ತೆರಿಗೆದಾರರಿಗೆ ವಿನಾಯಿತಿ: ಇಂದು ಮಸೂದೆ ಮಂಡಿಸಲಿರುವ ನಿರ್ಮಲಾ ಸೀತಾರಾಮನ್
ನವದೆಹಲಿ, ಸೆಪ್ಟೆಂಬರ್ 17: ತೆರಿಗೆದಾರರು ಒಳಗಾಗುತ್ತಿರುವ ಕಿರುಕುಳಗಳಿಂದ ನೆಮ್ಮದಿ ಪಡೆಯಲು ರಿಲೀಫ್ ಟು ಟ್ಯಾಕ್ಸ್ ಪೇಯರ್ಸ್ ಮಸೂದೆಯನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮ್ ಗುರುವಾರ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತೆರಿಗೆ ಸಂದಾಯ ಮತ್ತು ಇತರೆ ಕಾನೂನುಗಳ ಮಸೂದೆ (ಕೆಲವು ನಿಯಮಗಳ ಸಡಿಲಿಕೆ ಹಾಗೂ ತಿದ್ದುಪಡಿ) 2020ಯನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಈ ಮಸೂದೆಯ ಮೂಲಕ ತೆರಿಗೆದಾರರಿಗೆ ನಿರಾಳತೆ ನೀಡುವುದು ಕೇಂದ್ರ ಸರ್ಕಾರದ ಉದ್ದೇಶ. ಹಾಗೆಯೇ ಇದರಲ್ಲಿ ತೆರಿಗೆ ವಿನಾಯಿತಿಗಳೂ ಇರಲಿದೆ.
ಆದಾಯ ತೆರಿಗೆ ಕಾಯ್ದೆಯಲ್ಲಿನ ಕೆಲವು ಕಟ್ಟುಪಾಡುಗಳನ್ನು ಈ ಮಸೂದೆ ಸಡಿಲಿಸಲಿದೆ. ಮುಖ್ಯವಾಗಿ ತೆರಿಗೆದಾರರಿಗೆ ಹೆಚ್ಚಿನ ವಿನಾಯಿತಿಗಳನ್ನು ಪಡೆಯುವ ಅವಕಾಶ ಸಿಗಲಿದೆ. ಕೊರೊನಾ ವೈರಸ್ ನಿರ್ವಹಣೆಗಾಗಿ ಸ್ಥಾಪಿಸಲಾಗಿರುವ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡುವವರು ಕೂಡ ತೆರಿಗೆ ವಿನಾಯಿತಿಯ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ಕೊರೊನಾ ವೈರಸ್ ಕಾರಣದಿಂದಾಗಿ ಅನೇಕ ಆರ್ಥಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಸಣ್ಣ ಕಾರ್ಮಿಕರಿಂದ ಹಿಡಿದು ದೊಡ್ಡ ಪ್ರಮಾಣದ ತೆರಿಗೆದಾರರವರೆಗೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತೆರಿಗೆ ಪಾವತಿಯಲ್ಲಿ ನೀಡಲಾಗುವ ವಿನಾಯಿತಿಗಳು ತೆರಿಗೆದಾರರಿಗೆ ಸ್ವಲ್ಪ ನೆಮ್ಮದಿ ನೀಡಲಿವೆ.
ತೆರಿಗೆದಾರರ ಅನುಕೂಲಕ್ಕಾಗಿ ತೆರಿಗೆ ಪಾವತಿ ಗಡುವಿನ ವಿಸ್ತರಣೆ, ಅವಧಿ ಮುಗಿದ ಬಳಿಕವೂ ಪಾವತಿಸಿದ ತೆರಿಗೆ ಮೇಲಿನ ಬಡ್ಡಿ ಅಥವಾ ದಂಡದ ವಿನಾಯಿತಿಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು. ಈ ಸಂಬಂಧ ಮಾರ್ಚ್ 31ರಂದು ವಿಶೇಷ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು. ಈ ಸುಗ್ರೀವಾಜ್ಞೆ ಈಗ ಕಾನೂನಾಗಿ ಬದಲಾಗುತ್ತಿದೆ.
ಕರಡು ಮಸೂದೆಯನ್ನು ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಕೇಂದ್ರ ಸರ್ಕಾರದ ತೆರಿಗೆಗಳು ಹಾಗೂ ಇತರೆ ಕಾನೂನುಗಳು (ವಿನಾಯಿತಿ, ಕೆಲವು ನಿಯಮಗಳಿಗೆ ತಿದ್ದುಪಡಿ) 2020 ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡಲ್ಲಿಯೂ ಅನುಮೋದನೆ ಪಡೆದುಕೊಳ್ಳಬೇಕಿದೆ. ಪ್ರಸ್ತುತ ಇರುವ ಸುಗ್ರೀವಾಜ್ಞೆಯ ಜಾಗದಲ್ಲಿ ಕಾನೂನು ಜಾರಿಯಾಗಲಿದೆ.












Click it and Unblock the Notifications