಗಿತ್ತು. ಆ ನಂತರ 2011 ರಲ್ಲಿ ಅವರು ಎಲ್ಲ ಪ್ರಕರಣದಿಂದ ಖುಲಾಸೆಯಾದರು. ಅವರು ಜೈಲಿನಲ್ಲಿದ್ದ ಸಮಯ ಬರೆದ ಪುಸ್ತಕ 'ಕಲರ್ಸ್ ಆಫ್ ಕೇಜ್' ಜನಪ್ರಿಯಗೊಂಡಿತ್ತು. ಅವರನ್ನು ಮುಂಬೈನ ಅವರ ನಿವಾಸದಿಂದ ಬಂಧಿಸಲಾಗಿದೆ.
ಮಾವೋವಾದಿ ಜತೆ ನಂಟು ಶಂಕೆ, ಹಲವು ವಿಚಾರವಾದಿಗಳ ಬಂಧನ, ಆಕ್ರೋಶ
ನಾಗರೀಕ ಹಕ್ಕುಗಳ ಹೋರಾಟಗಾರ ಗೌತಮ್ ನಾವ್ಲಾಖಾ
ಪತ್ರಕರ್ತ, ನಾಗರೀಕ ಹಕ್ಕುಗಳ ಹೋರಾಟಗಾರ ಗೌತಮ್ ನಾಲ್ವಾಖಾ ಅವರು ಕಾಶ್ಮೀರಲ್ಲಿ ಆಗುತ್ತಿರುವ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಹಲವಾರು ಬರೆದಿದ್ದಾರೆ. ಸಾಕಷ್ಟು ಬಾರಿ ಕಾಶ್ಮೀರಕ್ಕೆ ಭೇಟಿ ನೀಡುವ ಇವರು, ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯನ್ನು ರದ್ದು ಗೊಳಿಸುವ ಬಗ್ಗೆಯೂ ಧನಿ ಎತ್ತಿದ್ದರು. ಎಕಾನಾಮಿಕ್ ಪೊಲಿಟಿಕಲ್ ವೀಕ್ಲಿಯ ಸಂಪಾದಕ ಸಲಹೆಗಾರರು ಆಗಿರುವ ಇವರು ದೆಹಲಿ ನಿವಾಸಿ ಆಗಿದ್ದಾರೆ.